ಶಿಗ್ಗಾಂವಿ: ತಾಲೂಕಿನ ಬಂಕಾಪುರ ತಾಲೂಕು ಕೇಂದ್ರ ಆಗಲು ಎಲ್ಲ ಅರ್ಹತೆಗಳಿದ್ದು, ಶಾಸಕರ ನೇತೃತ್ವದಲ್ಲಿ ಸರ್ಕಾರದ ಗಮನ ಸೆಳೆಯಲು ಪ್ರತಿಯೊಬ್ಬರ ಸಹಕಾರ ಅವಶ್ಯವಾಗಿದೆ ಎಂದು ತಾಲೂಕು ಪುನರುತ್ಥಾನ ಹೋರಾಟ ಸಮಿತಿಯ ಪ್ರಧಾನ ಕಾರ್ಯದರ್ಶಿ ಎ.ಕೆ. ಅದ್ವಾನಿಮಠ ಹೇಳಿದರು.
ತಾಲೂಕಿನ ಬಂಕಾಪುರ ಪಟ್ಟಣದಲ್ಲಿ ನಡೆದ ಬಂಕಾಪುರ ತಾಲೂಕು ಪುನರುತ್ಥಾನ ಹೋರಾಟ ಸಮಿತಿ ಸಭೆ ನೇತೃತ್ವ ವಹಿಸಿ ಅವರು ಮಾತನಾಡಿದವರು. ೧೯೬೧ರ ವರೆಗೆ ತಾಲೂಕು ಕೇಂದ್ರವಾಗಿದ್ದ ಬಂಕಾಪುರ ಪಟ್ಟಣವನ್ನು ಮತ್ತೆ ತಾಲೂಕು ಮಾಡಬೇಕಾಗಿದೆ. ಹೊಸ ತಾಲೂಕು ಅಲ್ಲ, ಇದ್ದ ತಾಲೂಕನ್ನು ಮರಳಿ ನೀಡಿ ಎಂದು ಸರ್ಕಾರ ಮಟ್ಟದಲ್ಲಿ ಒತ್ತಾಯಿಸುವುದು ಮುಖ್ಯವಾಗಿದೆ. ಹೀಗಾಗಿ ಬಂಕಾಪುರ ಹೋಬಳಿ ಮಟ್ಟದ ಪ್ರತಿ ಗ್ರಾಮಗಳ ಜನರು ಪಕ್ಷಾತೀತ ಬೆಂಬಲ ವ್ಯಕ್ತಪಡಿಸುವುದು ಅವಶ್ಯವಾಗಿದೆ. ಅದರಿಂದಾಗಿ ನಮ್ಮ ಬೇಡಿಕೆ ಈಡೇರಲು ಸಾಧ್ಯವಿದೆ ಎಂದರು.ಶಾಸಕ ಯಾಸೀರ್ ಅಹ್ಮದಖಾನ್ ಪಠಾಣ ಅವರು ಬರುವ ವಿಧಾನಸಭೆ ಅಧಿವೇಶನದಲ್ಲಿ ಚರ್ಚಿಸಬೇಕು. ಅಧಿವೇಶನ ನಡೆದ ಸಂದರ್ಭದಲ್ಲಿ ಬಂಕಾಪುರ ಹೋರಾಟ ಸಮಿತಿ ಸದಸ್ಯರು, ಬಂಕಾಪುರ ಮುಖಂಡರು, ಪುರಸಭೆ ಸದಸ್ಯರು ಮುಖ್ಯಮಂತ್ರಿಗೆ ಮನವಿ ನೀಡುವರು. ಅದಕ್ಕೆ ಶಾಸಕರು ಅವಕಾಶ ಕಲ್ಪಿಸಬೇಕು ಎಂದರು.
ತಾಲೂಕು ಪುನರುತ್ಥಾನ ಹೋರಾಟ ಸಮಿತಿ ಸಂಸ್ಥಾಪಕ ಸಂಚಾಲಕ ಅಬ್ದುಲರಜಾಕ ತಹಶೀಲ್ದಾರ, ಮಂಜುನಾಥ ಕೂಲಿ, ರಾಮಕೃಷ್ಣ ಆಲದಕಟ್ಟಿ, ಪುರಸಭೆ ಅಧ್ಯಕ್ಷೆ ಮಮತಾ ಮಾಗಿ, ಉಪಾಧ್ಯಕ್ಷ ಆಂಜನೇಯ ಗುಡಿಗೇರಿ, ಸ್ಥಾಯಿ ಸಮಿತಿ ಅಧ್ಯಕ್ಷ ಅಯೂಬಖಾನ್ ಪಠಾಣ ಇದ್ದರು.ಮನವಿ ಸ್ವೀಕರಿಸಿದ ಶಾಸಕ ಯಾಸೀರ್ ಅಹ್ಮದಖಾನ್ ಪಠಾಣ ಮಾತನಾಡಿ, ಬಂಕಾಪುರ ಪಟ್ಟಣವು ತಾಲೂಕು ಕೇಂದ್ರವಾಗಲು ಸೂಕ್ತವಾಗಿದೆ. ಇದರ ಕುರಿತು ವಿಧಾನಸಭೆ ಅಧಿವೇಶನದಲ್ಲಿ ಚರ್ಚಿಸುವೆ. ಮುಖ್ಯಮಂತ್ರಿ ಹಾಗೂ ವಿವಿಧ ಸಚಿವರಿಗೆ ಮನವಿ ಸಲ್ಲಿಸೋಣ ಎಂದು ಹೇಳಿದರು.