ಬಳ್ಳಾರಿ: ಉತ್ತಮ ಅಂಕಗಳ ಜತೆಗೆ ಉದ್ಯೋಗಕ್ಕೆ ಬೇಕಾದ ಕೌಶಲ್ಯ ಗುಣಗಳನ್ನು ಅಳವಡಿಕೊಂಡು ಯಶಸ್ವಿಯಾಗಬೇಕು ಎಂದು ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಹೇಳಿದರು.
ಕ್ರಿಯಾಶೀಲ ಮನೋಭಾವ, ಸ್ಪರ್ಧಾತ್ಮಕ ಮನಸ್ಸು, ಸತತ ಪ್ರಯತ್ನದಿಂದ ಬದುಕು ರೂಪಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶರಣಪ್ಪ ಸಂಕನೂರ ಮಾತನಾಡಿ, ಬದುಕಿನಲ್ಲಿ ಉತ್ತಮ ಸಾಧಕರಾಗಲು ಕಠಿಣ ಪರಿಶ್ರಮ, ಸಂವಹನ ಕಲೆ, ಭಾಷೆಯ ಮೇಲೆ ಉತ್ತಮ ಹಿಡಿತ, ಸಾಧಿಸುವ ಛಲದಂತಹ ಗುಣಗಳನ್ನು ಮೈಗೂಡಿಸಿಕೊಳ್ಳುವುದು ಅವಶ್ಯ ಎಂದರು.ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಯಶವಂತ್ ರಾಜ್ ನಾಗಿರೆಡ್ಡಿ ಮಾತನಾಡಿ, ಇಂತಹ ಉದ್ಯೋಗ ಮೇಳಗಳು ಈ ಭಾಗದ ನಿರುದ್ಯೋಗ ಸಮಸ್ಯೆಯನ್ನು ನಿವಾರಿಸುವಲ್ಲಿ ಸಹಕಾರಿಯಾಗುತ್ತವೆ. ನಮ್ಮ ವಾಣಿಜ್ಯೋದ್ಯಮ ಮಂಡಳಿ ಇಂತಹ ಚಟುವಟಿಕೆಗೆ ಸದಾ ಸಹಕರಿಸುತ್ತದೆ ಎಂದರು.
ಉದ್ಯೋಗ ಮೇಳದ ಬಗ್ಗೆ ಪ್ರಾಸ್ತವಿಕವಾಗಿ ಮಾತನಾಡಿದ ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಪ್ರಾಣೇಶ್, ಈ ಮೇಳದಲ್ಲಿ 41 ಕಂಪನಿಗಳು ಭಾಗವಹಿಸಿವೆ. 1673 ಅಭ್ಯರ್ಥಿಗಳು ನೋಂದಣಿ ಮಾಡಿಕೊಂಡಿದ್ದಾರೆ ಎಂದು ತಿಳಿಸಿದರು.ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಮೋನಿಕಾ ರಂಜನ್, ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದ ಉದ್ಯೋಗಾಧಿಕಾರಿ ಹಟ್ಟಪ್ಪ, ಉದ್ಯೋಗ ಭರವಸೆ ಕೋಶದ ಸಂಚಾಲಕ ಕಲ್ಯಾಣ ಬಸವ, ಕೌಶಲ್ಯಾಭಿವೃದ್ಧಿ ಇಲಾಖೆಯ ಸಹಾಯಕ ನಿರ್ದೇಶಕ ವಿಶ್ವನಾಥ, ಜಿಲ್ಲಾ ಅಭಿಯಾನ ವ್ಯವಸ್ಥಾಪಕ ದೇವರಾಜ್, ಪ್ರಾಣೇಶ್, ಎಎಸ್ಒ ಚಂದ್ರಮ್ಮ ಹಾಗೂ ಕಾಲೇಜಿನ ಪ್ರಾಧ್ಯಾಪಕ ಡಾ. ಪ್ರಹ್ಲಾದ್ ಚೌದ್ರಿ, ಡಾ. ಹೊನ್ನೂರಾಲಿ, ಡಾ. ಸೋಮನಾಥ, ಡಾ. ದಸ್ತಗೀರಸಾಬ್ ದಿನ್ನಿ, ಡಾ. ಚನ್ನ ಬಸವಯ್ಯ, ಡಾ. ಶ್ರೀನಿವಾಸ ರೆಡ್ಡಿ, ಪಂಪನಗೌಡ, ಡಾ. ಪಂಚಾಕ್ಷರಿ, ಡಾ. ಗುರುಬಸಪ್ಪ, ಡಾ. ದುರ್ಗಪ್ಪ ಇತರರು ಉಪಸ್ಥಿತರಿದ್ದರು.