ವಿದ್ಯಾರ್ಥಿಗಳು ಉನ್ನತ ಗುರಿ ಇಟ್ಟುಕೊಂಡು ಸಾಧನೆಗೆ ಶ್ರಮಿಸಬೇಕು

KannadaprabhaNewsNetwork | Updated : Jun 12 2024, 12:35 AM IST

ಸಾರಾಂಶ

ಬೆಳಕಿಲ್ಲದ ದಾರಿಯಲ್ಲಿ ನಡೆಯಬಹುದು, ಆದರೆ ಕನಸೇ ಇಲ್ಲದ ದಾರಿಯಲ್ಲಿ ನಡೆಯಲಾಗದು, ವಿದ್ಯಾರ್ಥಿಗಳು ಉನ್ನತ ಗುರಿಗಳನ್ನು ಇಟ್ಟುಕೊಂಡು ಸಾಧನೆ ಮಾಡಲು ಶ್ರಮಿಸಬೇಕು ಎಂದು ಗೌರಿಮಠ ಶಿವಯೋಗಿ ಶಿವಾಚಾರ್ಯರು ಹೇಳಿದರು.

ಹಾವೇರಿ: ಬೆಳಕಿಲ್ಲದ ದಾರಿಯಲ್ಲಿ ನಡೆಯಬಹುದು, ಆದರೆ ಕನಸೇ ಇಲ್ಲದ ದಾರಿಯಲ್ಲಿ ನಡೆಯಲಾಗದು, ವಿದ್ಯಾರ್ಥಿಗಳು ಉನ್ನತ ಗುರಿಗಳನ್ನು ಇಟ್ಟುಕೊಂಡು ಸಾಧನೆ ಮಾಡಲು ಶ್ರಮಿಸಬೇಕು ಎಂದು ಗೌರಿಮಠ ಶಿವಯೋಗಿ ಶಿವಾಚಾರ್ಯರು ಹೇಳಿದರು.ನಗರದ ಶ್ರೀ ಮಲ್ಲಿಕಾರ್ಜುನ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ಏರ್ಪಡಿಸಿದ್ದ ೨೦೨೩-೨೦೨೪ನೇ ಸಾಲಿನ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಸನ್ಮಾನ ಸಮಾರಂಭ ಸಾನ್ನಿಧ್ಯ ವಹಿಸಿ ಮಾತನಾಡಿದರು.ಯಾರು ಕದಿಯಲಾರದ ಸಂಪತ್ತು ವಿದ್ಯೆ, ವಿದ್ಯೆಯನ್ನು ಗಳಿಸಿ ಬೆಳೆಸಿ ವಿದ್ಯೆಯು ಗೌರವ ಮತ್ತು ಯಶಸ್ಸನ್ನು ತಂದು ಕೊಡುತ್ತದೆ. ನೀವು ಕನಸು ಕಾಣಿ ಆ ಕನಸು ನಿಮ್ಮನ್ನು ಮಲಗಲು ಬಿಡಬಾರದು. ಹೆಚ್ಚು ಹೆಚ್ಚು ಅಂಕಗಳಿಸಿ ಶಾಲೆಗೆ ಕೀರ್ತಿ ತನ್ನಿ ಎಂದರು.ಅಧ್ಯಕ್ಷತೆ ವಹಿಸಿದ್ದ ಶಾಲಾ ಮುಖ್ಯೋಪಾಧ್ಯಾಯ ಶಂಕರ ಅಕ್ಕಸಾಲಿ ಮಾತನಾಡಿ, ಹಿರಿಯ ವಿದ್ಯಾರ್ಥಿಗಳಿಂದ ಪ್ರೇರಣೆಗೊಂಡು ಪ್ರಸಕ್ತ ವರ್ಷದ ೧೦ನೇ ತರಗತಿ ವಿದ್ಯಾರ್ಥಿಗಳಿಗೆ ಅಧ್ಯಯನ ನಡೆಸಿ ಹೆಚ್ಚು ಅಂಕಗಳಿಸುವ ಮೂಲಕ ಶಾಲೆಗೆ ಹಾಗೂ ಪಾಲಕರಿಗೆ ಕೀರ್ತಿ ತರಬೇಕು ಎಂದರು. ಶಿಕ್ಷಕಿ ಪವಿತ್ರ ಬಣಕಾರ ಮಾತನಾಡಿದರು. ಇದೇ ಸಂದರ್ಭದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತಮ ಅಂಕಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.ಸನ್ಮಾನಿತ ವಿದ್ಯಾರ್ಥಿನಿ ಸೌಮ್ಯ ಹಿರೇಮಠ ಮಾತನಾಡಿ, ಶಾಲೆಯಲ್ಲಿ ಶಿಕ್ಷಕರ ಸಹಕಾರ ಹಾಗೂ ಕಠಿಣ ಪರಿಶ್ರಮದಿಂದ ಅಭ್ಯಾಸ ಮಾಡಿದ್ದರಿಂದ ಉತ್ತಮ ಅಂಕಗಳಿಸಲು ಸಾಧ್ಯವಾಯಿತು. ವಿದ್ಯಾರ್ಥಿ ಜೀವನವು ಬಂಗಾರದಂತ ಜೀವನ ಅದನ್ನು ಸದುಪಯೋಗ ಮಾಡಿಕೊಳ್ಳಿ ಎಂದರು. ವಿದ್ಯಾರ್ಥಿಗಳಾದ ಇಸ್ಮಾಯಿಲ್ ಗಣಜೂರ ಹಾಗೂ ನಾಜರಿನ್ ನೆಗಳೂರು ಅವರು ತಮ್ಮ ವಿದ್ಯಾಭ್ಯಾಸದ ಅನುಭವದ ಮಾತುಗಳನ್ನು ಹಂಚಿಕೊಂಡರು. ಕಠಿಣ ಪರಿಶ್ರಮದಿಂದ ಸಾಧನೆ ಸಾಧ್ಯ ಎಂದರು.ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಕರು, ಶಿಕ್ಷಕಿಯರು, ವಿದ್ಯಾರ್ಥಿಗಳು, ಪಾಲಕರು ಪಾಲ್ಗೊಂಡಿದ್ದರು. ಶಿಕ್ಷಕಿಯರಾದ ಲಕ್ಷ್ಮೀ ಕಂಬಾಳೆ ನಿರೂಪಿಸಿದರು. ಮಂಜುಳಾ ಈಳಿಗೇರ ಸ್ವಾಗತಿಸಿದರು. ಅಕ್ಷತಾ ವಂದಿಸಿದರು.

Share this article