ಸಮರ್ಪಕವಾಗಿ ಬಸ್ ಸಂಚಾರಕ್ಕೆ ಆಗ್ರಹಿಸಿ ವಿದ್ಯಾರ್ಥಿಗಳ ಪ್ರತಿಭಟನೆ

KannadaprabhaNewsNetwork |  
Published : May 12, 2026, 02:15 AM IST
ಹಾವೇರಿ ನಗರದ ಕೇಂದ್ರ ಬಸ್ ನಿಲ್ದಾಣದ ಎದುರು ವಿದ್ಯಾರ್ಥಿಗಳು ಬಸ್‌ಗಳನ್ನು ತಡೆಗಟ್ಟಿ ಸೋಮವಾರ ದಿಢೀರ್ ಪ್ರತಿಭಟನೆ ನಡೆಸಿದರು. | Kannada Prabha

ಸಾರಾಂಶ

ದೇವಗಿರಿಯ ಸರ್ಕಾರಿ ಎಂಜಿನಿಯರಿಂಗ್ ಕಾಲೇಜು, ಮಹಿಳಾ ಕಾಲೇಜು ಸೇರಿದಂತೆ ಈ ಮಾರ್ಗದಲ್ಲಿ ಸಂಚರಿಸುವ ಬಸ್‌ಗಳನ್ನು ಸಕಾಲಕ್ಕೆ ಓಡಿಸುವಂತೆ ಆಗ್ರಹಿಸಿ ವಿದ್ಯಾರ್ಥಿಗಳು ನಗರದ ಕೇಂದ್ರ ಬಸ್ ನಿಲ್ದಾಣದ ಎದುರು ಎಲ್ಲಾ ಮಾರ್ಗದ ಬಸ್‌ಗಳನ್ನು ತಡೆಗಟ್ಟಿ ಸೋಮವಾರ ದಿಢೀರ್ ಪ್ರತಿಭಟನೆ ನಡೆಸಿದರು.

ಹಾವೇರಿ: ದೇವಗಿರಿಯ ಸರ್ಕಾರಿ ಎಂಜಿನಿಯರಿಂಗ್ ಕಾಲೇಜು, ಮಹಿಳಾ ಕಾಲೇಜು ಸೇರಿದಂತೆ ಈ ಮಾರ್ಗದಲ್ಲಿ ಸಂಚರಿಸುವ ಬಸ್‌ಗಳನ್ನು ಸಕಾಲಕ್ಕೆ ಓಡಿಸುವಂತೆ ಆಗ್ರಹಿಸಿ ವಿದ್ಯಾರ್ಥಿಗಳು ನಗರದ ಕೇಂದ್ರ ಬಸ್ ನಿಲ್ದಾಣದ ಎದುರು ಎಲ್ಲಾ ಮಾರ್ಗದ ಬಸ್‌ಗಳನ್ನು ತಡೆಗಟ್ಟಿ ಸೋಮವಾರ ದಿಢೀರ್ ಪ್ರತಿಭಟನೆ ನಡೆಸಿದರು. ಈ ವೇಳೆ ಎಂಜನೀಯರಿಂಗ್ ಕಾಲೇಜಿನ ವಿದ್ಯಾರ್ಥಿ ಅಭಿಷೇಕ ಮಾತನಾಡಿ, ಕಳೆದ ಕೆಲವು ದಿನಗಳಿಂದ ಸರ್ಕಾರಿ ಎಂಜಿನಿಯರಿಂಗ್ ಕಾಲೇಜು, ಮಹಿಳಾ ಕಾಲೇಜು ಸೇರಿದಂತೆ ಈ ಮಾರ್ಗದಲ್ಲಿ ಬಸ್‌ಗಳು ಸಕಾಲಕ್ಕೆ ಸಂಚರಿಸುತ್ತಿಲ್ಲ. ಈ ಬಗ್ಗೆ ಸಂಬಂಧಿಸಿದ ಬಸ್ ನಿಲ್ದಾಣದ ಅಧಿಕಾರಿಗಳನ್ನು ಯಾವಾಗ ಕೇಳಿದರೂ ಮೂರು ಬಸ್ ಬಿಡಲಾಗಿದೆ. ಈಗಾಗಲೇ ಹೋಗಿವೆ, ಇನ್ನೇನು ಬರಬೇಕಿದೆ. ಬಂದ ಕೂಡಲೇ ಹತ್ತಿ ಎಂಬ ಹಾರಿಕೆ ಉತ್ತರ ನೀಡುತ್ತಿದ್ದಾರೆ. ಆದರೆ ಬಸ್‌ಗಳ ಅನಾನುಕೂಲದಿಂದ ನಮಗೆ ಸಾಕಷ್ಟು ತೊಂದರೆ ಆಗಿದೆ. ಬಸ್ ತಡವಾಗುತ್ತಿರುವುದರಿಂದ ದಿನನಿತ್ಯ ಎರಡು ಅವಧಿಗಳನ್ನು ಕಳೆದುಕೊಳ್ಳಬೇಕಾಗಿದೆ ಎಂದು ದೂರಿದರು.ಮಹಿಳಾ ಕಾಲೇಜಿನ ವಿದ್ಯಾರ್ಥಿನಿ ಸುಕನ್ಯಾ ಮಾತನಾಡಿ, ಈಗಾಗಲೇ ಬೆಳಗ್ಗೆ 8 ಮತ್ತು 8.30ರ ಸಮಯಕ್ಕೆ ಸಂಚರಿಸುತ್ತಿದ್ದ ಕೆಲವು ಬಸ್‌ಗಳನ್ನು ಅರ್ಧ ಗಂಟೆ ತಡವಾಗಿ ಓಡಿಸುತ್ತಿದ್ದು ಇದರಿಂದ ದಿನನಿತ್ಯ ಬೆಳಗಿನ ಒಂದು ಅವಧಿಯ ತರಗತಿಯನ್ನು ಕಳೆದುಕೊಳ್ಳುತ್ತಿದ್ದೇವೆ. ಇದರಿಂದ ಅಧ್ಯಯನದಲ್ಲಿ ಹಿನ್ನಡೆ ಆಗುತ್ತಿದೆ. ಇದರಿಂದ ನಮ್ಮ ಭವಿಷ್ಯದಲ್ಲಿ ತೊದರೆಯಾಗಲಿದೆ. ಈ ಕುರಿತು ಕಾಲೇಜಿನಲ್ಲಿಯೂ ಸಹ ತಡವಾಗುತ್ತಿರುವ ಹಿನ್ನೆಲೆಯಲ್ಲಿ ಉಪನ್ಯಾಸಕರಿಂದ ಬೈಸಿಕೊಳ್ಳುವಂತಾಗಿದೆ. ಈ ಬಗ್ಗೆ ಹಲವಾರು ಬಾರಿ ಮೌಖಿಕವಾಗಿ ದೂರು ನೀಡಿದ್ದು ಅದಕ್ಕೆ ಬಸ್ ನಿಲ್ದಾಣದ ಸಿಬ್ಬಂದಿ ಸಮಪರ್ಕವಾಗಿ ಸ್ಪಂದಿಸುತ್ತಿಲ್ಲ ಎಂದು ದೂರಿದರು. ಹಾವೇರಿ ಕೇಂದ್ರ ಬಸ್ ನಿಲ್ದಾಣದಿಂದ ಬೆಂಗಳೂರು, ಹುಬ್ಬಳ್ಳಿ, ಹಾನಗಲ್ಲ, ಶಿವಮೊಗ್ಗ, ಶಿರಸಿ ಹೀಗೆ ಹೊರಹೋಗುವ ಎಲ್ಲಾ ಮಾರ್ಗದ ಬಸ್‌ಗಳನ್ನು ತಡೆದು ನಿಲ್ಲಿಸಿ ದೇವಗಿರಿ ಮಾರ್ಗದ ಬಸ್‌ಗಳನ್ನು ಸಕಾಲಕ್ಕೆ ಓಡಿಸಬೇಕು ಮತ್ತು ಈ ಮಾರ್ಗದಲ್ಲಿ ಬಸ್‌ಗಳ ಸಂಖ್ಯೆಯನ್ನು ಹೆಚ್ಚಿಸಬೇಕು. ಈ ಮಾರ್ಗದಲ್ಲಿ ಬಹುತೇಕ ಸರ್ಕಾರಿ ಶಾಲೆ ಕಾಲೇಜುಗಳ ಸಂಖ್ಯೆಯೇ ಹೆಚ್ಚಿದ್ದು, ಬಡ, ಪ್ರತಿಭಾನ್ವಿತ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಹೆಚ್ಚಿನ ಸಂಖ್ಯೆಯಲ್ಲಿ ನೋಂದಾಯಿಸಿಕೊಂಡಿದ್ದು, ಬಸ್‌ಗಳ ರೂಟ್ ಮತ್ತು ಬಸ್‌ಗಳನ್ನು ಹೆಚ್ಚಿಸುವಂತೆ ಆಗ್ರಹಿಸಿದರು.ಈ ವೇಳೆ ಸಾರಿಗೆ ಇಲಾಖೆಯ ಹಲವು ಸಿಬ್ಬಂದಿ ಮತ್ತು ಪೊಲೀಸರು ವಿದ್ಯಾರ್ಥಿಗಳನ್ನು ಮನವೊಲಿಸಲು ಮಾಡಿದ ಪ್ರಯತ್ನಕ್ಕೆ ವಿದ್ಯಾರ್ಥಿಗಳು ಸ್ಪಂದಿಸದೇ ಕೂಡಲೇ ಬಸ್‌ಗಳನ್ನು ಬಿಡಿ ಎಂದು ಆಗ್ರಹಿಸಿದರು. ಆಗ ಸಾರಿಗೆ ಇಲಾಖೆಯ ಡಿಟಿಒ ಅಶೋಕ ಪಾಟೀಲ ಸ್ಥಳಕ್ಕೆ ಆಗಮಿಸಿ, ವಿದ್ಯಾರ್ಥಿಗಳ ಸಮಸ್ಯೆ ಆಲಿಸಿದರು. ನಿಮಗೆ ಆಗುತ್ತಿರುವ ಸಮಸ್ಯೆಗಳ ಕುರಿತು ಸವಿವರವಾದ ಮನವಿಯನ್ನು ಬರೆದು ಕೊಡಿ ಎಂದರಲ್ಲದೇ, ತಕ್ಷಣಕ್ಕೆ ಹೆಚ್ಚುವರಿ ಬಸ್ ವ್ಯವಸ್ಥೆ ಮಾಡುವುದಾಗಿ ಭರವಸೆ ನೀಡಿದರು. ಇದರ ಬೆನ್ನಲ್ಲೇ ವಿದ್ಯಾರ್ಥಿಗಳು ಪ್ರತಿಭಟನೆ ವಾಪಸ್ ಪಡೆದರು.ಈ ವೇಳೆ ಪ್ರತಿಭಟನೆಯಲ್ಲಿ ಎಂಜನೀಯರಿಂಗ್ ಕಾಲೇಜು, ಮಹಿಳಾ ಕಾಲೇಜು ಸೇರಿದಂತೆ ವಿವಿಧ ಕಾಲೇಜುಗಳ ನೂರಾರು ವಿದ್ಯಾರ್ಥಿ, ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಾವೇರಿ ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಕುಡಿವ ನೀರಿನ ಸಮಸ್ಯೆ
ಗ್ರಾಮೀಣ ಪ್ರದೇಶಗಳಲ್ಲಿ ಉತ್ತಮ ಆರೋಗ್ಯ ಸೇವೆ ಸರ್ಕಾರದ ಗುರಿ