ಕನ್ನಡಪ್ರಭ ವಾರ್ತೆ, ಚಾಮರಾಜನಗರ
ಒಂದು ರಾಷ್ಟ್ರದ ಅಭಿವೃದ್ಧಿಗೆ ಕೈಗಾರಿಕೆಗಳು ಬಹು ಮುಖ್ಯವಾಗಿದ್ದು. ಶೇಕಡ 80 ರಿಂದ 85 ರಷ್ಟು ಐ.ಟಿ.ಐ. ಡಿಪ್ಲೋಮೊ, ಎಂಜಿನಿಯರಿಂಗ್ ವಿದ್ಯಾರ್ಥಿಗಳು ಕೆಲಸ ನಿರ್ವಹಿಸುತ್ತಿದ್ದಾರೆ. ಭಾರತೀಯ ಉದ್ಯಮವು ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳೆಯಬೇಕಾದರೆ ಕೌಶಲ್ಯಕ್ಕೆ ತಕ್ಕಂತೆ ಅವಕಾಶಗಳನ್ನು ಬಳಸಿಕೊಂಡು ಉತ್ತಮ ಕಾರ್ಯವೈಖರಿ ಬೆಳೆಸಿಕೊಂಡರೆ ಭವ್ಯ ಭಾರತ ರೂಪುಗೊಳ್ಳುತ್ತದೆ ಎಂದು ಶ್ರೀಕಂಠಾರಾಧ್ಯ ಅವರು ತಿಳಿಸಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಬಳಿಕ ಪ್ರಾತ್ಯಕ್ಷಿಕೆ ಮೂಲಕ ವಿವರಿಸಿ ಮಾತನಾಡಿದ ಮರಿಯಾಲದ ಜೆಎಸ್ಎಸ್ ಕೈಗಾರಿಕಾ ತರಬೇತಿ ಸಂಸ್ಥೆಯ ಪ್ರಾಂಶುಪಾಲರಾದ ವೈ.ಎಂ. ರವಿಚಂದ್ರ, ಕಾರ್ಯಾಗಾರವು ವಿದ್ಯಾರ್ಥಿ ಮತ್ತು ಕಂಪನಿಗಳನ್ನು ಬೆಸೆಯುವ ಸೇತುವೆಯಾಗಿದೆ. ವಿದ್ಯಾರ್ಥಿಗಳ ಗೊಂದಲಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಇಂತಹ ಕಾರ್ಯಗಾರಗಳನ್ನು ಏರ್ಪಡಿಸಲಾಗಿದೆ ಎಂದರುಐಟಿಐ ವಿದ್ಯಾಭ್ಯಾಸ ಮುಗಿದ ನಂತರ ವಿದ್ಯಾರ್ಥಿಗಳಿಗೆ ಉತ್ತಮ ಮಾರ್ಗದರ್ಶನವಿಲ್ಲದೆ ಗುತ್ತಿಗೆ ಆಧಾರದ ಮೇಲೆ ಕೆಲಸಕ್ಕೆ ಸೇರಿಕೊಂಡು ತಮ್ಮ ಭವಿಷ್ಯವನ್ನು ಹಾಳು ಮಾಡಿಕೊಳ್ಳುವ ಬದಲಾಗಿ ಅಪ್ರೆಂಟಿಸ್ ತರಬೇತಿಗೆ ಸೇರುವ ಮೂಲಕ ಕಂಪನಿಗಳಿಗೆ ನಿಯೋಜನೆಗೊಂಡು ಪ್ರಮಾಣಪತ್ರ ಪಡೆದುಕೊಂಡರೆ ಭವಿಷ್ಯದಲ್ಲಿ ಬೇರೆ ಕಂಪನಿಗೆ ಹೋಗಲು ಸಹಾಯಕವಾಗುತ್ತದೆ. ಅಥವಾ ತರಬೇತಿ ಪಡೆದ ಕಂಪನಿಯಲ್ಲಿಯೇ ಖಾಯಂ ಉದ್ಯೋಗಿಯಾಗಿ ನಿಯೋಜಿಸಿಕೊಳ್ಳಬಹುದು. ಯುವ ಸಮೂಹ ಕೌಶಲ್ಯಗಳನ್ನು ಕಲಿತು ತರಬೇತಿಯ ಜೊತೆಗೆ ಕೆಲಸಗಳಲ್ಲಿ ತೊಡಗಿಸಿಕೊಳ್ಳುವುದರಿಂದ ದೇಶವನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಬೆಳೆಯಬಹುದು ಎಂದು ರವಿಚಂದ್ರ ಅವರು ತಿಳಿಸಿದರು.ಬದನಗುಪ್ಪೆ ಗ್ರಾಮ ಪಂಚಾಯತಿ ಅಧ್ಯಕ್ಷ ಮಲ್ಲೇಶ್ ಅವರು ಮಾತನಾಡಿ, ಉದ್ಯೋಗದಾತ ಕಂಪನಿಗಳು ಸ್ಥಳೀಯರಿಗೆ ಮೊದಲು ಆದ್ಯತೆ ನೀಡಬೇಕು. ದುಡಿಯುವ ವರ್ಗಕ್ಕೆ ವೇತನ ಹೆಚ್ಚಿಸಬೇಕು. ವಿದ್ಯಾಭ್ಯಾಸ ಹಾಗೂ ನುರಿತ ಕೌಶಲ್ಯ ಹೊಂದಿದ ಪ್ರತಿಯೊಬ್ಬ ಅಭ್ಯರ್ಥಿಗಳಿಗೂ ನುರಿತವಾದ ಉದ್ಯೋಗ ನೀಡಬೇಕು. ಕೈಗಾರಿಕಾ ಪ್ರದೇಶಗಳಲ್ಲಿ ಬೀದಿ ದೀಪ ಹಾಗೂ ಬಸ್ ವ್ಯವಸ್ಥೆ ಕಡಿಮೆ ಇದ್ದು ನಿಯೋಜಿಸಿಕೊಂಡು ಕಾರ್ಮಿಕರಿಗೆ ಅನುಕೂಲ ಮಾಡಿಕೊಡಬೇಕು ಎಂದು ಹೇಳಿದರು.ಬಿಳಿಕೆರೆ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಪ್ರಭಾರ ಪ್ರಾಚಾರ್ಯರಾದ ಡಿ.ಸಿ ನಟರಾಜು, ಮರಿಯಾಲದ ಜೆಎಸ್ಎಸ್ ಕೈಗಾರಿಕಾ ತರಬೇತಿ ಸಂಸ್ಥೆಯ ಎಂ.ಪಿ ಸದಾಶಿವಮೂರ್ತಿ, ಎಂ. ಮಹೇಶ್, ಬೇಗೂರು ಕೈಗಾರಿಕಾ ತರಬೇತಿ ಸಂಸ್ಥೆಯ ಆಡಳಿತಾಧಿಕಾರಿ ಶ್ರೀನಿವಾಸ್, ಕೊಳ್ಳೇಗಾಲ ಕೈಗಾರಿಕಾ ತರಬೇತಿ ಸಂಸ್ಥೆಯ ರಘುನಾಥ್, ಇತರರು ಇದ್ದರು.