ಇಲ್ಲಿನವರು ಯುಗಾದಿಯಲ್ಲಿ ಬೇವು- ಬೆಲ್ಲ ತಿನ್ನುವುದಿಲ್ಲ. ಹಬ್ಬ ಮಾಡುವವರು ಬೇವು- ಬೆಲ್ಲ ನೀಡಿದರೆ ಮಾತ್ರ ತಿನ್ನುತ್ತಾರೆ.

ಭೀಮಣ್ಣ ಗಜಾಪುರ

ಕೂಡ್ಲಿಗಿ: ಯುಗಾದಿ ಎಂದರೆ ಇಡೀ ನಾಡಿಗೆ ನಾಡೇ ಸಂಭ್ರಮಿಸುತ್ತಿದೆ. ಪ್ರಕೃತಿಯ ಬದಲಾವಣೆಯ ಹೊಸ ವರ್ಷವನ್ನು ಎಲ್ಲರೂ ಸಡಗರ, ಸಂಭ್ರಮದಿಂದ ಆಚರಣೆ ಮಾಡಿದರೆ ಕೂಡ್ಲಿಗಿ ತಾಲೂಕು ಸೇರಿದಂತೆ ವಿಜಯನಗರ, ಬಳ್ಳಾರಿ ಜಿಲ್ಲೆಯ ಸಾವಿರಾರು ಹಳ್ಳಿಗಳ ಕೆಲವು ಕುಟುಂಬಗಳು ಯುಗಾದಿಯಂದು ಸಂಭ್ರಮಿಸುವ ಬದಲು ಸೂತಕದ ಛಾಯೆಯಲ್ಲಿಯೇ ಇರುತ್ತಾರೆ.

ಇಲ್ಲಿನವರು ಯುಗಾದಿಯಲ್ಲಿ ಬೇವು- ಬೆಲ್ಲ ತಿನ್ನುವುದಿಲ್ಲ. ಹಬ್ಬ ಮಾಡುವವರು ಬೇವು- ಬೆಲ್ಲ ನೀಡಿದರೆ ಮಾತ್ರ ತಿನ್ನುತ್ತಾರೆ. ಹಳ್ಳಿಗಳಲ್ಲಿ ಹಬ್ಬ ಆಚರಿಸದ ಕುಟುಂಬಗಳಿಗೆ ತಮ್ಮ ಸಂಬಂಧಿಕರು ಬೇವು- ಬೆಲ್ಲವನ್ನು ಮನೆ ಮನೆಗೆ ಹೋಗಿ ನೀಡುತ್ತಾರೆ. ಕೂಡ್ಲಿಗಿ, ಗಜಾಪುರ, ತಿಮ್ಮಲಾಪುರ, ಕಂದಗಲ್ಲು, ಕೊಟ್ಟೂರು, ಸಂಡೂರು ತಾಲೂಕಿನ ದೇವರ ಮಲ್ಲಾಪುರ ಸೇರಿದಂತೆ ಹಲವು ಹಳ್ಳಿಗಳಲ್ಲಿ ನೂರಾರು ಕುಟುಂಬಗಳು ಹಬ್ಬ ಮಾಡುವುದಿಲ್ಲ. ಗಜಾಪುರದಲ್ಲಿ ಯುಗಾದಿ ಅಮಾವಾಸ್ಯೆ, ಯುಗಾದಿಯಂದು ಸ್ನಾನ ಮಾಡುವುದಿಲ್ಲ. ಯುಗಾದಿಯ ನಂತರದಲ್ಲಿ ಚಂದ್ರಮಾನ ಯುಗಾದಿಯಂದು ಸ್ನಾನ ಮಾಡಿ, ಸಿಹಿ ಮಾಡಿ ಊಟ ಮಾಡುತ್ತಾರೆ. ನಂತರ ಬರುವ ಹುಣ್ಣಿಮೆಯನ್ನು ಇಲ್ಲಿಯ ಜನತೆ ಹಂಪಿ ಹುಣ್ಣಿಮೆ ಎಂದು ಕರೆಯುತ್ತಾರೆ. ಅಂದು ಮನೆಗೆ ತೋರಣ ಕಟ್ಟಿ, ಸಿಹಿ ಊಟ ಮಾಡಿ ಪೂಜೆ ಮಾಡಿ ಯುಗಾದಿಯನ್ನು ಆಚರಣೆ ಮಾಡುತ್ತಾರೆ.

ಅಖಂಡ ಕೂಡ್ಲಿಗಿ ತಾಲೂಕಿನಲ್ಲಿ ಹಿಂದುಳಿದ ವರ್ಗಗಳಾದ ಬಾರಿಕರು, ಉಪ್ಪಾರರು, ವಾಲ್ಮೀಕಿ ಸಮುದಾಯದ ಕೆಲವು ಕುಟುಂಬಗಳು ಹತ್ತಾರು ತಲೆಮಾರುಗಳಿಂದಲೂ ಯುಗಾದಿ ಆಚರಣೆ ಮಾಡದೇ ಮೌನವಾಗಿ ಬಹಿಷ್ಕಾರ ಹಾಕುತ್ತಾ ಬಂದಿದ್ದಾರೆ. ಏಕೆ ಎಂದು ಕೇಳಿದರೆ ನಮ್ಮ ಅಜ್ಜ, ಮುತ್ತಜ್ಜರ ಕಾಲದಿಂದಲೂ ನಮ್ಮ ಕುಟುಂಬಗಳಲ್ಲಿ ಯುಗಾದಿ ಮಾಡಿಲ್ಲ. ಹೀಗಾಗಿ ನಾವೂ ಮಾಡುವುದಿಲ್ಲ. ಒಂದು ವೇಳೆ ಯುಗಾದಿ ಆಚರಿಸಿದರೆ ನಮಗೆ ಕೇಡಾಗುತ್ತದೆ ಎನ್ನುತ್ತಾರೆ ಯುಗಾದಿ ಆಚರಿಸದ ಕುಟುಂಬಗಳ ಯಜಮಾನರು. ಆದರೆ ನಿಖರವಾದ ಕಾರಣ, ಆಚರಿಸದಿರುವುದರ ಹಿನ್ನೆಲೆಯ ಬಗ್ಗೆ ಯಾರಿಗೂ ಅಷ್ಟೊಂದು ಅರಿವಿಲ್ಲ. ಇವರ ಪೂರ್ವಿಕರು, ಹಿಂದಿನವರು ಆಚರಿಸುತ್ತಿರಲಿಲ್ಲ, ಅದಕ್ಕೇ ನಾವೂ ಆಚರಿಸುತ್ತಿಲ್ಲ ಎನ್ನುತ್ತಾರೆ.

ಇದು ಮೂಢನಂಬಿಕೆಯ ಪರಮಾವಧಿಯೋ, ಪರಂಪರೆಯೋ? ಎನ್ನುವ ಪ್ರಶ್ನೆ ನಮ್ಮ ಮುಂದೆ ಬರುತ್ತದೆ. ಆ ಕುಟುಂಬಗಳಲ್ಲಿರುವ ವಿದ್ಯಾವಂತರು, ಸರ್ಕಾರಿ ನೌಕರಿ ಪಡೆದವರು, ಪ್ರಜ್ಞಾವಂತ ಕುಟುಂಬದವರು ಸಹ ಯುಗಾದಿಯನ್ನು ಆಚರಿಸುವುದಿಲ್ಲ. ಸಮಾಜ ಇಷ್ಟೆಲ್ಲ ಮುಂದುವರೆದರೂ ನಮ್ಮ ಪೂರ್ವಜರು ಬಿಟ್ಟು ಹೋದ ಆಚರಣೆಗಳು, ಮೂಢನಂಬಿಕೆಗಳು ಎಐ ಯುಗದಲ್ಲಿಯೂ ಮುಂದುವರೆದುಕೊಂಡು ಬಂದಿರುವುದು ಮಾತ್ರ ಸೋಜಿಗದ ಸಂಗತಿಯಾಗಿದೆ.

ಯುಗಾದಿಯಂದು ಹಿಂದೆ ನಮ್ಮ ಹಿರಿಯರಿಗೆ ಕೇಡು ಆಗಿತ್ತಂತೆ. ಹೀಗಾಗಿ ನಾವು ಆಚರಿಸಲ್ಲ. ಅಂದು ನಾವು ಹೊಸಬಟ್ಟೆ, ಹೊಸ ವಸ್ತು ಖರೀದಿಸಲ್ಲ. ತಲೆಗೆ ಎಣ್ಣೆ ಹಚ್ಚಲ್ಲ. ಸಿಹಿ ಊಟ ಮನೆಯಲ್ಲಿ ಮಾಡಿ ಪೂಜೆ ಮಾಡಲ್ಲ. ಎರಡು- ಮೂರು ದಿನ ಸ್ನಾನ ಮಾಡಲ್ಲ. ಒಂದು ವೇಳೆ ಹಬ್ಬ ಮಾಡಲು ಮುಂದಾದರೆ ನಮಗೆ ಭಯ ಕಾಡುತ್ತೆ ಎನ್ನುತ್ತಾರೆ ಗಜಾಪುರ ನಿವಾಸಿ ಕೊಟ್ರಪ್ಪ.