ದಿನಪತ್ರಿಕೆ ಓದುವುದರಿಂದ ಸ್ಪರ್ಧಾ ಪರೀಕ್ಷೆಯಲ್ಲಿ ಯಶಸ್ಸು:

KannadaprabhaNewsNetwork | Published : May 24, 2024 12:45 AM

ಸಾರಾಂಶ

ಸ್ಪರ್ಧಾತ್ಮಕ ಪರೀಕ್ಷೆಗಳ ಜಾಗೃತಿ ಕಾರ್ಯಾಗಾರದಲ್ಲಿ ಡಾ.ಜಿ.ಎನ್.ಸಂದೀಪ್ ಮಾತನಾಡಿ, ಸಾಮಾನ್ಯ ಜ್ಞಾನಕ್ಕಾಗಿ ದಿನಪತ್ರಿಕೆ ಹಾಗೂ ಮ್ಯಾಗಜಿನ್ ಓದುವ ಹವ್ಯಾಸ ರೂಢಿಸಿಕೊಳ್ಳಲು ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಕನ್ನಡಪ್ರಭ ವಾರ್ತೆ, ಚಿತ್ರದುರ್ಗ

ಶಾಲಾ ಕಾಲೇಜುಗಳ ಪಠ್ಯಗಳ ಜೊತೆಗೆ ಸಾಮಾನ್ಯ ಜ್ಞಾನಕ್ಕಾಗಿ ದಿನಪತ್ರಿಕೆ ಹಾಗೂ ಮ್ಯಾಗಜಿನ್ ಓದುವ ಅಭ್ಯಾಸ ಇಟ್ಟುಕೊಂಡರೆ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಕಾಣಬಹುದು ಎಂದು ಸುನಿತಾ ನರ್ಸಿಂಗ್‍ ಹೋಂ ಡಾ.ಜಿ.ಎನ್.ಸಂದೀಪ್ ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಕರ್ನಾಟಕ ಸಮಾಜ ಸೇವಾ ಸಂಘದ ವತಿಯಿಂದ ಅಗಸನಕಲ್ಲಿನಲ್ಲಿರುವ ಅಹಮದ್ ಪ್ಯಾಲೆಸ್‍ನಲ್ಲಿ ಏರ್ಪಡಿಸಲಾಗಿದ್ದ ಸ್ಪರ್ಧಾತ್ಮಕ ಪರೀಕ್ಷೆಗಳ ಜಾಗೃತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಪಠ್ಯಪುಸ್ತಕಕ್ಕೂ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ವ್ಯತ್ಯಾಸವಿದೆ. ಗ್ರೂಪ್ ಸ್ಟಡಿ ಮಾಡಲು ಆನ್‍ಲೈನ್‍ನಲ್ಲಿಯೂ ಅನೇಕ ಮಾಹಿತಿಗಳು ಸಿಗುತ್ತವೆ. ಎಲ್ಲಾ ರೀತಿಯ ಪ್ರಯೋಜನಗಳನ್ನು ಪಡೆದುಕೊಂಡು ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಲು ಸಿದ್ಧರಾಗುವಂತೆ ವಿದ್ಯಾರ್ಥಿಗಳಿಗೆ ತಿಳಿಸಿದರು.

ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ವಿದ್ಯಾರ್ಥಿಗಳ ಸಜ್ಜುಗೊಳಿಸಲು ಇದೀಗ ಸರ್ಕಾರವೇ ಗಂಭೀರ ಪ್ರಯತ್ನ ನಡೆಸುತ್ತಿದೆ. ಹಲವು ಕಡೆ ಕೋಚಿಂಗ್ ಸೆಂಟರ್‌ಗಳ ತೆರೆ ದಿವೆ. ವಿಷಯಕ್ಕೆ ಪೂರಕವಾಗಿ ಪಠ್ಯಗಳು ಲೈಬ್ರರಿಯಲ್ಲಿ ಸಿಗುತ್ತವೆ. ಕಾಲಹರಣ ಮಾಡದೆ ಅಭ್ಯಾಸದಲ್ಲಿ ಗಂಭೀರವಾಗಿ ತೊಡಗುವುದು ಅಗತ್ಯವೆಂದರು.

ಹಿರಿಯ ನ್ಯಾಯವಾದಿ ಹಾಗೂ ಮಸ್ಜಿದ್-ಎ-ಆಜಂ ಅಧ್ಯಕ್ಷ ಮಹಮದ್ ಸಾಧಿಕ್ ವುಲ್ಲಾ ಮಾತನಾಡಿ, ಶಿಕ್ಷಣ ಪ್ರತಿಯೊಬ್ಬರಿಗೂ ಅತ್ಯವಶ್ಯಕವಾಗಿ ಬೇಕು ಎಂದು ಪ್ರವಾದಿಗಳು ಹೇಳಿದ್ದಾರೆ. ವೀರ ಸನ್ಯಾಸಿ ಸ್ವಾಮಿ ವಿವೇಕಾನಂದ ಜ್ಞಾನವೇ ಬೆಳಕು ಎನ್ನುವ ಸಂದೇಶವನ್ನು ನೀಡಿದ್ದಾರೆ. ಪಠ್ಯ ಪುಸ್ತಕಗಳ ಜೊತೆ ಕಠಿಣ ಪರಿಶ್ರಮ ಹಾಗೂ ಸತತ ಅಭ್ಯಾಸದಿಂದ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ತೇರ್ಗಡೆಯಾಗಬಹುದು. ಒಮ್ಮೆ ಫೇಲ್ ಆದರೇ 2ನೇ ಬಾರಿಗೆ ಪ್ರಯತ್ನ ಮಾಡಿ ಯಾವುದೇ ಕಾರಣಕ್ಕೂ ಕೀಳರಿಮೆ ಸರಿಯಲ್ಲ ಎಂದರು.

ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಮೊದಲನೆ ಬಾರಿಗೆ ತೇರ್ಗಡೆಯಾಗುವುದು ಕಷ್ಟ. ಭಾಷೆ ಮೇಲೆ ಹಿಡಿತವಿರಬೇಕು. ನಿಮ್ಮ ಗುರಿ ದೊಡ್ಡದಾಗಿದ್ದಾಗ ಜೀವನದಲ್ಲಿ ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಬಹುದು. ಸಮಯಕ್ಕೆ ತುಂಬಾ ಮಹತ್ವವಿದೆ. ಹಾಗಾಗಿ ಕಾಲಹರಣ ಮಾಡುವ ಬದಲು ಓದಿನ ಕಡೆ ಹೆಚ್ಚಿನ ಗಮನ ಕೊಡ ಬೇಕು. ಮೊಬೈಲ್‍ನಿಂದ ದೂರವಿದ್ದು, ಕೋಚಿಂಗ್ ಸೆಂಟರ್‌ಗಳಲ್ಲಿ ತರಬೇತಿ ಪಡೆದುಕೊಳ್ಳುವುದರಿಂದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಹಾಯವಾಗಲಿದೆ ಎಂದರು.

ಕರ್ನಾಟಕ ಸಮಾಜ ಸೇವಾ ಸಂಘದ ಅಧ್ಯಕ್ಷ ಮಹಮದ್ ಸೈಫುಲ್ಲಾ ಅಧ್ಯಕ್ಷತೆ ವಹಿಸಿದ್ದರು. ಫಾತಿಮಾ ಮಸೀದಿ ಅಧ್ಯಕ್ಷ ಜಿಕ್ರಿಯಾ ಸಾಬ್, ಜಾಮಿಯಾ ಮಸೀದಿ ಮಾಜಿ ಉಪಾಧ್ಯಕ್ಷ ಮಹಮದ್ ವಜೀರ್ ಸಾಬ್, ಬಡಾ ಮಕಾನ್ ದರ್ಗಾ ಕಮಿಟಿ ಅಧ್ಯಕ್ಷ ಸೈಯದ್ ಮುಜೀಬ್, ಸಿಟಿ ಆರ್ಥೋಪೆಡಿಕ್ ಕ್ಲಿನಿಕ್‍ನ ಡಾ.ಮಹಮದ್ ಖಲೀಲ್ ಖಾನ್ ವೇದಿಕೆಯಲ್ಲಿದ್ದರು. ಎಂ. ಹನೀಫ್ ನಿರೂಪಿಸಿದರು.---------

Share this article