ಅರಸೀಕೆರೆ: ನಗರದ ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ ಆಯೋಜಿಸಿದ್ದ ಮೂರು ದಿನಗಳ ಆರಾಧನಾ ಮಹೋತ್ಸವದ ಅಂತಿಮ ದಿನವಾದ ಮಂಗಳವಾರ, ಉತ್ತರಾಧನೆ ಪ್ರಯುಕ್ತ ನೂರಾರು ಭಕ್ತರ ಸಾನ್ನಿಧ್ಯದಲ್ಲಿ ಭವ್ಯ ಮೆರವಣಿಗೆ ಜರುಗಿತು.
ನೈರ್ಮಲ್ಯ ಉಷಾಕಾಲ ಪೂಜೆಯಿಂದ ಆರಂಭಗೊಂಡ ಧಾರ್ಮಿಕ ಕಾರ್ಯಕ್ರಮದಲ್ಲಿ 108 ಕಳಸ ಕ್ಷೀರಾಭಿಷೇಕ, ಫಲಪಂಚಾಮೃತಾಭಿಷೇಕ, ತುಳಸಿ ಪೂಜೆ, ಶ್ರೀರಾಯರ ಪಾದಪೂಜೆ, ಕನಕಾಭಿಷೇಕ, ಅಲಂಕಾರ ಸೇವೆ, ನೈವೇದ್ಯ, ಮಹಾ ಮಂಗಳಾರತಿ ಸೇರಿ ನಾನಾ ವಿಧದ ಪೂಜೆಗಳು ನೆರವೇರಿದವು.
ಪೂಜಾ ನಂತರ ಶ್ರೀಮಠದಿಂದ ಆರಂಭವಾದ ಮೆರವಣಿಗೆ ಪೇಟೆಬೀದಿ, ಬಿ.ಎಚ್. ರಸ್ತೆ ಮತ್ತು ವಾಚನಾಲಯ ರಸ್ತೆಯ ಮೂಲಕ ಸಾಗಿ ನಂತರ ಶ್ರೀಮಠದಲ್ಲೇ ಅಂತ್ಯಗೊಂಡಿತು.ವಿಶೇಷವಾಗಿ ಅಲಂಕೃತಗೊಂಡ ರಜತ ಮಂಟಪದಲ್ಲಿ ಆಸೀನರಾಗಿದ್ದ ಶ್ರೀ ಗುರು ರಾಘವೇಂದ್ರ ಸ್ವಾಮಿಯ ಉತ್ಸವ ಮೂರ್ತಿಯನ್ನು ಹೂವಿನ ಶೃಂಗಾರದೊಂದಿಗೆ ರಥದಲ್ಲಿ ಭಕ್ತರ ದರ್ಶನಕ್ಕೆ ಅನುವು ಮಾಡಿಕೊಡಲಾಗಿತ್ತು. ಜೊತೆಗೆ, ಕುಂದಾಪುರ ತಾಲೂಕಿನ ಕೋಟೇಶ್ವರ ಶ್ರೀ ನೀರೆಶಾಲ್ಯ ಮಹಾಲಿಂಗೇಶ್ವರ ದೇವಸ್ಥಾನದ ಚಂಡೆಮೇಳ ಹಾಗೂ ಕೇಶವ ತಂಡದ ಮಂಗಳವಾದ್ಯಗಳು ಮೆರವಣಿಗೆಯ ವೈಭವ ಹೆಚ್ಚಿಸಿದ್ದವು.
ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಲು ಶ್ರೀಮಠದ ವ್ಯವಸ್ಥಾಪಕ ಸತ್ಯನಾರಾಯಣ ದೇಸಾಯಿ, ಗೋವಿಂದ ರಾವ್, ಮಂಜುನಾಥ ರಾವ್, ಮುರಳಿ, ರವಿ ಹೆಗ್ಗಡೆ ಸೇರಿದಂತೆ ಹಲವು ಸ್ವಯಂಸೇವಕರು, ಅನೇಕ ಭಕ್ತರು ಪಾಲ್ಗೊಂಡಿದ್ದರು.