ಕನ್ನಡಪ್ರಭ ವಾರ್ತೆ ಬೇಲೂರು ಪಟ್ಟಣದ ಮೂಡಿಗೆರೆ ರಸ್ತೆಯಲ್ಲಿರುವ ವಿದ್ಯಾವಿಕಾಸ ಪದವಿಪೂರ್ವ ಕಾಲೇಜಿನಲ್ಲಿ ದೇಶಭಕ್ತರ ಬಳಗದ ವತಿಯಿಂದ ನಡೆದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಈ ಸಂಸ್ಥೆಯ ಪ್ರಾಂಶುಪಾಲ ಎಂ ಎಂ ರಮೇಶ್ ಅವರನ್ನು ಸನ್ಮಾನಿಸಲಾಯಿತು.
ಸಂಸ್ಥೆಯ ಕಾರ್ಯದರ್ಶಿ ಮಲ್ಲಿಕಾರ್ಜುನ ಮೆಡಿಕಲ್ಸ್ ಮಹೇಶ್ ಮಾತನಾಡಿ, ಒಂದು ಒಳ್ಳೆಯ ಗುರಿ ಇರಬೇಕು ಮತ್ತು ಒಂದು ಒಳ್ಳೆಯ ಗುರು ಇರಬೇಕು. ಪುರಾಣ ಪುರುಷರಾದ ರಾಮಕೃಷ್ಣ, ಅರ್ಜುನ ಮುಂತಾದವರಿಗೆ ಅತ್ಯುತ್ತಮ ಗುರುಗಳು ಮಾರ್ಗದರ್ಶನ ನೀಡಿದರು. ಮತ್ತು ಶಿವಾಜಿ, ಕೃಷ್ಣದೇವರಾಯ, ಚಂದ್ರಗುಪ್ತ ಮುಂತಾದ ಧೀರರಿಗೆ ಉತ್ತಮ ಗುರುಗಳ ಮಾರ್ಗದರ್ಶನ ದೊರೆತಿದ್ದರಿಂದ ಒಂದು ಸಾಮ್ರಾಜ್ಯ ಕಟ್ಟುವುದರಲ್ಲಿ ಯಶಸ್ಸು ಮೂಡಿತು ಎಂದು ಹೇಳಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಸಂಸ್ಥೆಯ ಪ್ರಾಂಶುಪಾಲ ಎಂ. ಎಂ ರಮೇಶ್, ಈ ಸನ್ಮಾನಕ್ಕೆ ನಾನು ಆಭಾರಿಯಾಗಿದ್ದೇನೆ ಮತ್ತು ಈ ಸನ್ಮಾನದಿಂದ ನನ್ನ ಜವಾಬ್ದಾರಿ ಹೆಚ್ಚಿದೆ ಎಂದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಹಯವದನ ರಾವ್ ಮಾತನಾಡಿ, ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ ಎಂಬ ವಾಕ್ಯವನ್ನು ವಿದ್ಯಾರ್ಥಿಗಳಲ್ಲಿ ಮನಸ್ಸಿನಲ್ಲಿಟ್ಟುಕೊಳ್ಳುವಂತೆ ತಿಳಿಸಿದರು. ಈ ಕಾರ್ಯಕ್ರಮದಲ್ಲಿ ಶಿಕ್ಷಕಿ ಅನ್ನಪೂರ್ಣ ಯುವ ಸಾಹಿತಿ ನಿರಂಜನ್, ಧರ್ಮ ಪ್ರಕೃತಿ ಪವನ್ ಗ್ಲಾಸ್ ಪ್ರಕಾಶ್, ಸುಶೀಲಾ ಮತ್ತು ಇನ್ನುಳಿದ ಶಿಕ್ಷಕ ವೃಂದ ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.