- ಕೊಂಡಜ್ಜಿಯ ಪೊಲೀಸ್ ಪಬ್ಲಿಕ್ ಶಾಲೆಯಲ್ಲಿ ಶಾಲಾ ಸಂಸತ್ತಿನ ಪದವಿ ಪ್ರದಾನ ಸಮಾರಂಭ
- - -ಕನ್ನಡಪ್ರಭ ವಾರ್ತೆ ಹರಿಹರ
ಮಕ್ಕಳು ಕಲಿಕೆಯಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡು ಪ್ರಗತಿ ಕಾಣಬೇಕು. ರಾಷ್ಟ್ರದ ಸಂಪತ್ತಾಗಿ ರೂಪುಗೊಳ್ಳಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ ಹೇಳಿದರು.ತಾಲೂಕಿನ ಕೊಂಡಜ್ಜಿಯ ಪೊಲೀಸ್ ಪಬ್ಲಿಕ್ ಶಾಲೆಯಲ್ಲಿ ಶನಿವಾರ ನಡೆದ ಶಾಲಾ ಸಂಸತ್ತಿನ ಪದವಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು. ವಿದ್ಯಾರ್ಥಿಗಳು ಕಲಿಕೆಯೊಂದಿಗೆ ದೇಶಭಕ್ತಿ, ಕಾನೂನು, ಹಕ್ಕುಗಳ ಜತೆಗೆ ತಮ್ಮ ಜವಬ್ದಾರಿಗಳನ್ನು ಮೈಗೂಡಿಸಿಕೊಳ್ಳಬೇಕು ಎಂದರು.
ದೇಶದ ಸಂವಿಧಾನ ಇಡೀ ಪ್ರಪಂಚದಲ್ಲಿ ಅತ್ಯುತ್ತಮವಾದದ್ದು, ಸಂವಿಧಾನ ನಮಗೆ ಬದುಕಲು ಅಗತ್ಯವಾದ ಹಕ್ಕುಗಳನ್ನು, ದೇಶ ನಡೆಸುವ ಸಂಸತ್ತು ರಚನೆಗೆ ಅವಕಾಶ ನೀಡಿದೆ. ಅಂತೆಯೇ ನಾವು ಬದುಕಬೇಕಾದ ರೀತಿ- ನೀತಿಗಳನ್ನು ಹೇಳಿದೆ. ಇದರೊಂದಿಗೆ ಜವಾಬ್ದಾರಿಗಳನ್ನು ನೀಡಿದೆ. ಹಕ್ಕುಗಳೊಂದಿಗೆ ಜವಾಬ್ದಾರಿಗಳನ್ನು ನಿಭಾಯಿಸಲು ವಿದ್ಯಾರ್ಥಿಗಳಿಗೆ ಕಲಿಸುವುದೇ ಶಾಲಾ ಸಂಸತ್ ಉದ್ದೇಶ ಎಂದರು.ಶಾಲೆಗಳಲ್ಲಿ ನಡೆಯುವ ವಿದ್ಯಾರ್ಥಿ ನಾಯಕನ ಆಯ್ಕೆ ಪ್ರಕ್ರಿಯೆ ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆ ನೆನಪು ಮಾಡುತ್ತದೆ. ತಮ್ಮ ಜವಾಬ್ದಾರಿಗಳನ್ನು ಅರಿತು ಕಾರ್ಯನಿರ್ವಹಿಸಲು ವಿದ್ಯಾರ್ಥಿಗಳಿಗೆ ಅನುವು ಮಾಡಿಕೊಡುತ್ತದೆ. ಚುನಾವಣಾ ಆಯೋಗದ ಕಾರ್ಯವೈಖರಿ ಅತ್ಯಂತ ಸರಳ ರೀತಿಯಲ್ಲಿ ಮಕ್ಕಳಿಗೆ ತಿಳಿಸುವಂತೆ ಮಾಡುವುದಲ್ಲದೇ, ಚಿಕ್ಕಂದಿನಿಂದಲೇ ಚುನಾವಣಾ ಮಜಲುಗಳನ್ನು ಅರಿಯಲು ನೆರವಾಗುತ್ತದೆ ಎಂದು ಹೇಳಿದರು.
ಡಿಎಆರ್ ಡಿವೈಎಸ್ಪಿ ಪ್ರಕಾಶ್ ಪಿ.ಬಿ. ಮಾತನಾಡಿ, ಪ್ರಜಾಪ್ರಭುತ್ವ ಎಂಬುದು ನೀವು ಜಗತ್ತಿನಲ್ಲಿ ನೋಡಲು ಬಯಸುವ ಬದಲಾವಣೆ ಆಗಬೇಕು. ಶಾಲಾ ಸಂಸತ್ತು ಚುನಾವಣಾ ಆಯೋಗದ ನೈಜ ಕಾರ್ಯ ಮಾದರಿ ನೆನಪಿಸುತ್ತದೆ. ಮಕ್ಕಳು ಶಿಸ್ತು ಮತ್ತು ಜವಾಬ್ದಾರಿಯಿಂದ ತಮ್ಮ ಕಾರ್ಯಗಳನ್ನು ನಿರ್ವಹಿಸಬೇಕೆಂದು ಹೇಳಿದರು.ಶಾಲಾ ವಿದ್ಯಾರ್ಥಿ ಮಂಡಳಿ ನಾಯಕನಾಗಿ ಸಾತ್ವಿಕ್ ಎಸ್. ಕಾಡಜ್ಜಿ, ನಾಯಕಿಯಾಗಿ ವೇದ ಎಂ., ಕ್ರೀಡಾ ನಾಯಕಿಯಾಗಿ ಯಶಸ್ವಿನಿ ಬಿ.ಎಸ್. ಹಾಗೂ ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಸಂಘ ನಾಯಕನಾಗಿ ಗಣೇಶ್ ಯು.ಎಸ್. ಆಯ್ಕೆಯಾಗಿದ್ದು, ಅವರಿಗೆ ಪದವಿ ಪ್ರದಾನ ಮಾಡಲಾಯಿತು. ಶಾಲೆಯ ನಾಲ್ಕು ಹೌಸ್ಗಳಾದ ಕಾವೇರಿ, ಶರಾವತಿ, ನೇತ್ರಾವತಿ ಹಾಗೂ ಕೃಷ್ಣ ಹೌಸ್ ನಾಯಕ ಮತ್ತು ಉಪ ನಾಯಕರನ್ನು ಆಯ್ಕೆ ಮಾಡಲಾಯಿತು.
ಶಾಲೆಯ ಸಮಾಜ ವಿಜ್ಞಾನ ಶಿಕ್ಷಕಿ ಮಂಜುಳಾ ಮಾಗೋಡ್, ದೈಹಿಕ ಶಿಕ್ಷಕರಾದ ಹಾಲೇಶ್ ಹಾಗೂ ಸವಿತಾ, ಹರ್ಷಿಯ, ರಾಜು ಕಾರ್ಯಕ್ರಮ ಆಯೋಜಿಸಿದ್ದರು. ಶಾಲೆ ಪ್ರಭಾರ ಪ್ರಾಂಶುಪಾಲೆ ವಿನುತ ಆರ್.ಎನ್. ಹಾಗೂ ಬೋಧಕ- ಬೋಧಕೇತರ ಸಿಬ್ಬಂದಿ ಮತ್ತು ಪೋಷಕರು ಉಪಸ್ಥಿತರಿದ್ದರು.- - -
(ಕೋಟ್)ಮಕ್ಕಳು ಎದುರಿಸುವ ಮಾನಸಿಕ ಹಾಗೂ ದೈಹಿಕ ಸವಾಲುಗಳನ್ನು ಶಿಕ್ಷಕರು ಅರಿತು ಪರಿಹಾರ ನೀಡಬೇಕು. ಆ ಮೂಲಕ ಮಕ್ಕಳ ಸಾಮಾಜಿಕ ಅಭಿವೃದ್ಧಿಗೆ ಪೂರಕ ವಾತಾವರಣ ಕಲ್ಪಿಸಬೇಕು. ಪೊಲೀಸ್ ಪಬ್ಲಿಕ್ ಶಾಲೆ ಈ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತ, ಮಕ್ಕಳ ಸರ್ವಾಂಗೀಣ ಪ್ರಗತಿಗೆ ಶ್ರಮಿಸುತ್ತಿದೆ.
- ಉಮಾ ಪ್ರಶಾಂತ, ಜಿಲ್ಲಾ ಎಸ್ಪಿ- - -
-19ಎಚ್ಆರ್ಆರ್02.ಜೆಪಿಜಿ:ಸಮಾರಂಭದಲ್ಲಿ ಎಸ್ಪಿ ಉಮಾ ಪ್ರಶಾಂತ್, ಡಿವೈಎಸ್ಪಿ ಪ್ರಕಾಶ್ ಪಿ.ಬಿ., ಪ್ರಾಂಶುಪಾಲೆ ವಿನುತ ಆರ್.ಎನ್. ಇತರರು ಭಾಗವಹಿಸಿದ್ದರು.