ಗದಗ: ವಿದ್ಯಾರ್ಥಿಗಳಲ್ಲಿ ದೃಢ ಸಂಕಲ್ಪ, ಕಠಿಣ ಪರಿಶ್ರಮ, ಸಮಯ ಪ್ರಜ್ಞೆ, ಸತತ ಓದು ಬರಹ ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಯಶಸ್ಸು ಹೊಂದಲು ಅತ್ಯಂತ ಸುಲಭದ ಮಾರ್ಗವಾಗಿದೆ ಎಂದು ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಹೇಳಿದರು.
ತಮ್ಮ ವಿದ್ಯಾರ್ಥಿ ಜೀವನದ ಸ್ಪರ್ಧಾತ್ಮಕ ಪರೀಕ್ಷೆಯ ಗುಟ್ಟನ್ನು, ಪರೀಕ್ಷೆ ಬರೆಯುವ ಕೌಶಲ್ಯ ಬೋಧಿಸಿದರು.
ಇಂದಿನ ವಿಜ್ಞಾನ ತಂತ್ರಜ್ಞಾನ ಯುಗದಲ್ಲಿ ವಿದ್ಯಾರ್ಥಿಗಳು ಮನಸ್ಸನ್ನು ಕೇಂದ್ರಿಕರಿಸಿ ಅಭ್ಯಾಸ ಮಾಡುವದು ಮುನಿಗಳ ತಪಸ್ಸಿಗೆ ಸಮಾನವಾಗಿದೆ, ವಿದ್ಯಾರ್ಥಿಗಳ ಜೀವನದಲ್ಲಿ ವಿವಿಧ ಆಕರ್ಷಣೆಗೆ ಒಳಗಾಗದೆ ಮನಸ್ಸು ಕೇಂದ್ರೀಕರಿಸಿಕೊಂಡು ತಮ್ಮ ಸುಂದರ ಜೀವನ ರೂಪಿಸಿಕೊಳ್ಳಬೇಕು. ಮೊಬೈಲ್ ನಿರಂತರ ಬಳಕೆಯಿಂದ ವಿದ್ಯಾರ್ಥಿಗಳ ಜ್ಞಾನ ಶಕ್ತಿ ಕುಂದುತ್ತಿದೆ, ಸಮಯದ ಜತೆಗೆ ಅವರ ಜೀವನ ಹಾಳು ಮಾಡುತ್ತಿದೆ, ಆದ್ದರಿಂದ ವಿದ್ಯಾರ್ಥಿಗಳು ಮೊಬೈಲ್ ನಿಂದ ದೂರವಿದ್ದು. ತಮ್ಮ ಜೀವನ ರೂಪಿಸುವ ಜ್ಞಾನಾರ್ಜನೆಯ ಕಡೆಗೆ ಹೆಚ್ಚು ಗಮನಹರಿಸಬೇಕು. ಬಹು ವಿಧವಾದ ಜ್ಞಾನ ಹಾಗೂ ಕೌಶಲ್ಯ ಹೊಂದಿದ ವಿದ್ಯಾರ್ಥಿ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಶಸ್ವಿಯಾಗುತ್ತಾನೆ. ಅಂಥವರನ್ನು ಉದ್ಯೋಗಗಳು ಮನೆಗೆ ಅರಿಸಿಕೊಂಡು ಬರುತ್ತವೆ. ಸಮಾಜದಲ್ಲಿ ಅತ್ಯುತ್ತಮ ಪ್ರಜೆಯಾಗಿ ಬದುಕುವುದನ್ನು ಕಲಿಯಬೇಕು ಎಂದರು. ಸುಶ್ಮಿತಾ ಪೂಜಾರ್ ಹಾಗೂ ಸಂಗಡಿಗರ ಪ್ರಾರ್ಥಿಸಿದರು. ಪದವಿ ಮಹಾವಿದ್ಯಾಲಯದ ಪ್ರಾಚಾರ್ಯ ಪಿ.ಜಿ. ಪಾಟೀಲ ಸ್ವಾಗತಿಸಿದರು. ಅಧ್ಯಕ್ಷತೆ ವಹಿಸಿದ ಸ್ಥಾನಿಕ ಆಡಳಿತ ಮಂಡಳಿಯ ಅಧ್ಯಕ್ಷ ಎಸ್.ಪಿ. ಸಂಶಿಮಠ ಅಧ್ಯಕ್ಷತೆ ವಹಿಸಿದ್ದರು. ಈಶಣ್ಣ ಮುನವಳ್ಳಿ, ಎಸ್.ಎಸ್. ಪಟ್ಟಣಶೆಟ್ಟಿ, ವೀರೇಶ ಕೂಗು, ಪಪೂ ಮಹಾವಿದ್ಯಾಲಯದ ಪ್ರಾಚಾರ್ಯ ಎಸ್.ಬಿ. ಹಾವೇರಿ ಮುಂತಾದವರು ಹಾಜರಿದ್ದರು. ಸಚಿನ ಸಾಲಗುಂದಿ ವಂದಿಸಿದರು. ಡಾ. ನಾಗರಾಜ್ ಬಳಿಗೇರ, ಬಿ.ಆರ್. ಚಿನಗುಂಡಿ ನಿರೂಪಿಸಿದರು.