ದೃಢ ಸಂಕಲ್ಪದ ಹೆಜ್ಜೆಯಿಂದ ಯಶಸ್ಸು ನಿಶ್ಚಿತ: ಪೃಥ್ವಿ ಅಂಬರ್‌

KannadaprabhaNewsNetwork |  
Published : Mar 31, 2026, 03:00 AM IST
6 | Kannada Prabha

ಸಾರಾಂಶ

ವ್ಯಕ್ತಿಗತ ಸಮಸ್ಯೆಗಳಿಂದ ವಿಚಲಿತರಾಗದೆ ನಿರ್ದಿಷ್ಟ ಕ್ಷೇತ್ರದಲ್ಲಿ ಸಾಧಿಸುವ ದೃಢಸಂಕಲ್ಪದೊಂದಿಗೆ ಹೆಜ್ಜೆಯಿರಿಸಿದರೆ ಮುಂದೊಂದು ದಿನ ನಿಶ್ಚಿತವಾಗಿ ಯಶಸ್ಸು ಜೊತೆಯಾಗುತ್ತದೆ ಎಂದು ಖ್ಯಾತ ಚಲನಚಿತ್ರ ನಟ ಪೃಥ್ವಿ ಅಂಬರ್ ಅಭಿಪ್ರಾಯಪಟ್ಟರು.

ಬೆಳ್ತಂಗಡಿ: ವ್ಯಕ್ತಿಗತ ಸಮಸ್ಯೆಗಳಿಂದ ವಿಚಲಿತರಾಗದೆ ನಿರ್ದಿಷ್ಟ ಕ್ಷೇತ್ರದಲ್ಲಿ ಸಾಧಿಸುವ ದೃಢಸಂಕಲ್ಪದೊಂದಿಗೆ ಹೆಜ್ಜೆಯಿರಿಸಿದರೆ ಮುಂದೊಂದು ದಿನ ನಿಶ್ಚಿತವಾಗಿ ಯಶಸ್ಸು ಜೊತೆಯಾಗುತ್ತದೆ ಎಂದು ಖ್ಯಾತ ಚಲನಚಿತ್ರ ನಟ ಪೃಥ್ವಿ ಅಂಬರ್ ಅಭಿಪ್ರಾಯಪಟ್ಟರು.

ಎಸ್ ಡಿಎಂ ಸ್ನಾತಕೋತ್ತರ ಕೇಂದ್ರ ಆಯೋಜಿಸಿದ ಎರಡು ದಿನಗಳ ಝೇಂಕಾರ ಸೀಜನ್-6 ಉತ್ಸವದ ಅಂಗವಾಗಿ ಗುರುವಾರ ಏರ್ಪಟ್ಟ ಸ್ಟಾರ್‌ನೈಟ್ ಕಾರ್ಯಕ್ರಮ ನಡೆಸಿಕೊಟ್ಟ ಅವರು ತಮ್ಮ ವೃತ್ತಿಪರ ಯಾನದ ಮಹತ್ವದ ಹೆಜ್ಜೆಗಳನ್ನು ಮೆಲುಕು ಹಾಕುತ್ತಾ ಮಾತನಾಡಿದರು.

ವಿದ್ಯಾರ್ಥಿ ಪ್ರತಿಭೆಗಳೊಂದಿಗೆ ನೃತ್ಯ ಪ್ರದರ್ಶನ ನೀಡುತ್ತಾ ತಮ್ಮ ಸಾಧನೆಯ ಹಿಂದಿನ ಪ್ರಮುಖ ಮಜಲುಗಳನ್ನು ಅನಾವರಣಗೊಳಿಸಿದರು.15 ವರ್ಷಗಳ ಹಿಂದೆ ಕೊರಿಯೋಗ್ರಫಿ ವಲಯದಲ್ಲಿ ಮಹತ್ವದ್ದನ್ನು ಸಾಧಿಸುವ ಹಂಬಲದೊಂದಿಗೆ ನೃತ್ಯ ಕಲೆಯಲ್ಲಿ ತೊಡಗಿಸಿಕೊಂಡಾಗ ಕಲೆಯೊಂದಿಗಿನ ಸೆಳೆತ ಆವರಿಸಿಕೊಂಡಿತ್ತು. ಈಗಿನ ಹಾಗೆ ತಂತ್ರಜ್ಞಾನದ ನೆರವಿನೊಂದಿಗೆ ಸುಲಭವಾಗಿ ನೃತ್ಯದ ಮಾದರಿಗಳು ಸಿಗುವ ಹಾಗೆ ನೇರವಾಗಿ ಲಭ್ಯವಾಗುತ್ತಿರಲಿಲ್ಲ. ಅವುಗಳ ಹುಡುಕಾಟ ನಡೆಸಿ ಗಮನಿಸಿ ಅಭ್ಯಸಿಸಬೇಕಾಗುತ್ತಿತ್ತು. ಅಂತಹ ಪೂರ್ವ ತಯಾರಿಯು ಸಾಧನೆಯ ಹುಮ್ಮಸ್ಸು ಹೆಚ್ಚಿಸುತ್ತಿತ್ತು ಎಂದು ನೆನಪಿಸಿಕೊಂಡರು.ಹಿಂದಿನ ಕಾಲೇಜು ದಿನಗಳು ನಿಜಕ್ಕೂ ಸುವರ್ಣವಾಗಿದ್ದವು. ಯೂನಿಫಾರ್ಮ್ ಅನ್ನು ಕಡ್ಡಾಯವಾಗಿ ಹಾಕಿಕೊಳ್ಳುವ ನಿಯಮ ಅನ್ವಯವಾಗುತ್ತಿರಲಿಲ್ಲ. ಓದುವ ದಿನಗಳಲ್ಲಿ ನಮಗಿಷ್ಟದ ಕಲೆಯೊಂದಿಗೆ ತೊಡಗಿಸಿಕೊಳ್ಳುವ ಬದ್ಧತೆ ನಮ್ಮನ್ನು ಗೆಲುವಿನ ಹಾದಿಯಲ್ಲಿ ನೆರವಾಗುತ್ತದೆ. ಮೈಲಿಗಲ್ಲಾಗಬಲ್ಲ ಸಾಧನೆಗೆ ಪೂರಕವಾಗುತ್ತದೆ ಎಂದರು.

ದಿಯಾ ಸಿನಿಮಾ ಬಿಡುಗಡೆಯಾಗಿದ್ದು ನಿರ್ಮಾಣವಾಗಿ ಐದು ವರ್ಷಗಳ ನಂತರ. ಸಿನಿಮಾವೊಂದರಲ್ಲಿ ನಟಿಸಿ ಅಷ್ಟು ಸುಧೀರ್ಘ ಅವಧಿ ಕಾದ ನಂತರ ವ್ಯಾಪಕ ಮೆಚ್ಚುಗೆ ವ್ಯಕ್ತವಾಯಿತು. ಲಾಕ್‌ಡೌನ್ ಅವಧಿಯಲ್ಲಿ ಬಿಡುಗಡೆಯಾದ ನಂತರ ಹೊಸ ಅಲೆ ಮೂಡಿಸಿತು. ಸಿನಿಮಾ ಮೆಚ್ಚುಗೆಯ ಪಡೆಯುವವರೆಗಿನ ಹಾದಿ ಭಾವನಾತ್ಮಕ ತೊಳಲಾಟಗಳೊಂದಿಗೆ ಕೂಡಿತ್ತು. ಈ ಹಂತದಲ್ಲಿ ಸಿನಿಮಾ ರಂಗದಲ್ಲಿ ವಿಶೇಷ ಹೆಜ್ಜೆ ಗುರುತು ಮೂಡಿಸಬಲ್ಲೆ ಎಂಬ ಆತ್ಮವಿಶ್ವಾಸ ಮೂಡಿಸಿದವರು ನನ್ನ ತಾಯಿ ಎಂದು ತಿಳಿಸಿದರು.

ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ಅಧ್ಯಯನದ ನಂತರ ಅವಕಾಶದ ಬಾಗಿಲುಗಳು ತೆರೆದುಕೊಂಡವು. ಆ್ಯಂಕರ್ ಆಗಿ ನಿರೂಪಣೆಯ ಕೌಶಲ್ಯ ನೆಚ್ಚಿಕೊಂಡು ಹೆಜ್ಜೆಯರಿಸಿದೆ. ಕೋರಿಯೋಗ್ರಫಿ ಕುರಿತಾದ ಆಸಕ್ತಿ ಕಲಾ ವಲಯದ ಪ್ರವೇಶಕ್ಕೆ ಒತ್ತಾಸೆಯಾಯಿತು. ತದನಂತರ ನಟನೆಯ ಅವಕಾಶಗಳು ಲಭ್ಯವಾದವು ಎಂದು ಹೇಳಿದರು.

ತಂದೆ, ತಾಯಿ ಸೇರಿದಂತೆ ಬೆಳವಣಿಗೆಯ ವಿವಿಧ ಹಂತಗಳಲ್ಲಿ ನೆರವಾಗುವ ಕುಟುಂಬದ ಸದಸ್ಯರೊಂದಿಗೆ ಕೊನೆಯವರೆಗೂ ವಿಶ್ವಾಸದೊಂದಿಗೆ ಇರಬೇಕು. ಸಾಧನೆಯ ಉತ್ತುಂಗ ತಲುಪಿದಾಗ ಆ ಸಂದರ್ಭದ ಸಂಭ್ರಮದ ಕ್ಷಣಗಳನ್ನು ಸುಂದರವಾಗಿಸಲು ಕುಟುಂಬದ ಸದಸ್ಯರೆಲ್ಲರೂ ಒಟ್ಟಾಗಿರಬೇಕು. ಹಾಗಿದ್ದಾಗ ಮಾತ್ರ ಸಾಧನೆಯ ಸಂಭ್ರಮದ ಕ್ಷಣಗಳು ಅರ್ಥಪೂರ್ಣವಾಗುತ್ತವೆ ಎಂದು ನುಡಿದರು.

ಅರ್ಚಿತ್ ಜೈನ್, ಪಲ್ಲವಿ ಕಾರ್ಯಕ್ರಮ ನಿರೂಪಿಸಿದರು. ಈ ಸಂದರ್ಭದಲ್ಲಿ ಎಸ್ ಡಿಎಂ ಕಾಲೇಜಿನ ಪ್ರಾಂಶುಪಾಲ ಡಾ. ವಿಶ್ವನಾಥ ಪಿ. ಅವರು ನಟ ಪ್ಲಥ್ವಿ ಅಂಬರ್ ಅವರನ್ನು ಅಭಿನಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದೇವರ ನಾಡಿನಲ್ಲಿ ಮಹಾ ಸಮರಕ್ಕೆ ಅಖಾಡ ಸಿದ್ಧ
ಉದ್ಯೋಗ ಸ್ಥಳದಲ್ಲಿ ಮಹಿಳೆಯರಿಗೆ ಸುರಕ್ಷಿತ ವಾತಾವರಣ ಅಗತ್ಯ: ಪಲ್ಲವಿ