- ಅಣಕು ಪ್ರದರ್ಶನದಲ್ಲಿ ‘ಬಾಂಬ್’ ನಿಷ್ಕ್ರಿಯ ಪ್ರಕ್ರಿಯೆ, ‘ಗಾಯಾಳು’ಗಳಿಗೆ ಆರೈಕೆ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುನಗರ ಹೊರವಲಯದ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ಶುಕ್ರವಾರ ಸಂಜೆ ನಡೆದ ಮಾಕ್ ಡ್ರಿಲ್ ಕಾರ್ಯಾಚರಣೆಯಲ್ಲಿ ಸಂಸ್ಥೆ ಕಟ್ಟಡದ ಮೇಲೆ ಹೊಗೆಯುಗುಳಿದ ಚಿತ್ರಣದೊಂದಿಗೆ ಅಣಕು ಬಾಂಬ್ ಸ್ಫೋಟ ಪ್ರದರ್ಶನದ ಯಶಸ್ವಿ ಪ್ರಯೋಗ ಗಮನ ಸೆಳೆಯಿತು. ಕಟ್ಟಡದ ಮೇಲೆ ಬಾಂಬ್ ಸ್ಫೋಟಗೊಂಡಿತೆಂಬ ಹಿನ್ನೆಲೆಯಲ್ಲಿ ಡಮ್ಮಿ ಬುಲೆಟ್ಗಳ ಶಬ್ದ ಕೇಳಿದ ತಕ್ಷಣ ಗಾಯಾಳು ಗಳಾಗಿದ್ದ ವೈದ್ಯಕೀಯ ವಿಜ್ಞಾನ ಸಂಸ್ಥೆಗಳ ಕಟ್ಟಡದಲ್ಲಿ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ಗಾಬರಿಗೊಂಡು ಓಡುತ್ತಿ ರುವುದು ಹಾಗೂ ಆರು ಉಗ್ರಗಾಮಿಗಳು ಸಂಸ್ಥೆ ಕಟ್ಟಡ ಪ್ರವೇಶಿಸಿರುವ ಮಾಹಿತಿಯನ್ನು ಪೊಲೀಸ್ ಕಂಟ್ರೋಲ್ ರೂಂಗೆ ರವಾನಿಸಲಾಯಿತು. ಕಟ್ಟಡದಲ್ಲಿ 450 ವಿದ್ಯಾರ್ಥಿಗಳು ಹಾಗೂ ಸುಮಾರು 50 ಸಿಬ್ಬಂದಿ ಇದ್ದರು. ಇದೇ ಸಂದರ್ಭ ಬಾಂಬ್ ಸ್ಫೋಟದಿಂದ ಹಲವು ವಿದ್ಯಾರ್ಥಿಗಳು ಗಾಯಗೊಂಡು ಪ್ರಜ್ಞಾಹೀನರಾಗಿರುವ ಸನ್ನಿವೇಶ ಉಂಟು ಮಾಡಲಾಯಿತು. ಈ ವೇಳೆ ರಕ್ಷಣಾ ಕಾರ್ಯ ವಿಳಂಬವಿಲ್ಲದೆ ಸಾಗಿತು. ಕಾರ್ಯಾಚರಣೆಗೆ ಅಗ್ನಿಶಾಮಕ ದಳ, ಪೊಲೀಸ್, ಗೃಹರಕ್ಷಕ ದಳ, ಎನ್.ಸಿ.ಸಿ. ಕಮಾಂಡ್ ತಂಡ ಧಾವಿಸಿ ರಕ್ಷಣಾ ಕಾರ್ಯವನ್ನು ಚುರುಕುಗೊಳಿಸಲಾಯಿತು. ಸ್ಟ್ರೆಚರ್ನಲ್ಲಿ ಗಾಯಾಳುಗಳು ಹಾಗೂ ಇನ್ನಿತರ ಅಸ್ವಸ್ಥರನ್ನು ಅಂಬ್ಯುಲೆನ್ಸ್ ನತ್ತ ಹೊತ್ತು ತರುತ್ತಿದ್ದ ದೃಶ್ಯ ಸೃಷ್ಟಿಸಿದ್ದು ವಿಶೇಷವಾಗಿತ್ತು. ಆರೈಕೆ ಕೇಂದ್ರದಲ್ಲಿ ಚಿಕಿತ್ಸೆಗೊಳಪಡಿಸಿದ ಸಂದರ್ಭ ವೈದ್ಯಾಧಿ ಕಾರಿಗಳು ತಪಾಸಣೆ, ಶುಶ್ರೂಷೆ ನಡೆಸುವ ಸನ್ನಿವೇಶವನ್ನು ಕೂಡ ಯಶಸ್ವಿಯಾಗಿ ನಡೆಸಲಾಯಿತು. ಇದೇ ಸಂದರ್ಭದಲ್ಲಿ ಕಟ್ಟಡದ ಒಳಗೆ ಮೂರು ಹಾಗೂ ಹೊರಗೆ ಪತ್ತೆಯಾದ ಒಂದು ಬಾಂಬ್ಗಳನ್ನು ಬಾಂಬ್ ನಿಷ್ಕ್ರಿಯ ದಳದ ಅಧಿಕಾರಿ, ಸಿಬ್ಬಂದಿ ನಿಷ್ಕ್ರಿಯಗೊಳಿಸಿದರು. ಕಟ್ಟಡದಿಂದ ದೂರ ಉಳಿದು ಸುರಕ್ಷತೆ ಕಾಯ್ದುಕೊಳ್ಳುವಂತೆ ಪೊಲೀಸ್ ಇಲಾಖೆಯಿಂದ ಮೈಕ್ನಲ್ಲಿ ಘೋಷಣೆ ಮಾಡುತ್ತಿದ್ದುದು ಗಮನ ಸೆಳೆಯುತ್ತಿತ್ತು. ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಮೀನಾ ನಾಗರಾಜ್, ಇಂದು ನಡೆದ ಅಣಕು ಪ್ರದರ್ಶನ ಕೇವಲ ಸಾಂಕೇತಿಕವಾಗಿದ್ದು, ಬಾಂಬ್ ಸ್ಫೋಟಗೊಂಡರೆ ಯಾವ ರೀತಿ ಮುನ್ನೆಚ್ಚರಿಕೆ ವಹಿಸಬೇಕು ಎಂಬ ಬಗ್ಗೆ ಅರಿವು ಮೂಡಿಸುವುದಕ್ಕೆ ಸೀಮಿತವಾಗಿದೆ. ಘಟನೆಯಲ್ಲಿ ಮೂರು ಲೈವ್ ಬಾಂಬ್ಗಳು ಪತ್ತೆಯಾಗಿದ್ದವು. ಈ ದಾಳಿಯಲ್ಲಿ ಒಟ್ಟು 22 ಮಂದಿ ಗಾಯಗೊಂಡಿದ್ದು, ಅವರಲ್ಲಿ ಮೂವರು ಗಂಭೀರವಾಗಿ ಗಾಯಗೊಂಡಂತೆ ಚಿತ್ರಣ ಸೃಷ್ಟಿಸಲಾಗಿತ್ತು. ಒಟ್ಟಾರೆ ಘಟನೆಯಲ್ಲಿ ಪೊಲೀಸ್ ಇಲಾಖೆ, ಗೃಹರಕ್ಷಕ ದಳ, ಅಗ್ನಿಶಾಮಕದಳ ಹಾಗೂ ಆರೋಗ್ಯ ಇಲಾಖೆ ಮಾನವ ಶಕ್ತಿ ಬಳಸಿ ಕಾರ್ಯಾಚರಣೆ ನಡೆಸಲಾಯಿತು. ಇದೊಂದು ಅಣಕು ಪ್ರದರ್ಶನವಷ್ಟೇ ಆಗಿದ್ದು, ಸಾರ್ವಜನಿಕರು ಯಾವುದೇ ಆತಂಕಕ್ಕೆ ಒಳಗಾಗಬೇಕಿಲ್ಲ ಎಂದು ತಿಳಿಸಿದ ಅವರು, ಜಿಲ್ಲಾಡಳಿತದ ವಿವಿಧ ಇಲಾಖೆಗಳ ಅಧಿಕಾರಿಗಳು ಎಷ್ಟು ಸನ್ನದ್ಧ ರಾಗಿದ್ದಾರೆ. ಇದೇ ರೀತಿಯ ಅವಘಡಗಳು ಸಂಭವಿಸಿದರೆ ಎಷ್ಟು ಸದೃಢವಾಗಿ ಪರಿಸ್ಥಿತಿ ಎದುರಿಸಬಹುದು ಎಂಬ ಬಗ್ಗೆ ಇದೊಂದು ಪ್ರದರ್ಶನ ಎಂದು ಹೇಳಿದರು. ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಚ್.ಎಸ್.ಕೀರ್ತನಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ವಿಕ್ರಮ್ ಅಮಟೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಅಶ್ವತ್ಥ್ ಬಾಬು, ಜಿಲ್ಲಾ ಸರ್ಜನ್ ಮೋಹನ್ ಕುಮಾರ್, ಪೊಲೀಸ್, ಅಗ್ನಿಶಾಮಕ ದಳ, ಗೃಹರಕ್ಷಕ ದಳದ ಅಧಿಕಾರಿ, ಸಿಬ್ಬಂದಿ ಭಾಗವಹಿಸಿದ್ದರು.
16 ಕೆಸಿಕೆಎಂ 4ಬಾಂಬ್ ನಿಷ್ಕ್ರಿಯಗೊಳಿಸಿದ ಬಳಿಕ ಪರಿಶೀಲನೆ ಅಣಕು ಪ್ರದರ್ಶನ.