ಕನ್ನಡಪ್ರಭ ವಾರ್ತೆ ಬೆಂಗಳೂರು
ನಟಿಯರ ಮೇಲಿನ ಲೈಂಗಿಕ ಶೋಷಣೆಯನ್ನು ತಡೆಯುವ ನಿಟಿನಲ್ಲಿ ಮಲಯಾಳ ಚಿತ್ರರಂಗದಂತೆ ಕನ್ನಡ ಚಿತ್ರರಂಗದಲ್ಲೂ ನ್ಯಾ। ಹೇಮಾ ಸಮಿತಿ ಮಾದರಿಯ ಸಮಿತಿ ಮಾಡಬೇಕು ಎಂದು ಫೈರ್ ಸಂಘಟನೆಯ ಸದಸ್ಯರ ನಿಯೋಗವೊಂದು ಇತ್ತೀಚೆಗೆ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸಿತ್ತು. ಸಿಎಂ ಸಿದ್ದರಾಮಯ್ಯ ಅವರಿಗೆ ಫೈರ್ ಸಂಸ್ಥೆ ಸಲ್ಲಿಸಿದ್ದ ಮನವಿ ಪತ್ರದಲ್ಲಿ 150ಕ್ಕೂ ಹೆಚ್ಚು ಮಂದಿಯ ಹೆಸರುಗಳು ಇದ್ದವು. ಅದರಲ್ಲಿ ನಟ ಸುದೀಪ್ ಹಾಗೂ ನಟಿ ರಮ್ಯಾ ಅವರ ಹೆಸರುಗಳೂ ಇದ್ದವು.
ಈ ವಿಚಾರವಾಗಿ ನಟಿ ಭಾವನಾ ರಾಮಣ್ಣ ಪ್ರಶ್ನೆ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಸ್ಪಷ್ಟನೆ ನೀಡಿರುವ ಸುದೀಪ್, ‘ಫೈರ್ ಸಂಸ್ಥೆಯ ಪತ್ರದಲ್ಲಿ ನನ್ನ ಹೆಸರು ಇರುವುದು ನನಗೇ ಗೊತ್ತಿಲ್ಲ. ನನ್ನ ಹೆಸರು ಬಳಸಿರುವುದನ್ನು ಬೇರೆ ಯಾರೋ ಹೇಳಿದಾಗ ನನಗೆ ಶಾಕ್ ಆಯಿತು. ನನ್ನನ್ನು ಕೇಳದೆ ನನ್ನ ಹೆಸರು ಬಳಸಿಕೊಂಡಿದ್ದಾರೆ. ಹೀಗಾಗಿ ಫೈರ್ ಸಂಸ್ಥೆ ಮತ್ತು ಅವರು ಸಲ್ಲಿಸಿರುವ ಮನವಿ ಪತ್ರಕ್ಕೂ ನನಗೂ ಯಾವುದೇ ಸಂಬಂಧ ಇಲ್ಲ’ ಎಂದು ಹೇಳಿದ್ದಾರೆ.