ಸವಣೂರು: ಪಂಚ ಗ್ಯಾರಂಟಿ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿದೆ. ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಸಮರ್ಪಕವಾಗಿ ಅನುಷ್ಠಾನಗೊಳಿಸಬೇಕು ಎಂದು ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಸುಭಾಸ ಮಜ್ಜಗಿ ತಿಳಿಸಿದರು.ಪಟ್ಟಣದ ಹೊರವಲಯದಲ್ಲಿರುವ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಜರುಗಿದ ಪಂಚ ಗ್ಯಾರಂಟಿ ಯೋಜನೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ಪಂಚ ಗ್ಯಾರಂಟಿ ಯೋಜನೆಗಳು ಪ್ರತಿಯೊಂದು ಹಳ್ಳಿಯ ಪ್ರತಿ ಕಟ್ಟ ಕಡೆ ವ್ಯಕ್ತಿಗೂ ತಲುಪುವ ಕೆಲಸವಾಗಬೇಕಿದೆ. ಅಧಿಕಾರಿಗಳೊಂದಿಗೆ ಸಮಿತಿ ಸದಸ್ಯರು ಸಹ ಕೈಜೋಡಿಸಲು ಸನ್ನದ್ಧರಾಗಿ ಪಂಚ ಗ್ಯಾರಂಟಿಗಳನ್ನು ಪ್ರತಿ ಮನೆಗಳಿಗೆ ತಲುಪಿಸಲು ಪ್ರಾಮಾಣಿಕ ಪ್ರಯತ್ನ ಮಾಡೋಣ ಎಂದರು. ತಾಲೂಕಿನಲ್ಲಿ ಬಿಪಿಎಲ್, ಅಂತ್ಯೋದಯ, ಎಪಿಎಲ್ ಸೇರಿದಂತೆ ಒಟ್ಟು 42190 ಕಾರ್ಡ್ಗಳಿವೆ. ಅದರಲ್ಲಿ ಕೇವಲ 39310 ಕಾರ್ಡ್ಗಳಿಗೆ ಮಾತ್ರ ಗೃಹಲಕ್ಷ್ಮಿ ಯೋಜನೆ ತಲುಪುತ್ತಿದೆ. ಇನ್ನುಳಿದ ಕಾರ್ಡ್ಗಳಿಗೆ ಇನ್ನೂವರೆಗೂ ಏಕೆ ಯೋಜನೆಯ ಲಾಭ ಮುಟ್ಟುತ್ತಿಲ್ಲ ಎಂದು ಪ್ರಶ್ನಿಸಿದರು.
ಸಿಡಿಪಿಒ ಉಮಾ ಕೆ.ಎಸ್. ಮಾತನಾಡಿ, ಇದರಲ್ಲಿ 280 ಜಿಎಸ್ಟಿ ಪಾವತಿದಾರರು ಇದ್ದಾರೆ. 167 ಮರಣ ಹೊಂದಿರುವ ಫಲಾನುಭವಿಗಳ ವಾರಸುದಾರರ ಕುಟುಂಬಗಳಿಗೆ ಮುಂದಿನ ದಿನಗಳಲ್ಲಿ ಯೋಜನೆ ತಲುಪಿಸಲಾಗುವುದು. ಎಪಿಎಲ್ ಕಾರ್ಡದಾರರು ಈ ಯೋಜನೆಯ ಲಾಭದಿಂದ ಹಿಂದೆ ಉಳಿದಿದ್ದಾರೆ. ಅಂತಹ ಫಲಾನುಭವಿಗಳನ್ನು ಪತ್ತೆ ಹಚ್ಚಿ ಅವರಿಂದಲೂ ಅರ್ಜಿ ಸ್ವೀಕರಿಸಲು ತಿಳಿಸಲಾಗುವುದು ಎಂದರು.ಪಾಲನೆಯಾಗದ ಅನುಪಾಲನೆ:
ಕಳೆದ ಮೂರು ಸಭೆಗಳಲ್ಲಿ ಹೂವಿನಶಿಗ್ಲಿ ಗ್ರಾಮದ ಮಾರ್ಗಕ್ಕೆ ಬಸ್ ಆರಂಭಿಸಲು ಸೂಚಿಸಿದರೂ ಪಾಲನೆಯಾಗಿಲ್ಲ. ಪಕ್ಕದಲ್ಲಿರುವ ನಾಯಿಕೆರೂರು ಗ್ರಾಮಕ್ಕೆ ಹೊಸ ಮಾರ್ಗ ಮಾಡಲು ವಿಭಾಗೀಯ ವ್ಯವಸ್ಥಾಪಕರಿಗೆ ಪ್ರಸ್ತಾವ ಸಲ್ಲಿಸಲಾಗಿದೆ. ಅವರ ಆದೇಶದ ನಂತರ ಹೊಸ ಮಾರ್ಗಕ್ಕೆ ಬಸ್ ಸಂಚಾರಗೊಳಲಿದೆ ಎಂದರು.ಹಿರೇಮೂಗದೂರ ಗ್ರಾಮಕ್ಕೆ ಸಮರ್ಪಕ ಬಸ್ ವ್ಯವಸ್ಥೆ ಕಲ್ಪಿಸಲು ಸಂಬಂಧಿಸಿದ ಗ್ರಾಮ ಪಂಚಾಯಿತಿಯಿಂದ ಒಪ್ಪಿಗೆ ನೀಡಿದಲ್ಲಿ ಬಸ್ ವ್ಯವಸ್ಥೆ ಕಲ್ಪಿಸುವುದಾಗಿ ಘಟಕ ವ್ಯವಸ್ಥಾಪಕರು ತಿಳಿಸಿದರು.
ಹೆಸ್ಕಾಂ ಇಲಾಖೆಯ ಪ್ರಭಾರಿ ಎಇಇ ದೇವರಾಜ ಅವರಡ್ಡಿ ಮಾತನಾಡಿ, ಭಗೀರಥ ಗುಡ್ಡಕ್ಕೆ ವಿದ್ಯುತ್ ಸಂಪರ್ಕ ಕಲ್ಪಿಸಲು ಕ್ರಿಯಾಯೋಜನೆ ತಯಾರಿಸಿ ವಿಭಾಗಕ್ಕೆ ಕಳುಹಿಸಲಾಗಿದೆ ಎಂದರು.ತವರಮೆಳ್ಳಿಹಳ್ಳಿ ಗ್ರಾಮದ ಟಿಸಿಯನ್ನು ಸ್ಥಳಾಂತರ ಮಾಡಿ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಲು ಹೆಸ್ಕಾಂ ಇಲಾಖೆಯಲ್ಲಿ ಬಜೆಟ್ ಇಲ್ಲ. ಸಂಬಂಧಿಸಿದ ಗ್ರಾಹಕರು ಅದರ ವೆಚ್ಚ ಭರಿಸಬೇಕಾಗುತ್ತದೆ. ಗೃಹಜ್ಯೋತಿ ಯೋಜನೆಯಡಿಯಲ್ಲಿ 39293 ಗ್ರಾಹಕರಲ್ಲಿ 37733 ಗ್ರಾಹಕರು ಅರ್ಹ ಫಲಾನುಭವಿಗಳು ಯೋಜನೆಯ ಸದುಪಯೋಗ ಪಡೆದುಕೊಳ್ಳುತ್ತಿದ್ದಾರೆ. ವಿದ್ಯುತ್ ಕಂಬ ಎಲ್ಲೆಂದರಲ್ಲಿ ಅಳವಡಿಸದೇ ಸಂಬಂಧಿಸಿದ ಪಿಆರ್ಡಿ ಹಾಗೂ ಲೋಕೋಪಯೋಗಿ ಇಲಾಖೆಯಿಂದ ಸರಿಯಾದ ಮಾಹಿತಿ ಪಡೆದು ಕಂಬ ಅಳವಡಿಸಲು ಸೂಚಿಸಲಾಯಿತು.
ತಹಸೀಲ್ದಾರ್ ರವಿಕುಮಾರ ಕೊರವರ, ತಾಪಂ ಇಒ ಬಿ.ಎಸ್. ಸಿಡೇನೂರ, ಪಂಚ ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯರಾದ ನೂರ ಅಹ್ಮದ ಮತ್ತೆಸಾಬನವರ, ಪರಶುರಾಮ ಜುಂಜಣ್ಣವರ, ಹನುಮಂತಪ್ಪ ಹಳ್ಳಿ, ನಾಗಪ್ಪ ತಿಮ್ಮಾಪೂರ, ಇಬ್ರಾಹಿಂಸಾಬ್ ಕರ್ಜಗಿ, ರಮಾಕಾಂತ ಶೆಂಡಗೆ, ಪುಟ್ಟಪ್ಪ ಮರಗಿ, ಚಂದ್ರು ಹಟ್ಟಿ, ಜ್ಯೋತಿಕಿರಣ ಕುಲಕರ್ಣಿ, ಶಂಕರ ಲಮಾಣಿ, ಗಿರೀಶ ತಳವಾರ ಇತರರು ಇದ್ದರು.