ಎಲ್ಲರಿಗೂ ಒಳಿತನ್ನು ಮಾಡುವ ಶಿವಭಾವ ಮತ್ತು ಯೋಗವನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಯಶಸ್ಸು ಗಳಿಸಲು ಸಾಧ್ಯ ಎಂದು ಸಾಣೇಹಳ್ಳಿಯ ಪಂಡಿತಾರಾಧ್ಯ ಸ್ವಾಮೀಜಿ ಹೇಳಿದರು.
ಕನ್ನಡಪ್ರಭ ವಾರ್ತೆ ಹೊಸದುರ್ಗ
ಎಲ್ಲರಿಗೂ ಒಳಿತನ್ನು ಮಾಡುವ ಶಿವಭಾವ ಮತ್ತು ಯೋಗವನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಯಶಸ್ಸು ಗಳಿಸಲು ಸಾಧ್ಯ ಎಂದು ಸಾಣೇಹಳ್ಳಿಯ ಪಂಡಿತಾರಾಧ್ಯ ಸ್ವಾಮೀಜಿ ಹೇಳಿದರು.
ತಾಲೂಕಿನ ಸಾಣೇಹಳ್ಳಿಯ ಶ್ರೀ ಗುರುಪಾದೇಶ್ವರ ಪ್ರೌಢಶಾಲೆ ಹಾಗೂ ಶ್ರೀ ಶಿವಕುಮಾರ ಸ್ವಾಮೀಜಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಭಾನುವಾರ ಹಮ್ಮಿಕೊಳ್ಳಲಾಗಿದ್ದ 12 ನೇ ವರ್ಷದ ವಿಶ್ವ ಯೋಗ ದಿನಾಚರಣೆಯ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.
ನಮ್ಮ ದೇಹ, ಮನಸ್ಸು ಮತ್ತು ಬುದ್ಧಿ ವಿಭಾಗವಾಗದಂತೆ ಒಂದಾಗಿ, ಅದ್ವೈತ ಮನೋಭಾವನೆಯನ್ನು ಬೆಳೆಸಿಕೊಳ್ಳಬೇಕು. ನನ್ನ ಶರೀರವೇ ನಾನು ಎನ್ನುವ ಏಕತೆಯ ಭಾವ ಮೂಡಿದಾಗ ಮಾತ್ರ ಮನಸ್ಸಿನಲ್ಲಿ ಏಕಾಗ್ರತೆ ಸಾಧ್ಯವಾಗುತ್ತದೆ. ಏಕಾಗ್ರತೆಯಿಂದ ಮಾಡುವ ಎಲ್ಲಾ ಕೆಲಸಗಳಲ್ಲೂ ಯಶಸ್ಸು ಸಿಗುತ್ತದೆ ಎಂದರು.
ಅತ್ಯಂತ ಚಂಚಲವಾಗಿರುವ ಮನಸ್ಸನ್ನು ನಿಯಂತ್ರಿಸುವುದೇ ಯೋಗ. ಮನುಷ್ಯನ ಪ್ರಗತಿ ಮತ್ತು ಅವನತಿ ಎರಡಕ್ಕೂ ಮನಸ್ಸೇ ಕಾರಣ. ಯಾರು ಮನಸ್ಸನ್ನು ಹತೋಟಿಯಲ್ಲಿಡುತ್ತಾರೋ, ಅವರು ತಮ್ಮ ಬದುಕನ್ನು ನಿಯಂತ್ರಿಸಬಲ್ಲರು. ಮೃಗತ್ವದಿಂದ ದೇವತ್ವದ ಕಡೆಗೆ ಕರೆದೊಯ್ಯಲು ಯೋಗ ಪ್ರೇರಣೆಯಾಗಿದೆ ಎಂದರು.
ಮಠ ಹಾಗೂ ಶಾಲಾ-ಕಾಲೇಜುಗಳ ಆವರಣದಲ್ಲಿ ಮಕ್ಕಳು ಓಡಾಡುವ ಜಾಗದಲ್ಲಿ ಅತಿ ವೇಗವಾಗಿ ಬೈಕ್ ಚಾಲನೆ ಮಾಡುವ ಯುವಕರಿಗೆ ಸಾರ್ವಜನಿಕರು ಸೌಮ್ಯವಾಗಿ ತಿಳಿಹೇಳಿ ಎಚ್ಚರಿಸಬೇಕು. ಮಕ್ಕಳಲ್ಲಿ ಕೇವಲ ಪಠ್ಯದ ಓದಷ್ಟೇ ಮುಖ್ಯವಲ್ಲ, ಸಾರ್ವಜನಿಕ ನಡವಳಿಕೆಯ ಸಂಸ್ಕಾರ ಬೆಳೆಯಬೇಕು. ಅನ್ನವನ್ನು ಚೆಲ್ಲದೆ ಗೌರವಿಸಬೇಕು ಮತ್ತು ಎಲ್ಲೆಂದರಲ್ಲಿ ಕಸ ಹಾಕದೆ ಸ್ವಚ್ಛತೆ ಕಾಪಾಡಬೇಕು. ಬಸವಣ್ಣನವರ ವಚನದಂತೆ ನಮ್ಮ ನಡೆ-ನುಡಿ ಒಂದಾಗಬೇಕು. ಈ ಬಾರಿಯ ನಾಟಕೋತ್ಸವದಲ್ಲಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ತಲಾ ಒಂದೊಂದು ನಾಟಕ ಪ್ರದರ್ಶಿಸಬೇಕು ಎಂದು ಕರೆ ನೀಡಿದರು.
ಯೋಗ ಶಿಕ್ಷಕ ದೇವೇಂದ್ರಪ್ಪ ಮಾತನಾಡಿ ಯೋಗವು ದೇಹ, ಮನಸ್ಸು ಮತ್ತು ಆತ್ಮಗಳನ್ನು ಒಂದುಗೂಡಿಸುವ ಶಕ್ತಿ. ಹಳೆಯ ಕಾಲದ ಕಾಯಕದಲ್ಲೇ ಯೋಗದ ಲಾಭವಿತ್ತು, ಆದರೆ ಇಂದಿನ ಟಿವಿ ಸಂಸ್ಕೃತಿಯ ಆಲಸ್ಯವನ್ನು ಯೋಗದಿಂದ ಮಾತ್ರ ಓಡಿಸಲು ಸಾಧ್ಯ ಎಂದರು. ಮುಖ್ಯ ಶಿಕ್ಷಕ ಕೆ.ಆರ್. ಬಸವರಾಜ್ಯೋ ಮಾತನಾಡಿ ಯೋ ಗವು ಕೇವಲ ಅಂಗಸಾಧನೆಯಲ್ಲ, ಅದು ಉತ್ತಮ ವ್ಯಕ್ತಿತ್ವ ರೂಪಿಸುವ ಶ್ರೇಷ್ಠ ಮಾರ್ಗ. ವಿದ್ಯಾರ್ಥಿಗಳು ಧಾನ್ಯ ಮತ್ತು ಯೋಗದಿಂದ ಏಕಾಗ್ರತೆ ಹೆಚ್ಚಿಸಿಕೊಳ್ಳಬೇಕು ಎಂದರು.
ಶಿಕ್ಷಕ ವಿರೂಪಾಕ್ಷಪ್ಪ. ಮುಖ್ಯ ಶಿಕ್ಷಕ ಬಿ.ಎಸ್. ಶಿವಕುಮಾರ್ ಮಾತನಾಡಿದರು. ಮುಖ್ಯ ಶಿಕ್ಷಕಿ ಶಿಲ್ಪ ಇತರರು ಹಾಜರಿದ್ದರು. ಶಾಲಾ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಭಾಗವಹಿಸಿ ವಿಶ್ವ ಯೋಗ ದಿನಾಚರಣೆಯನ್ನು ಯಶಸ್ವಿಗೊಳಿಸಿದರು. ಶಿಕ್ಷಕಿ ಶೋಭ ನಿರೂಪಿಸಿ ವಂದಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.