ರಾಣಿಬೆನ್ನೂರು: ಇಂದಿನ ಸ್ಪರ್ಧಾತ್ಮಕ ಯುಗಕ್ಕೆ ವಿದ್ಯಾರ್ಥಿಗಳು ಹೊಂದಿಕೊಳ್ಳಬೇಕು. ಜಗತ್ತಿನಲ್ಲಿ ಬಹಳಷ್ಟು ಅವಕಾಶಗಳಿದ್ದು, ಅಂತಹ ಅವಕಾಶ ಹುಡುಕುವ ಕೆಲಸ ವಿದ್ಯಾರ್ಥಿಗಳು ಮಾಡಬೇಕು ಎಂದು ಹರಿಹರ ಪಂಚಮಸಾಲಿ ಮಠದ ಜಗದ್ಗುರು ವಚನಾನಂದ ಮಹಾಸ್ವಾಮಿಗಳು ನುಡಿದರು.
ವಿದ್ಯಾರ್ಥಿಗಳ ತೆಗೆದ ಅಂಕಗಳು ಮುಂದೆ ಅನುಕೂಲವಾಗಲ್ಲ, ಬೀಜದ ಜೊತೆ ಮಣ್ಣು ಚೆನ್ನಾಗಿದ್ದಾಗ ಮಾತ್ರ ಒಳ್ಳೆಯ ಬೆಳೆ ಬರುತ್ತದೆ. ಪ್ರತಿಭಾ ಪುರಸ್ಕಾರವು ಮಣ್ಣಾಗಿದ್ದರೆ ನೀವು ಬೀಜ ಇದ್ದಂತೆ. ಅಂತವರನ್ನು ಪೋತ್ಸಾಹ ಸಲುವಾಗಿ ಇಂತಹ ಕಾರ್ಯಕ್ರಮ ಮಾಡಲಾಗುತ್ತಿದೆ ಎಂದರು.
ಪಂಚಮಸಾಲಿ ಸಮಾಜದ ಜಿಲ್ಲಾ ಗೌರವಾಧ್ಯಕ್ಷ ಎಸ್.ಎಸ್. ರಾಮಲಿಂಗಣ್ಣವರ ಅಧ್ಯಕ್ಷತೆ ವಹಿಸಿದ್ದರು,ಕಾರ್ಯಕ್ರಮ ಉದ್ಘಾಟಿಸಿದ ಶಾಸಕ ಪ್ರಕಾಶ ಕೋಳಿವಾಡ ಮಾತನಾಡಿ, ಸಮಾಜ ಅಭಿವೃದ್ಧಿ ಹೊಂದಲು ಶಿಕ್ಷಣ ಮುಖ್ಯ, ಯಾವ ವಿದ್ಯಾರ್ಥಿಗಳು ತಮ್ಮನ್ನು ತಾವು ಮುಂದೆ ಹೋಗಲು ಶ್ರಮವಹಿಸುತ್ತಾರೆ, ಅಂತವರಿಗೆ ಮಾತ್ರ ದೇವರು ಒಲಿಯುತ್ತಾನೆ, ಶಿಕ್ಷಣದ ಅಂಕಗಳಿಂದ ಮುಂದಿನ ಜೀವನದಲ್ಲಿ ಸಾಧನೆ ಮಾಡಲು ಆಗುವುದಿಲ್ಲ. ಅಂಕಗಳ ಜತೆ ಕೌಶಲ್ಯಗಳಿವಿದ್ದರೆ ಮಾತ್ರ ಅದು ಸಾಧ್ಯವಾಗುತ್ತದೆ. ಸಮಾಜದಲ್ಲಿ ನಮ್ಮ ಸಮಸ್ಯೆ ಪರಿಹಾರ ನೀಡುವರಿಗೆ ಜಾಗವಿದೆ ಹೊರತು ಅಂಕಗಳಿಗೆ ಅಲ್ಲ, ಪದವಿ ಎಲ್ಲದಕ್ಕೂ ಅಲ್ಲ. ದೇಶದಲ್ಲಿ ಅನೇಕ ಅವಕಾಶಗಳಿದ್ದು ತಂದೆ ತಾಯಿಗಳು ಮಕ್ಕಳನ್ನು ಡಾಕ್ಟರ್, ಇಂಜಿನಿಯರ್ ಮಾಡುವುದನ್ನು ಬಿಟ್ಟು ಅವರ ಪ್ರತಿಭೆ ಗುರುತಿಸಿ ಅದಕ್ಕೆ ತಕ್ಕಂತೆ ಪೋತ್ಸಾಹಿಸಬೇಕು. ಮಾತೃ ಭಾಷೆ ಜೊತೆಗೆ ಔದ್ಯೋಗಿಕ ಭಾಷೆ ಕಲಿಸಬೇಕು ಎಂದರು.
ತೆಲಂಗಾಣದ ವಿಕರಬಾದ್ ಜಿಲ್ಲಾಧಿಕಾರಿ ಡಾ.ಸಚಿನ್ ಬಸವರಾಜ ಗುತ್ತೂರು ಮಾತನಾಡಿ, ರಾಣಿಬೆನ್ನೂರು ಸೀಡ್ಸ್ ಕ್ಷೇತ್ರದಲ್ಲಿ ಅತೀ ದೊಡ್ಡ ಸಾಧನೆ ಮಾಡಿದ್ದು ಅಂತಹ ಸಾಧನೆಯನ್ನು ಜಗತ್ತಿಗೆ ಇನ್ನಷ್ಟು ಪರಿಚಯಿಸುವ ಕೆಲಸವನ್ನು ಇಂದಿನ ವಿದ್ಯಾರ್ಥಿಗಳು ಮಾಡಬೇಕು. ನಾವು ಬೆಳೆಯುವ ಬೀಜಗಳನ್ನು ದೇಶದಲ್ಲೆಡೆ ಬೆಳೆಯುತ್ತಾರೆ. ನಮ್ಮ ಊರಿನ ಬಗ್ಗೆ ತಿಳಿಸುವ ಕೆಲಸವಾಗಬೇಕು. ವಿದ್ಯಾರ್ಥಿಗಳು ಕಾಂಪ್ರಟ್ ಜೋನ್ ಬಿಟ್ಟು ಹೊರಗಡೆ ಬಂದಾಗ ಮಾತ್ರ ಬೆಳೆಯಲು ಸಾಧ್ಯವಾಗುತ್ತದೆ. ನಿಮ್ಮ ಶ್ರದ್ಧೆ, ಜವಾಬ್ದಾರಿ, ಕಲಿಕೆ, ಶ್ರಮ ಹಾಗೂ ಪ್ರಯತ್ನಕ್ಕೆ ಈ ಅಂಕಗಳು ಸಾಕ್ಷಿ ಹೊರತು ಜೀವನಕ್ಕೆ ಅಲ್ಲ. ಜೀವನದಲ್ಲಿ ಸಾಧನೆ ಮಾಡಲು ಓದಿನ ಜೊತೆ ಕೌಶಲ್ಯಗಳನ್ನು ಅಳವಡಿಸಿಕೊಳ್ಳಬೇಕು. ನಮ್ಮ ಪ್ರತಿಭೆಯನ್ನು ನಾವೇ ತಿಳಿಸಬೇಕು, ನಾಯಕತ್ವ ಗುಣಗಳನ್ನು ಅಳವಡಿಸಿಕೊಳ್ಳಬೇಕು ಎಂದರು.