)
-ಯಾದಗಿರಿ-ಸೇಡಂ ಬಸ್ ಸಂಪರ್ಕ ಸಮಸ್ಯೆಗೆ ಬೇಸತ್ತು ವಿದ್ಯಾರ್ಥಿಗಳು ಪ್ರತಿಭಟನೆ | ಬಸ್ ತಡೆದು ವಿದ್ಯಾರ್ಥಿಗಳ ಆಕ್ರೋಶ
ಕನ್ನಡಪ್ರಭ ವಾರ್ತೆ ಯಾದಗಿರಿ
ತಾಲೂಕಿನ ಹತ್ತಿಕುಣಿ ಗ್ರಾಮಕ್ಕೆ ಶಾಲಾ, ಕಾಲೇಜು ಸಮಯದಲ್ಲಿ ಬಸ್ ಬರುವುದಿಲ್ಲ ಎಂದು ಹತ್ತಿಕುಣಿ ಗ್ರಾಮ ಸೇರಿದಂತೆ ಯಡ್ಡಳ್ಳಿ, ಬಂದಳ್ಳಿ ಮಾರ್ಗದ ವಿದ್ಯಾರ್ಥಿಗಳು ಬಸ್ ತಡೆದು ರಸ್ತೆಯಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು.ಕಳೆದ 15 ದಿನಗಳಿಂದ ಬಸ್ ಸಮಸ್ಯೆ ಬಗ್ಗೆ ಮೇಲಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ, ದಿನೆ ದಿನೆ ಸಮಸ್ಯೆ ದೊಡ್ಡದಾಗುತ್ತಿದೆ ಹೊರತು ಪರಿಹಾರ ಸಿಕ್ಕಿಲ್ಲ, ಬೆಳಿಗ್ಗೆ 8 ಗಂಟೆಯಿಂದ ಶಾಲಾ, ಕಾಲೇಜು ವಿದ್ಯಾರ್ಥಿಗಳು ಬಸ್ ಗಾಗಿ ಕಾದು ಸೇಡಂದಿಂದ ತುಂಬಿ ತುಳುಕಾಡುವ ಬಸ್ನಲ್ಲಿಯೇ ನೇತಾಡಿಕೊಂಡು ತೆರಳುವಾಗ ಜೀವ ಬಾಯಿಗೆ ಬಂದಿರುತ್ತದೆ ಎಂದು ಪ್ರತಿಭಟನಾ ನಿರತ ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿದಿನ ಸೇಡಂ ಮಾರ್ಗದಿಂದ ಬೆರಳಿಕೆಯಷ್ಟು ಬಸ್ ಯಾದಗಿರಿ ಕಡೆಗೆ ಬರುತ್ತವೆ, ಹಂದರಕಿ, ಭೀಮನಳ್ಳಿ ಗ್ರಾಮದಿಂದ ಜನರನ್ನು ತುಂಬಿಕೊಂಡು ಬಂದಾಗ ನಮಗೆ ನಿಲ್ಲಲು ಸಹ ಸ್ಥಳವಿಲ್ಲದೆ ಪರದಾಡಬೇಕಾಗುತ್ತದೆ, ಒಮ್ಮೊಮ್ಮೆ ತುಂಬಿದ ಬಸ್ ಗಳು ಟಯರ್ ಬ್ಲಾಸ್ಟ್ ಆದ ಎಷ್ಟೋ ಘಟನೆ ನಡೆದಿವೆ, ಇನ್ನು ನಿರ್ವಾಹಕರು ನಿಲ್ಲಿಸು ಎಂದರೂ ಚಾಲಕರು ನಿಲ್ಲಿಸದೆ ತೆರಳುವ ಯಾದಗಿರಿಗೆ ಬರುವ ನಿರ್ಲಕ್ಷ್ಯ ತನವನ್ನು ವಿದ್ಯಾರ್ಥಿಗಳು ಹೇಳಿದರು.
ವಿಷಯ ತಿಳಿದು ಗ್ರಾಮೀಣ ಪೊಲೀಸ್ ಠಾಣೆ ಪಿಎಸ್ಐ ವಿರೇಶ, ಸಾರಿಗೆ ಇಲಾಖೆ ಇನ್ಸಪೆಕ್ಟರ್ ಬಸಣ್ಣಗೌಡ ಇನ್ನೊಂದು ಬಸ್ ತೆಗೆದುಕೊಂಡು ಗ್ರಾಮಕ್ಕೆ ಆಗಮಿಸಿ, ವಿಧ್ಯಾರ್ಥಿಗಳ ಹಾಗೂ ಗ್ರಾಮದ ಮುಖಂಡರ ಜೊತೆ ಮಾತುಕತೆಯಾಡಿ, ಸಮಸ್ಯೆ ಮಾಹಿತಿ ಪಡೆದು ಮೇಲಾಧಿಕಾರಿಗಳೊಂದಿಗೆ ದೂರವಾಣಿ ಮೂಲಕ ಮಾತನಾಡಿ, ಆದಷ್ಟೂ ಬೇಗ ವಿಧ್ಯಾರ್ಥಿಗಳ ಬೇಡಿಕೆ ಈಡೇರಿಸಲಾಗುವುದು ಎಂದು ಭರವಸೆ ನೀಡಿ, ಸಮಾಧಾನಪಡಿಸಿದ ನಂತರ ಪ್ರತಿಭಟನೆ ಹಿಂತೆಗೆದುಕೊಂಡು ಬಸ್ಗಳಲ್ಲಿ ನಗರಕ್ಕೆ ವಿಧ್ಯಾರ್ಥಿಗಳು ಆಗಮಿಸಿದರು.
ಬಾಕ್ಸ್