ವಿಜಯಪುರ: ವಿದ್ಯಾರ್ಥಿಗಳಲ್ಲಿ ತಂಬಾಕು ಸೇವನೆಯಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಬೇಕಾದ ಅಗತ್ಯವಿದೆ ಎಂದು ಜಿಲ್ಲಾ ೫ನೇ ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಲಕ್ಷ್ಮಣ ರಾಮು ಕುರಾಣಿ ತಿಳಿಸಿದರು.
ದೇವನಹಳ್ಳಿ ತಾಲೂಕು ವಕೀಲರ ಸಂಘದ ಅಧ್ಯಕ್ಷ ಮುನಿರಾಜು ಮಾತನಾಡಿ, ಇಂದಿನ ಕಾಲಮಾನದಲ್ಲಿ ಯುವಜನತೆಗೆ ತಂಬಾಕಿನ ದುಷ್ಟಪರಿಣಾಮಗಳ ಬಗ್ಗೆ ತಿಳಿದಿದ್ದರೂ ಕೇವಲ ಕ್ಷಣಿಕ ಖುಷಿಗಾಗಿ ಯುವಪೀಳಿಗೆ ವ್ಯಸನಗಳಿಗೆ ದಾಸರಾಗುತ್ತಿದ್ದಾರೆ. ಚಲನಚಿತ್ರ ಮಂದಿರಗಳಲ್ಲಿ ಪ್ರತಿ ಪ್ರದರ್ಶನದ ವೇಳೆಯೂ ತಂಬಾಕಿನ ವಿರುದ್ಧ ಜಾಗೃತಿ ಮೂಡಿಸುತ್ತಿದ್ದರೂ ಯುವಜನತೆ ಎಚ್ಚೆತ್ತುಕೊಳ್ಳದಿರುವುದು ಆತಂಕಕಾರಿ ವಿಷಯ ಎಂದು ಕಳವಳ ವ್ಯಕ್ತಪಡಿಸಿದರು.
ತಾಲೂಕು ಕಾನೂನು ಸೇವೆಗಳ ಸಮಿತಿಯ ಪ್ಯಾನೆಲ್ ನ್ಯಾಯವಾದಿ ಎಂ.ಮೂರ್ತಿ ಮಾತನಾಡಿ, ತಂಬಾಕಿನಲ್ಲಿ ಹೊಗೆರಹಿತ (ಕಡ್ಡಿಪುಡಿ, ಪಾನ್ಪರಾಗ್ ಇತ್ಯಾದಿ) ಹಾಗೂ ಹೊಗೆಸಹಿತ (ಬೀಡಿ, ಸಿಗರೇಟು) ಎಂಬ ಎರಡು ವಿಧಗಳಿವೆ. ಮಾಲ್ಡೀವ್ಸ್, ಭೂತಾನ್ ದೇಶಗಳು ಈಗಾಗಲೇ ಸಂಪೂರ್ಣ ತಂಬಾಕು ಮುಕ್ತ ದೇಶಗಳಾಗಿದ್ದು, ನಮ್ಮ ದೇಶದಲ್ಲಿಯೂ ಒರಿಸ್ಸಾ ರಾಜ್ಯ ಬಹಳ ಹಿಂದಿನಿಂದಲೇ ತಂಬಾಕನ್ನು ಸಂಪೂರ್ಣ ನಿಷೇಧಿಸಿದೆ. ಅದೇ ರೀತಿ ದೇಶದಲ್ಲಿ ಸಂಪೂರ್ಣ ತಂಬಾಕು ನಿಷೇಧ ಜಾರಿಗೆ ತರಬೇಕು ಎಂದು ಒತ್ತಾಯಿಸಿದರು.ವಿದ್ಯಾರ್ಥಿನಿ ಜಮುನಾ ಮಾತನಾಡಿ, ನಮ್ಮ ದೇಶದಲ್ಲಿ ಪ್ರತಿವರ್ಷ ಸುಮಾರು ೮ ಲಕ್ಷ ಜನ ತಂಬಾಕು ಸೇವನೆಯಿಂದ ಮೃತಪಡುತ್ತಿದ್ದರೆ, ಧೂಮಪಾನ ಮಾಡುವವರ ಪಕ್ಕದಲ್ಲಿದ್ದು ಪರೋಕ್ಷವಾಗಿ ಅದರ ಹೊಗೆಯನ್ನು ಸೇವಿಸುವ ಸುಮಾರು ೨ ಲಕ್ಷ ಅಮಾಯಕರು ಸಾವನ್ನಪ್ಪುತ್ತಿದ್ದಾರೆ. ತಂಬಾಕು ಬಳಸುವವರು ತಮ್ಮ ಆರೋಗ್ಯದ ಜೊತೆಗೆ ಸುತ್ತಮುತ್ತಲಿನವರ ಜೀವದ ಜೊತೆಯೂ ಚೆಲ್ಲಾಟವಾಡುತ್ತಿದ್ದಾರೆ ಎಂದು ಅಂಕಿ-ಅಂಶಗಳ ಸಹಿತ ವಿವರಿಸಿದರು.
ಕಾರ್ಯಕ್ರಮದಲ್ಲಿ ಶ್ರೀನಿವಾಸ್ ಮೂರ್ತಿ ಉಪನ್ಯಾಸಕರು.ತಾಲೂಕು ಕಾನೂನು ಸೇವೆಗಳ ಸಮಿತಿಯ ಕಾರ್ಯದರ್ಶಿ ಹಾಗೂ ಜೆ.ಎಂ.ಎಫ್.ಸಿ ನ್ಯಾಯಾಲಯದ ನ್ಯಾಯಾಧೀಶರಾದ ಎನ್. ವೆಂಕಟೇಶ್, ಶ್ರೀ ಸಾಯಿ ಜ್ಞಾನಗಂಗಾ ಎಜುಕೇಶನ್ ಟ್ರಸ್ಟ್ ಅಧ್ಯಕ್ಷರಾದ ಬಿ. ಮಂಜುನಾಥ್, ಪ್ರಾಂಶುಪಾಲರಾದ ಸದಾಶಿವ ಕಾಂಬ್ಳೆ, ತಾಲೂಕು ವಕೀಲರ ಸಂಘದ ಜಂಟಿ ಕಾರ್ಯದರ್ಶಿ ಮುನೇಗೌಡ, ವಕೀಲರುಗಳಾದ ವೆಂಕಟೇಶ್, ಮೋಹನ್, ಚೇತನ್, ಹಾಗೂ ಉಪನ್ಯಾಸಕರುಗಳಾದ ಭಾಗ್ಯಶ್ರೀ,ಕೇಶವಮೂರ್ತಿ, ರಾಘವೇಂದ್ರ, ಶ್ರೀನಿವಾಸ್ ಮೂರ್ತಿ ಮತ್ತು ಕಾಲೇಜಿನ ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ವಿಜಯಪುರ ಹೋಬಳಿಯ ನಾರಾಯಣಪುರದ ಶ್ರೀ ಸಾಯಿ ಲಾ ಕಾಲೇಜಿನ ಆವರಣದಲ್ಲಿ ಶ್ರೀ ಸಾಯಿ ಜ್ಞಾನಗಂಗಾ ಎಜುಕೇಶನ್ ಟ್ರಸ್ಟ್ ಹಾಗೂ ತಾಲೂಕು ಕಾನೂನು ಸೇವಾ ಸಮಿತಿಗಳ ಸಂಯುಕ್ತಾಶ್ರಯದಲ್ಲಿ ವಿಶ್ವ ತಂಬಾಕು ನಿಷೇಧ ದಿನಾಚರಣೆ ನಡೆಯಿತು.