24 ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯ ಅತಂತ್ರವಾಗಿರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿ, “ನ್ಯಾಯ ಸಿಗುವವರೆಗೂ ತರಗತಿಗೆ ಹಾಜರಾಗುವುದಿಲ್ಲ” ಎಂದು ಪಟ್ಟು ಹಿಡಿದರು. 2022-23ನೇ ಸಾಲಿನಲ್ಲಿ ಕಾಲೇಜಿನ ನಿಗದಿತ 60 ಸೀಟುಗಳ ಬದಲಿಗೆ 120 ವಿದ್ಯಾರ್ಥಿಗಳನ್ನು ದಾಖಲಿಸಿಕೊಳ್ಳಲಾಗಿತ್ತು. ಬಾರ್ ಕೌನ್ಸಿಲ್ ಆಫ್ ಇಂಡಿಯಾ ಅನುಮತಿ ಪಡೆಯುವ ಮೊದಲು ಹೆಚ್ಚುವರಿ ದಾಖಲಾತಿ ಮಾಡಿಕೊಂಡಿರುವುದು ಈಗ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ಈಗ ನಾಲ್ಕನೇ ವರ್ಷದ ಹಂತಕ್ಕೆ ಬಂದಿರುವ ವಿದ್ಯಾರ್ಥಿಗಳ ಫಲಿತಾಂಶವನ್ನು ವಿಶ್ವವಿದ್ಯಾಲಯ ಅಮಾನ್ಯಗೊಳಿಸಿರುವುದು ಅವರ ಭವಿಷ್ಯವನ್ನು ಸಂಕಷ್ಟಕ್ಕೆ ತಳ್ಳಿದೆ.
ಕನ್ನಡಪ್ರಭ ವಾರ್ತೆ ಹಾಸನ
ಸರ್ಕಾರಿ ಕಾನೂನು ಕಾಲೇಜಿನ ಆಡಳಿತ ವೈಫಲ್ಯ ಹಾಗೂ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ನಿರ್ಲಕ್ಷ್ಯ ಧೋರಣೆಯನ್ನು ಖಂಡಿಸಿ ವಿದ್ಯಾರ್ಥಿಗಳು ಶುಕ್ರವಾರ ಕಾಲೇಜಿಗೆ ಬೀಗ ಜಡಿದು ಬೃಹತ್ ಪ್ರತಿಭಟನೆ ನಡೆಸಿದರು. 24 ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯ ಅತಂತ್ರವಾಗಿರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿ, “ನ್ಯಾಯ ಸಿಗುವವರೆಗೂ ತರಗತಿಗೆ ಹಾಜರಾಗುವುದಿಲ್ಲ” ಎಂದು ಪಟ್ಟು ಹಿಡಿದರು. 2022-23ನೇ ಸಾಲಿನಲ್ಲಿ ಕಾಲೇಜಿನ ನಿಗದಿತ 60 ಸೀಟುಗಳ ಬದಲಿಗೆ 120 ವಿದ್ಯಾರ್ಥಿಗಳನ್ನು ದಾಖಲಿಸಿಕೊಳ್ಳಲಾಗಿತ್ತು. ಬಾರ್ ಕೌನ್ಸಿಲ್ ಆಫ್ ಇಂಡಿಯಾ ಅನುಮತಿ ಪಡೆಯುವ ಮೊದಲು ಹೆಚ್ಚುವರಿ ದಾಖಲಾತಿ ಮಾಡಿಕೊಂಡಿರುವುದು ಈಗ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ಈಗ ನಾಲ್ಕನೇ ವರ್ಷದ ಹಂತಕ್ಕೆ ಬಂದಿರುವ ವಿದ್ಯಾರ್ಥಿಗಳ ಫಲಿತಾಂಶವನ್ನು ವಿಶ್ವವಿದ್ಯಾಲಯ ಅಮಾನ್ಯಗೊಳಿಸಿರುವುದು ಅವರ ಭವಿಷ್ಯವನ್ನು ಸಂಕಷ್ಟಕ್ಕೆ ತಳ್ಳಿದೆ.ವಿದ್ಯಾರ್ಥಿಗಳು ಆರೋಪಿಸಿದಂತೆ, ಇದೇ ರೀತಿಯ ಸಮಸ್ಯೆಗಳು ಚಿಕ್ಕಮಗಳೂರು, ಶಿವಮೊಗ್ಗ ಹಾಗೂ ಬೆಂಗಳೂರಿನ ಖಾಸಗಿ ಕಾಲೇಜುಗಳಲ್ಲಿ ಎದುರಾದಾಗ ವಿಶ್ವವಿದ್ಯಾಲಯ ತಕ್ಷಣ ಸ್ಪಂದಿಸಿ ಪರಿಹಾರ ನೀಡಿತ್ತು. ಆದರೆ ಸರ್ಕಾರಿ ಕಾಲೇಜಿನ ವಿದ್ಯಾರ್ಥಿಗಳ ವಿಚಾರದಲ್ಲಿ ಮೌನ ವಹಿಸಿರುವುದು ಮಲತಾಯಿ ಧೋರಣೆಯಾಗಿದೆ ಎಂದು ವಿದ್ಯಾರ್ಥಿಗಳು ಪ್ರಶ್ನಿಸಿದರು. ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ಪ್ರಾಂಶುಪಾಲರಾದ ಶೀನಾ ಥಾಮಸ್ ಮಾತನಾಡಿ, “ಬಾರ್ ಕೌನ್ಸಿಲ್ಗೆ ಅಗತ್ಯ ಶುಲ್ಕ ಪಾವತಿಸಲಾಗಿದೆ. ಪ್ರಕರಣ ಲೀಗಲ್ ಎಜುಕೇಶನ್ ಕಮಿಟಿ ಮುಂದೆ ಇದೆ. ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರ ಗಮನಕ್ಕೂ ತರಲಾಗಿದೆ. ಪ್ರಕ್ರಿಯೆ ನಡೆಯುತ್ತಿದ್ದು, ವಿದ್ಯಾರ್ಥಿಗಳು ತಾಳ್ಮೆ ವಹಿಸಬೇಕು” ಎಂದು ಮನವಿ ಮಾಡಿದರು. ಆದರೆ ಈ ಭರವಸೆಗೆ ಒಪ್ಪದ ವಿದ್ಯಾರ್ಥಿಗಳು ಪ್ರತಿಭಟನೆಯನ್ನು ಮುಂದುವರಿಸಿದರು. “ನಾಲ್ಕು ವರ್ಷಗಳಿಂದ ಪ್ರತೀ ಪರೀಕ್ಷೆಯ ಸಮಯದಲ್ಲಿ ಆತಂಕದಲ್ಲೇ ಇದ್ದೇವೆ. ಹೈಕೋರ್ಟ್ ಆದೇಶಕ್ಕೂ ಬೆಲೆ ಕೊಡಲಾಗುತ್ತಿಲ್ಲ. ನಮ್ಮ ಐದು ವರ್ಷಗಳ ಶ್ರಮ ವ್ಯರ್ಥವಾದರೆ ಯಾರು ಹೊಣೆ?” ಎಂದು ವಿದ್ಯಾರ್ಥಿ ಕಾಂತರಾಜು ಆಕ್ರೋಶ ವ್ಯಕ್ತಪಡಿಸಿದರು.ಇನ್ನೊಬ್ಬ ವಿದ್ಯಾರ್ಥಿನಿ ಇಥುಲ ಮಾತನಾಡಿ,“ತಮಿಳುನಾಡಿನಿಂದ ವಕೀಲಿಕೆಯ ಕನಸು ಹೊತ್ತು ಬಂದಿದ್ದೇವೆ. ಆರಂಭದಲ್ಲೇ ಮಾಹಿತಿ ನೀಡಿದ್ದರೆ ಬೇರೆ ಕಾಲೇಜಿಗೆ ಸೇರುತ್ತಿದ್ದೆವು. ಈಗ ನಾಲ್ಕನೇ ವರ್ಷದಲ್ಲಿ ನಮ್ಮನ್ನು ಕೈಬಿಟ್ಟರೆ ನಾವು ಎಲ್ಲಿಗೆ ಹೋಗಬೇಕು?” ಎಂದು ಕಣ್ಣೀರು ಹಾಕಿದರು. ಇದೆ ವೇಳೆ ಕಾಂತರಾಜು ಕೂಡ ತಮ್ಮ ಅಳಲು ತೋಡಿಕೊಂಡರು.ಈ ಬೆಳವಣಿಗೆ ಹಾಸನದಲ್ಲಿ ಶಿಕ್ಷಣ ವ್ಯವಸ್ಥೆಯ ಮೇಲಿನ ನಂಬಿಕೆಗೆ ಧಕ್ಕೆಯಾಗಿದೆ. ವಿದ್ಯಾರ್ಥಿಗಳ ಭವಿಷ್ಯ ಉಳಿಸುವ ನಿಟ್ಟಿನಲ್ಲಿ ಸರ್ಕಾರ ಮತ್ತು ಸಂಬಂಧಪಟ್ಟ ಸಂಸ್ಥೆಗಳು ತಕ್ಷಣ ಶಾಶ್ವತ ಪರಿಹಾರ ಕೈಗೊಳ್ಳಬೇಕೆಂದು ಸಾರ್ವಜನಿಕ ವಲಯದಲ್ಲೂ ಆಗ್ರಹ ಹೆಚ್ಚಾಗಿ ಕಂಡು ಬಂದಿದೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.