ಕನ್ನಡಪ್ರಭ ವಾರ್ತೆ ದೇವರಹಿಪ್ಪರಗಿ
ಪಟ್ಟಣದಲ್ಲಿ ಗುರುವಾರ ಡಾ.ಅಂಬೇಡ್ಕರ್ ವೃತ್ತದಿಂದ ತಹಸೀಲ್ದಾರ್ ಕಚೇರಿಗೆ ಆಗಮಿಸಿದ್ದ ಜೆಎಂಜೆ ಸಂಸ್ಥೆ ಹಾಗೂ ವಿವಿಧ ಪ್ರಗತಿಪರ ಸಂಘಟನೆಗಳ ಸಂಘದ ಪ್ರತಿಭಟನಾಕಾರರು ಪ್ರತಿಭಟಿಸಿ ತಹಸೀಲ್ದಾರ್ ಪ್ರಕಾಶ ಸಿಂದಗಿಗೆ ಮನವಿ ಸಲ್ಲಿಸಿ ಸರ್ಕಾರಕ್ಕೆ ಆಗ್ರಹಿಸಿದರು.ಮುಖಂಡರಾದ ಶ್ರೀನಾಥ ಪೂಜಾರಿ, ಭೋಗೇಶ ಸೋಲಾಪುರ ಹಾಗೂ ಪ್ರಕಾಶ ಗುಡಿಮನಿ ಮಾತನಾಡಿ, ಸರ್ಕಾರದ ಮಟ್ಟದಲ್ಲಿ ಪಿಪಿಪಿ ಮಾದರಿಯಲ್ಲಿ ವೈದ್ಯಕೀಯ ಕಾಲೇಜು ಸ್ಥಾಪನೆ ಮಾಡಬೇಕೆಂದು ಹುನ್ನಾರ ನಡೆದಿದೆ. ಜಿಲ್ಲೆಯಲ್ಲಿ ಹಲವು ಶಾಸಕರು ಈ ಕುರಿತು ವಿರೋಧ ವ್ಯಕ್ತಪಡಿಸಿಲ್ಲ. ತಿಂಗಳಾದರೂ ಉಸ್ತುವಾರಿ ಸಚಿವರು ಸರ್ಕಾರದ ಉದ್ದೇಶ ತಿಳಿಸಿಲ್ಲ, ಶಾಸಕರು ಒಬ್ಬರು ಬಂಡವಾಳ ಹೂಡುವುದಾಗಿ ವಿಧಾನಸಭೆಯಲ್ಲಿ ಭರವಸೆ ನೀಡಿದ್ದಾರೆ ಇದು ಸಲ್ಲದು. ಸರ್ಕಾರಿ ವೈದ್ಯಕೀಯ ಕಾಲೇಜ ನಿರ್ಮಾಣಕ್ಕೆ ಜಿಲ್ಲೆಯ ಪ್ರತಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಪ್ರತಿಭಟನೆ ಹಮ್ಮಿಕೊಂಡು ಸರ್ಕಾರಕ್ಕೆ ಬಿಸಿ ಮುಟ್ಟಿಸುತ್ತೇವೆ ಎಂದ ಪ್ರತಿಭಟನಾಕಾರರು, ಪಿಪಿಪಿ ಮಾದರಿಯ ವೈದ್ಯಕೀಯ ಕಾಲೇಜು ಸ್ಥಾಪನೆ ಮಾತ್ರ ಬೇಡ ಎಂದು ಆಗ್ರಹಿಸಿದರು.
ಇದೇ ವೇಳೆ ಮುಖಂಡರಾದ ರಾವುತ್ ತಳಕೇರಿ, ಶಂಕರಗೌಡ ಹಿರೇಗೌಡ, ಸುನಂದಾ ಸೊನ್ನಳ್ಳಿ, ರಹೀಮಾನ ಕನಕಲ್, ರಶ್ಮಿ ಗುತ್ತೇದಾರ, ಝೇವಿಯರ ಈಗಲಪಾಟಿ ಸೇರಿದಂತೆ ಸ್ಪಂದನಾ ತಾಲೂಕು ಸ್ವ ಸಹಾಯ ಸಂಘಗಳ ಹಾಗೂ ಪ್ರಗತಿಪರ ಸಂಘಟನೆಗಳ ಪದಾಧಿಕಾರಿಗಳು, ಮಹಿಳೆಯರು ಹಾಗೂ ಕಾರ್ಯಕರ್ತರು ಇದ್ದರು.