ಪರವಾನಿಗೆ ರದ್ದುಗೊಳಿಸದಿದ್ದಲ್ಲಿ ಗ್ರಾಪಂ ಕಾರ್ಯಾಲಯಕ್ಕೆ ಬೀಗ ಜಡಿಯುವ ಎಚ್ಚರಿಕೆಕನ್ನಡಪ್ರಭ ವಾರ್ತೆ ಅಂಕೋಲಾ
ಯಾವುದೇ ಗ್ರಾಮದಲ್ಲಿ ಹೊಸ ಹೊಸ ಯೋಜನೆಗಳು ಸಿದ್ಧಗೊಳ್ಳುವಾಗ ಗ್ರಾಮಸ್ಥರ ಅಹವಾಲನ್ನು ಆಲಿಸಬೇಕಾಗುತ್ತದೆ. ಸುಳ್ಳು ಪ್ರಮಾಣ ಪತ್ರ ನೀಡಿ, ಪರಿಸರ ಇಲಾಖೆಯಿಂದ ಪರವಾನಿಗೆ ತೆಗೆದುಕೊಳ್ಳುವ ಹುನ್ನಾರ ನಡೆಸಿರುವುದು ನಾಚಿಕೆಗೇಡು. ನಾವು ವ್ಯಕ್ತಿಯ ವಿರುದ್ಧ ಯಾವುದೇ ವಿಚಾರಕ್ಕೂ ಮಾತನಾಡುವುದಿಲ್ಲ. ಆದರೆ ಇಲ್ಲಿ ನಿರ್ಮಾಣಗೊಳ್ಳುತ್ತಿರುವ ಮೀನಿನ ಸಂಸ್ಕರಣಾ ಘಟಕದ ಕುರಿತು. ಧ್ವನಿ ಎತ್ತುತ್ತಿದ್ದೇವೆ. ಈ ಘಟಕ ನಿರ್ಮಾಣಕ್ಕೆ ಯಾವುದೇ ಕಾರಣಕ್ಕೂ ನಾವು ಒಪ್ಪಿಗೆ ನೀಡುವುದಿಲ್ಲ ಎಂದು ಗ್ರಾಮಸ್ಥರು ಆಗ್ರಹಿಸಿದರು.
ಗ್ರಾಮ ಸಭೆ, ವಾರ್ಡ ಸಭೆಯನ್ನು ನಡೆಸದೆ ಈ ಗ್ರಾಪಂನ ನಿರ್ಗಮಿತ ಆಡಳಿತ ಮಂಡಳಿಯವರು ಈ ಮೀನಿನ ಸಂಸ್ಕರಣಾ ಘಟಕಕ್ಕೆ ಪರವಾನಿಗೆ ಅನುಮತಿ ನೀಡಿದ್ದಾರೆ.ತಕ್ಷಣ ಈ ಘಟಕವನ್ನು ಸ್ಥಗಿತಗೊಳಿಸಬೇಕು. ಯಾವುದೇ ಕಾರಣಕ್ಕೂ ಇಲ್ಲಿ ಮೀನಿನ ಘಟಕ ನಿರ್ಮಾಣವಾಗಕೂಡದು ಎಂದು ಈ ಯೋಜನೆಗೆ ಧಿಕ್ಕಾರ ಕೂಗಿ ಅನಪೇಕ್ಷಣಾ ಪ್ರಮಾಣ ಪತ್ರವನ್ನು ನೀಡಿದ ಗ್ರಾಪಂ ವಿರುದ್ಧವು ಧಿಕ್ಕಾರ ಕೂಗಿದರು.
ಈ ಸಂದರ್ಭ ಪಿಎಸ್ಐ ವಿಶ್ವನಾಥ ನಿಂಗೊಳ್ಳಿ ವಾತಾವರಣವನ್ನು ತಿಳಿಗೊಳಿಸಿದರು. ಗ್ರಾಪಂ ಅಭಿವೃದ್ಧಿ ಅಧಿಕಾರಿ ಪೂರ್ಣಿಮಾ ಗೌಡ ಸಾಧಕ-ಭಾದಕಗಳ ಕುರಿತು ಮಾಹಿತಿ ನೀಡಿದರೂ. ಆಗಮಿಸಿದ ಪ್ರತಿಭಟನಾಕಾರರ ಗದ್ದಲದ ನಡುವೆ ಮಾತುಗಳು ಕೇಳದಾದವು.
ಈ ಸಂದರ್ಭ ಸಂತೋಷ ಟಾಕೇಕರ, ಶ್ರೀಕಾಂತ ನಾಯ್ಕ, ಉಮೇಶ ದುರ್ಗೇಕರ, ಮಧುಕರ ದುರ್ಗೇಕರ, ಮಂಜುನಾಥ ಟಾಕೇಕರ, ಅನುಸುಯಾ ದುರ್ಗೇಕರ, ವಿನೋದ ನಾಯ್ಕ ಸುರೇಂದ್ರ ದುರ್ಗೇಕರ, ಸೂರ್ಯಕಾಂತ ಭೂತೆ.ಲೋಕು ದುರ್ಗೇಕರ, ತುಕಾರಾಮ ಸಾಧಿಯೇ ಸೇರಿದಂತೆ ಗ್ರಾಪಂ ಮಾಜಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಹಾರವಾಡ, ಅವರ್ಸಾ, ಹಟ್ಟಿಕೇರಿ ಭಾಗದ ನಾಗರಿಕರು ಈ ಸಭೆಗೆ ಪಾಲ್ಗೊಂಡು ಮೀನಿನ ಸಂಸ್ಕರಣಾ ಘಟಕಕ್ಕೆ ವಿರೋಧ ವ್ಯಕ್ತಪಡಿಸಿದರು.ಸಾರ್ವನಿಕರಿಗೆ ಸಮಸ್ಯೆಯಾಗುತ್ತದೆ ಎಂದರೆ ಅಂತಹ ಯೋಜನೆಗಳಿಗೆ ನಾವು ಸಹಮತಿ ನೀಡುವುದಿಲ್ಲ. ಯಾವುದೇ ಕಾರಣಕ್ಕೂ ಇನ್ನೂ ಮುಂದೆ ಮೀನಿನ ಘಟಕಕ್ಕೆ ಸಂಬಂಧಿಸಿದ ಕಾಮಗಾರಿಗಳು ನಡೆಯದಂತೆ ಮೇಲಾಧಿಕಾರಿಗಳಿಗೆ ಪತ್ರ ಬರೆಯುತ್ತೇವೆ. ಸಾವಿರಾರು ನಾಗರಿಕರ ವಿರೋಧ ಇರುವುದರಿಂದ. ಈ ಯೋಜನೆಗೆ ಗ್ರಾಪಂ ನೀಡಿದ ಆನಪೇಕ್ಷಣಾ ಪ್ರಮಾಣ ಪತ್ರವನ್ನು ಹಿಂಪಡೆಯುತ್ತೇವೆ ಎನ್ನುತ್ತಾರೆ ಹಾರವಾಡ ಗ್ರಾಪಂ ಅಭಿವೃದ್ಧಿ ಅಧಿಕಾರಿ ಪೂರ್ಣಿಮಾ ಗೌಡ.