ವಿದ್ಯಾರ್ಥಿಗಳು ಪಠ್ಯ ಪುಸ್ತಕಕ್ಕೇ ಸೀಮಿತ ಆಗದಿರಲಿ: ಡಾ.ಮಂತರ್‌ ಗೌಡ

KannadaprabhaNewsNetwork |  
Published : Jun 17, 2024, 01:31 AM IST
ಪ್ರತಿಭಾ ಪುರಸ್ಕಾರ ಹಾಗೂ ಸಾಧಕರಿಗೆ ಸನ್ಮಾನ‌ ಕಾರ್ಯಕ್ರಮ | Kannada Prabha

ಸಾರಾಂಶ

ಗರಿಷ್ಠ ಅಂಕ ಗಳಿಸಿದ ಸಮುದಾಯದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮ ಮುಳ್ಳಸೋಗೆ ತಪೋವನ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿತ್ತು.

ಕನ್ನಡಪ್ರಭ ವಾರ್ತೆ ಕುಶಾಲನಗರ

ಕೊಡಗು ಜಿಲ್ಲಾ ಕ್ರೈಸ್ತ ಸೇವಾ ಸಂಘದ ಕುಶಾಲನಗರ ಘಟಕದ ಆಶ್ರಯದಲ್ಲಿ ಎಸ್ಸೆಸ್ಸೆಲ್ಸಿ, ಪಿಯುಸಿಯಲ್ಲಿ ಗರಿಷ್ಠ ಅಂಕ‌ಗಳಿಸಿದ ಸಮುದಾಯದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಸಾಧಕರಿಗೆ ಸನ್ಮಾನ‌ ಕಾರ್ಯಕ್ರಮ ಮುಳ್ಳುಸೋಗೆ ತಪೋವನ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸನ್ಮಾನ‌ ಹಾಗೂ ಪ್ರತಿಭಾ ಪುರಸ್ಕಾರ ನೆರವೇರಿಸಿ ಮಾತನಾಡಿದ ಮಡಿಕೇರಿ ಶಾಸಕ ಡಾ.ಮಂಥರ್ ಗೌಡ, ವಿದ್ಯಾರ್ಥಿಗಳು ಕೇವಲ ಪಠ್ಯ ಪುಸ್ತಕಗಳಿಗೆ ಮಾತ್ರ ಶಿಕ್ಷಣ ಸೀಮಿತವಾಗಬಾರದು. ವಿದ್ಯಾರ್ಥಿಗಳು ಸರ್ವತೋಮುಖ‌ ಬೆಳವಣಿಗೆ ಹೊಂದುವ ಮೂಲಕ ಸಮಾಜದ ಮುಖ್ಯ ವಾಹಿನಿಯಲ್ಲಿ ತೊಡಗಿಸಿಕೊಳ್ಳಬೇಕು ಎಂದರು.

ಕೌಶಲ್ಯಗಳನ್ನು ಹಾಗೂ ಸಾಮಾಜಿಕವಾಗಿ ಎಲ್ಲರೊಂದಿಗೆ ಬೆರೆಯುವ ಗುಣ ಅಳವಡಿಸಿಕೊಂಡು ಶಿಸ್ತುಬದ್ಧ ಜೀವನ ರೂಢಿಸಿಕೊಂಡಾಗ ಜೀವನದಲ್ಲಿ ಯಶಸ್ಸು ಗುರಿ ಸಾಧಿಸಲು ಸಾಧ್ಯ. ಉತ್ತಮ ಅಂಕ‌ ಪಡೆದ ವಿದ್ಯಾರ್ಥಿಗಳನ್ನು ಹೊರತುಪಡಿಸಿ ಅವಕಾಶ ವಂಚಿತ ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿಗೆ ಕೂಡ ಸಂಘ ಸಂಸ್ಥೆಗಳು ಕಾಳಜಿ ವಹಿಸುವಂತಾಗಬೇಕಿದೆ ಎಂದು ಹೇಳಿದರು.

ಕೊಡಗು ಜಿಲ್ಲಾ ಕ್ರೈಸ್ತ ಸೇವಾ ಸಂಘದ ಅಧ್ಯಕ್ಷ ಕೆ.ಟಿ.ಬೇಬಿ‌ ಮ್ಯಾಥ್ಯು‌ ಮಾತನಾಡಿ, ಕೊಡಗು ಜಿಲ್ಲಾ ಕ್ರೈಸ್ತ ಸೇವಾ ಸಂಘ ರಾಜಕೀಯ ರಹಿತವಾಗಿ ಸರ್ಕಾರದ ಸೌಲಭ್ಯಗಳನ್ನು ಸಮುದಾಯದ ಎಲ್ಲರಿಗೂ ಮನೆ ಬಾಗಿಲಿಗೆ ತಲುಪಿಸುವ ಕೆಲಸ ಮಾಡಿಕೊಂಡು ಬರುತ್ತಿದೆ ಎಂದರು.

ಕುಶಾಲನಗರ ಪುರಸಭಾ ಸದಸ್ಯ ಪ್ರಮೋದ್ ಮುತ್ತಪ್ಪ ಮಾತನಾಡಿ, ಮಕ್ಕಳನ್ನು ಸುಶಿಕ್ಷಿತರಾಗಿಸುವುದರೊಂದಿಗೆ ಉತ್ತಮ ನಾಗರಿಕರನ್ನಾಗಿಸುವ ಅಗತ್ಯವಿದೆ. ಕೇವಲ ಅಂಕಗಳಿಗೆ ಸೀಮಿತಗೊಳಿಸದೆ ಅವರಲ್ಲಿ ಸಾಮಾಜಿಕ ಮೌಲ್ಯಗಳನ್ನು ಬಿತ್ತಬೇಕಿದೆ ಎಂದು ಕರೆ ನೀಡಿದರು.

ಗ್ಯಾರಂಟಿ ಅನುಷ್ಠಾನ ಸಮಿತಿಯ ತಾಲೂಕು ಅಧ್ಯಕ್ಷ ವಿ.ಪಿ.ಶಶಿಧರ್ ಮಾತನಾಡಿ, ದೇಶದ ಭವಿಷ್ಯತ್ತಿನ ನಿರ್ಮಾತೃಗಳಾದ ಯುವ ಸಮೂಹದಲ್ಲಿ‌ ಸಾಮಾಜಿಕ ಬದ್ಧತೆ, ಹೊಣೆಗಾರಿಕೆ, ನೈತಿಕತೆ, ಉತ್ತಮ ಸಂಸ್ಕಾರ ಬಿತ್ತನೆ ಮಾಡಬೇಕಿದೆ. ಕೇವಲ ಅಂಕಗಳಿಂದ ಮಾತ್ರ ವಿದ್ಯಾರ್ಥಿಗಳ ಪ್ರತಿಭೆಗಳನ್ನು ಅಳೆಯುವ ಪರಿಪಾಠ ಕಡಿಮೆಯಾಗಬೇಕಿದೆ. ಎಲ್ಲೆಡೆ ಪ್ರೀತಿ, ವಿಶ್ವಾಸ ಪಸರಿಸುವ ಅನಿವಾರ್ಯತೆ ಎದುರಾಗಿದೆ. ಸಹನೆ, ಪ್ರೀತಿಯ ಸಂದೇಶಗಳನ್ನು ಸಾರಿದ ಏಸುಕ್ರಿಸ್ತ ಹಾಗೂ ಆತನ ಅನುಯಾಯಿಗಳು ಶಾಂತಿ, ಸೌಹಾರ್ದತೆಯ ಮೇಲೆ ಕಲ್ಪಿಸಿದ್ದಾರೆ ಎಂದರು.

ಕೊಡಗು ಜಿಲ್ಲಾ ರೋಮನ್ ಕೆಥೋಲಿಕ್ ಸಂಘದ ಅಧ್ಯಕ್ಷ ಜಾನ್ಸನ್ ಪಿಂಟೋ ಮಾತನಾಡಿದರು.

ಕ್ರೈಸ್ತ ಸೇವಾ ಸಂಘದ ಕುಶಾಲನಗರ ಘಟಕದ ಅಧ್ಯಕ್ಷ ಎನ್.ಟಿ.ಜೋಸೆಫ್ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ತಪೋವನದ ಫಾ.ಜೋಸೆಫ್, ಫಾ.ಲಾರೆನ್ಸ್ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ಕಾರ್ಯಕ್ರಮದಲ್ಲಿ ವೈದ್ಯರಾದ ಡಾ.ರೂಬಲ್‌ ಕೋಟ್ಸ್, ಡಾ.ಪ್ರಣಿತ ಸಲ್ಡಾನ, ರಾಜ್ಯಮಟ್ಟದ ಚೆಸ್ ಆಟಗಾರ ಎ.ಅಗಸ್ಟಿನ್ ಸೇರಿದಂತೆ ಉತ್ತಮ ಅಂಕಗಳಿಸಿದ ವಿದ್ಯಾರ್ಥಿಗಳು ಹಾಗೂ ಪೋಷಕರಿಗೆ ಸನ್ಮಾನಿಸಿ, ಪ್ರೋತ್ಸಾಹ ಧನ‌ ವಿತರಿಸಲಾಯಿತು.

ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಕೈಸರ್ ಪೋರ್ಶೆರಾ, ಕ್ರೈಸ್ತ ಸಂಘದ ಉಪಾಧ್ಯಕ್ಷ ಪ್ಯಾಟ್ರಿಕ್, ಕಾರ್ಯದರ್ಶಿ ಸಲೀನಾ ಡಿ ಕುನ್ನಾ, ಸಹ ಕಾರ್ಯದರ್ಶಿ ಜೇಮ್ಸ್ ಡಿಸೋಜ, ಖಜಾಂಚಿ ಆಲ್ಬರ್ಟ್ ಗೋನ್ಸಲ್ವೆಸ್ ಸೇರಿದಂತೆ ಆಡಳಿತ ಮಂಡಳಿ ಪದಾಧಿಕಾರಿಗಳು, ಸದಸ್ಯರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗದ್ದಲದ ನಡುವೆ, ಚರ್ಚೆಯೇ ಇಲ್ಲದೆ ದ್ವೇಷ ಭಾಷಣ ತಡೆ ಮಸೂದೆ ಪಾಸ್‌
ನಗರದ 75 ಜಂಕ್ಷನ್‌ ಅಭಿವೃದ್ಧಿಗೆ ಗ್ರಹಣ!