ಹರಪನಹಳ್ಳಿ: ವಿದ್ಯಾರ್ಥಿಗಳು ಗುರಿ ಕಡೆಗೆ ಹೆಚ್ಚು ಗಮನ ಕೊಟ್ಟು ಸುಂದರ ಭವಿಷ್ಯ ರೂಪಿಸಿಕೊಳ್ಳಿ ಎಂದು ಶಾಸಕಿ ಎಂ.ಪಿ.ಲತಾ ಮಲ್ಲಿಕಾರ್ಜುನ ಹೇಳಿದರು.
ನೂತನ ವಸತಿ ನಿಲಯವನ್ನು ವಿದ್ಯಾರ್ಥಿಗಳು ಒಳ್ಳೆಯ ರೀತಿಯಲ್ಲಿ ಸದುಪಯೋಗ ಪಡಿಸಿಕೊಳ್ಳಬೇಕು. ಕೊಠಡಿಗಳನ್ನು ನಿಮ್ಮ ಮನೆಯಂತೆ ಸ್ವಚ್ಛವಾಗಿ ಇಟ್ಟುಕೊಳ್ಳಿ, ಬೇರೆಯವರ ಸಾಧನೆ ನೋಡಿ ಅಸೂಯೆ ಪಡಬೇಡಿ, ನಿಮ್ಮ ಓದನ್ನು ಉತ್ತಮಪಡಿಸಿಕೊಳ್ಳಿ ಎಂದ ಅವರು, ಹಾಸ್ಟೆಲ್ನಲ್ಲಿರುವ ಸ್ನೇಹಿತರ ಜೊತೆ ಉತ್ತಮ ಸಂಬಂಧಗಳನ್ನು ಬೆಳೆಸಿಕೊಳ್ಳಿ, ಉತ್ತಮ ಸಂಬಂಧದಿಂದ ಸುಸಂಸ್ಕೃತವಾಗಿರಲು ಸಾಧ್ಯ ಎಂದರು.
ತಮ್ಮ ಮನಸ್ಸನ್ನು ಬೇರೆ ಕಡೆ ಹರಿಸದೆ, ಉತ್ತಮ ಆರೋಗ್ಯ ಕಾಪಾಡಿಕೊಳ್ಳಿ, ನಿಲಯಪಾಲಗೆ ಅಡುಗೆ ಸಿಬ್ಬಂದಿಗಳಿಗೆ ಗೌರವ ಕೊಡಿ, ನೀವು ವಸತಿ ನಿಲಯ ಬಿಟ್ಟು ಹೋಗುವಾಗ ಅವರನ್ನು ಪ್ರೀತಿಯಿಂದ ಕಳಿಸಿಕೊಡುವಂತೆ ಉತ್ತಮ ನಡೆತೆಯನ್ನು ರೂಢಿಸಿಕೊಳ್ಳಿ ಎಂದು ಕಿವಿ ಮಾತು ಹೇಳಿದರು.ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾಧಿಕಾರಿ ಜಿ.ಶಶಿಕಲಾ ಪ್ರಾಸ್ತಾವಿಕವಾಗಿ ಮಾತನಾಡಿ, ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿಯ ಉದ್ದೇಶಕ್ಕಾಗಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸ್ಥಾಪನೆಯಾಗಿದೆ. ವಿಜಯನರ ಜಿಲ್ಲೆಯಲ್ಲಿ 68 ವಸತಿ ನಿಲಯಗಳು ಕಾರ್ಯ ನಿರ್ವಹಿಸುತ್ತಿವೆ. ಹರಪನಹಳ್ಳಿ ತಾಲೂಕಿನಲ್ಲಿ 13 ವಸತಿ ನಿಲಯಗಳಿದ್ದು, ಈ ಮೊದಲು ಬಹುತೇಕ ಹಾಸ್ಟೇಲ್ಗಳು ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿದ್ದು, ಈಗ 10 ವಸತಿ ನಿಲಯಗಳಿಗೆ ಸ್ವಂತ ಕಟ್ಟಡಗಳಾಗಿವೆ. ಇನ್ನೂ ಮೂರು ಕಟ್ಟಡ ಬಾಡಿಗೆಯಲ್ಲಿ ನಡೆಯುತ್ತಿದ್ದು ಇವುಗಳನ್ನು ಸಹ ಸ್ವಂತ ಕಟ್ಟಡ ನಿರ್ಮಾಣಕ್ಕೆ ಶಾಸಕರು ಅವಕಾಶ ಮಾಡಿಕೊಡಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಟಿ.ವೆಂಕಟೇಶ, ಪುರಸಭೆ ಸದಸ್ಯರಾದ ಅಬ್ದುಲ್ ರೆಹಮಾನ್, ಜಾಕೀರ್ ಹುಸೇನ ಸರ್ಖಾವಸ್, ಗುಡಿ ನಾಗರಾಜ, ಅಭಿಯಂತರ ಬಿ.ಆರ್.ಸುನೀಲ್ ಕುಮಾರ, ತಾಪಂ ಇಒ ವೈ.ಎಚ್.ಚಂದ್ರಶೇಖರ, ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಕೆ.ಭೀಮಪ್ಪ, ಮುಖಂಡರಾದ ಮತ್ತೂರು ಬಸವರಾಜ, ಮೈದೂರು ರಾಮಣ್ಣ, ಕೆ.ಎಂ.ಗುರುಸಿದ್ದಯ್ಯ, ಚಿಕ್ಕೇರಿ ಬಸಣ್ಣ, ಇಸ್ಮಾಯಿಲ್ ಎಲಿಗಾರ ತಿಮ್ಮಾಲಾಪುರ ಈಶ್ವರ, ನಿಲಯ ಪಾಲಕರಾದ ಬಿ.ಎಚ್.ಚಂದ್ರಪ್ಪ, ಜುಂಜಪ್ಪ, ವೀರಣ್ಣ, ಸುನೀಲ್, ಪ್ರೇಮಾವತಿ, ಶೃತಿ, ಅನ್ನಪೂರ್ಣ, ಸಿಬ್ಬಂದಿ ಸಿದ್ದೇಶ ರೆಡ್ಡಿ, ಸುನೀಲ್ ವಿದ್ಯಾರ್ಥಿಗಳು ಇದ್ದರು.