ವಿದ್ಯಾರ್ಥಿಗಳೇ ಪರೀಕ್ಷೆ ವೇಳೆ ಒತ್ತಡಕ್ಕೆ ಸಿಲುಕಬೇಡಿ: ಕೆ.ಪಿ.ಬಾಬು

KannadaprabhaNewsNetwork |  
Published : Dec 01, 2025, 01:15 AM IST
30ಕೆಎಂಎನ್‌ಡಿ-1 | Kannada Prabha

ಸಾರಾಂಶ

ಪರೀಕ್ಷೆಗಳಿಗೆ ಪೂರ್ವಸಿದ್ಧತೆ ಬಹಳ ಮುಖ್ಯ. ಡಿಸೆಂಬರ್ ತಿಂಗಳು ಎದುರಾಗಿದೆ. ಈಗಿನಿಂದಲೇ ವಿದ್ಯಾರ್ಥಿಗಳೇ ದಿನೇ ವೇಳಾ ಪಟ್ಟಿಯನ್ನು ಸಿದ್ಧಪಡಿಸಿಕೊಂಡು ಓದಿನ ಕಡೆ ಮುಖ ಮಾಡಬೇಕು. ಈಗಿನಿಂದಲೇ ಕಲಿಕೆಯಲ್ಲಿ ತೊಡಗಿದರೂ ಉತ್ತಮ ಸಾಧನೆ ಮಾಡುವುದಕ್ಕೆ ಅವಕಾಶವಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ವಿದ್ಯಾರ್ಥಿಗಳು ಪರೀಕ್ಷೆಗಳಿಗೆ ಭಯಪಡಬಾರದು. ಒತ್ತಡಕ್ಕೆ ಸಿಲುಕಬಾರದು. ಆತ್ಮವಿಶ್ವಾಸ ಬೆಳೆಸಿಕೊಂಡು ಧೈರ್ಯದಿಂದ ಎದುರಿಸಬೇಕು. ನಿರ್ದಿಷ್ಟ ಗುರಿ ಇಟ್ಟುಕೊಂಡು ಕಲಿಕೆಯಲ್ಲಿ ತೊಡಗಿದಾಗ ಯಶಸ್ಸು ಶತಃಸಿದ್ಧ ಎಂದು ರಾಮನಗರ ಡಯಟ್ ಉಪನ್ಯಾಸಕ ಕೆ.ಪಿ.ಬಾಬು ಹೇಳಿದರು.

ತಾಲೂಕಿನ ಬೇಬಿ ಗ್ರಾಮದಲ್ಲಿರುವ ಸರ್ಕಾರಿ ಪ್ರೌಢಶಾಲೆಯಲ್ಲಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಪ್ರೇರಣಾ ಹಾಗೂ ಪರಿವರ್ತನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

ವಿದ್ಯಾರ್ಥಿಗಳು ಜೀವನದಲ್ಲಿ ಮೊದಲು ಶಿಸ್ತು, ಸಂಸ್ಕಾರವನ್ನು ರೂಢಿಸಿಕೊಂಡು ಕಲಿಕೆಯಲ್ಲಿ ಆಸಕ್ತಿಯಿಂದ ತೊಡಗಿಸಿಕೊಳ್ಳಬೇಕು. ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಪಾಲಿಗೆ ಮಹತ್ವದ ಘಟ್ಟ. ಆ ಸಮಯದಲ್ಲಿ ಮೈಮರೆಯಬಾರದು. ನಿಮ್ಮ ಶೈಕ್ಷಣಿಕ ಸಾಧನೆಯ ಹೆಜ್ಜೆ ಗುರುತುಗಳು ಅಲ್ಲಿಂದಲೇ ಮೂಡಿಸುವಂತಾಗಬೇಕು. ಅದಕ್ಕೆ ಇಷ್ಟಪಟ್ಟು ಓದುವುದಕ್ಕೆ ಪ್ರತಿಯೊಬ್ಬರೂ ಮುಂದಾಗುವಂತೆ ಕಿವಿಮಾತು ಹೇಳಿದರು.

ಪರೀಕ್ಷೆಗಳಿಗೆ ಪೂರ್ವಸಿದ್ಧತೆ ಬಹಳ ಮುಖ್ಯ. ಡಿಸೆಂಬರ್ ತಿಂಗಳು ಎದುರಾಗಿದೆ. ಈಗಿನಿಂದಲೇ ವಿದ್ಯಾರ್ಥಿಗಳೇ ದಿನೇ ವೇಳಾ ಪಟ್ಟಿಯನ್ನು ಸಿದ್ಧಪಡಿಸಿಕೊಂಡು ಓದಿನ ಕಡೆ ಮುಖ ಮಾಡಬೇಕು. ಈಗಿನಿಂದಲೇ ಕಲಿಕೆಯಲ್ಲಿ ತೊಡಗಿದರೂ ಉತ್ತಮ ಸಾಧನೆ ಮಾಡುವುದಕ್ಕೆ ಅವಕಾಶವಿದೆ. ಎಲ್ಲಾ ಪಠ್ಯ ವಿಷಯಗಳಿಗೂ ಪ್ರಾಮುಖ್ಯತೆ ಕೊಟ್ಟು ಕಲಿಕೆಯಲ್ಲಿ ತೊಡಗಬೇಕು. ಕಷ್ಟದ ವಿಷಯಗಳಿಗೆ ಹೆಚ್ಚು ಸಮಯ, ಆಸಕ್ತಿಯನ್ನು ನೀಡುವುದು ಉತ್ತಮ. ಅರ್ಥವಾಗದೆ ವಿಷಯಗಳಿದ್ದರೆ ಶಿಕ್ಷಕರನ್ನು ಕೇಳಿ ತಿಳಿದುಕೊಳ್ಳಬೇಕು. ವಿದ್ಯಾರ್ಥಿಗಳು ಗುಂಪಾಗಿ ಚರ್ಚಿಸುವುದರಿಂದ ಗೊಂದಲ-ಸಮಸ್ಯೆಗಳಿಗೆ ಪರಿಹಾರ ಸಿಗುತ್ತವೆ ಎಂದು ಸಲಹೆ ನೀಡಿದರು.

ಪರೀಕ್ಷೆಗಳು ಸಮೀಪಿಸುತ್ತಿರುವುದರಿಂದ ಸಿನಿಮಾ, ಮೊಬೈಲ್ ಸಂಸ್ಕೃತಿಯಿಂದ ವಿದ್ಯಾರ್ಥಿಗಳು ದೂರವಿರಬೇಕು. ಏಕಾಗ್ರತೆ ಬಹಳ ಮುಖ್ಯವಾಗಿರುವುದರಿಂದ ವಿದ್ಯಾರ್ಥಿಗಳು ಯೋಗ, ಧ್ಯಾನದಂತಹ ಚಟುವಟಿಕೆಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಇದರಿಂದ ಮನಸ್ಸು ಕ್ರಿಯಾಶೀಲವಾಗುತ್ತದೆ. ಬುದ್ಧಿ ಚುರುಕಾಗುತ್ತದೆ. ನಿಯಮಿತ ವ್ಯಾಯಾಮದಿಂದ ದೇಹಾರೋಗ್ಯವೂ ಉತ್ತಮವಾಗಿರುತ್ತದೆ ಎಂದು ನುಡಿದರು.

ಫಾಸ್ಟ್‌ಫುಡ್, ಜಂಕ್‌ಫುಡ್‌ಗಳು ಆರೋಗ್ಯಕ್ಕೆ ಹಾನಿ ಉಂಟುಮಾಡುತ್ತವೆ. ಸೊಪ್ಪು, ತರಕಾರಿ, ಮೀನು, ಮೊಟ್ಟೆಯಂತಹ ಪೋಷಕಾಂಶಯುಕ್ತ ಆಹಾರ ಸೇವನೆಯಿಂದ ಆರೋಗ್ಯ ಉತ್ತಮವಾಗುತ್ತದೆ. ಕಣ್ತುಂಬಾ ನಿದ್ರೆ ಮಾಡಿ. ನೀವೆಷ್ಟು ಸಮಯ ಓದಿದಿರಿ ಎನ್ನುವುದು ಮುಖ್ಯವಲ್ಲ. ಓದಿದಷ್ಟು ಅವಧಿಯಲ್ಲಿ ಎಷ್ಟು ವಿಷಯಗಳು ಮನನವಾದವು ಎನ್ನುವುದು ಮುಖ್ಯ ಎಂದರು.

ತಂದೆ-ತಾಯಿಯರು, ಗುರು-ಹಿರಿಯರನ್ನು ಗೌರವಿಸುವ ಸಂಸ್ಕಾರವನ್ನು ಬೆಳೆಸಿಕೊಳ್ಳಬೇಕು. ಇದರಿಂದ ವ್ಯಕ್ತಿತ್ವವೂ ವಿಕಸನಗೊಳ್ಳುತ್ತದೆ. ಮಾನವೀಯ ಗುಣಗಳನ್ನು ರೂಢಿಸಿಕೊಂಡು ಬೆಳವಣಿಗೆ ಸಾಧಿಸಿದಾಗ ಉತ್ತಮ ಪ್ರಜೆಗಳಾಗಿ ರೂಪುಗೊಳ್ಳುವಿರಿ ಎಂದರು.

ಮುಖ್ಯ ಶಿಕ್ಷಕ ಎಂ.ಎಚ್.ಪುಟ್ಟಸ್ವಾಮಿ ಹಾಗೂ ಶಾಲೆಯ ಇತರೆ ಶಿಕ್ಷಕರು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಲಕ್ಕುಂಡಿಯಲ್ಲಿ ಸಿಕ್ತು ಲೋಹದ ಹಣತೆ, ಮೂಳೆ : ರಿತ್ತಿ ಕುಟುಂಬಕ್ಕೆ ನಿವೇಶನ
ಉದ್ಯೋಗಾಂಕ್ಷಿಗಳಿಗೆ ರಾಜ್ಯ ಸರ್ಕಾರದಿಂದ ಭರ್ಜರಿ ಸುದ್ದಿ