ರಾಜ್ಯದಲ್ಲಿ ಕಬ್ಬಿನ ಎಫ್ಆರ್‌ಪಿ ಅವೈಜ್ಞಾನಿಕ: ಶಾಂತಕುಮಾರ

KannadaprabhaNewsNetwork |  
Published : Nov 08, 2025, 01:15 AM IST
7ಕೆಡಿವಿಜಿ2-ದಾವಣಗೆರೆಯಲ್ಲಿ ಶುಕ್ರವಾರ ರಾಜ್ಯ ರೈತ ಮುಖಂಡ ಕುರುಬೂರು ಶಾಂತಕುಮಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು. | Kannada Prabha

ಸಾರಾಂಶ

ರಾಜ್ಯದಲ್ಲಿ ಕಬ್ಬಿನ ಎಫ್ಆರ್‌ಪಿ ಅವೈಜ್ಞಾನಿಕವಾಗಿದೆ. ಸರ್ಕಾರವು ರಾಜ್ಯ ಸಲಹಾ ಬೆಲೆ ಕಾಯ್ದೆ ಪ್ರಕಾರ ಉಪ ಉತ್ಪನ್ನಗಳ ಲಾಭ ಲೆಕ್ಕ ಹಾಕಿ, ಹೆಚ್ಚುವರಿ ದರ ₹3500 ನಿಗದಿಪಡಿಸಲಿ. ಮುಖ್ಯಮಂತ್ರಿ ಸಿದ್ದರಾಮಯ್ಯ ಕಬ್ಬಿನ ಬೆಲೆ ನಿಗದಿ ವಿಚಾರಕ್ಕೆ ಪ್ರಧಾನಿ ನರೇಂದ್ರ ಮೋದಿ ಬಳಿ ರೈತ ಮುಖಂಡರ ನಿಯೋಗ ಕೊಂಡೊಯ್ಯುವ ದಿಟ್ಟ ನಿರ್ಧಾರ ಕೈಗೊಳ್ಳಲಿ ಎಂದು ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ಮುಖಂಡ, ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ ಆಗ್ರಹಿಸಿದರು.

- ಪ್ರಧಾನಿ ಬಳಿಗೆ ಸಿಎಂ ರೈತ ಮುಖಂಡರ ನಿಯೋಗ ಕೊಂಡೊಯ್ಯಲು ಆಗ್ರಹ ।

- ಜನಪ್ರತಿನಿಧಿಗಳಿಮದ ಮೊಸಳೆ ಕಣ್ಣೀರು: ವಾಗ್ದಾಳಿ - - -

ಕನ್ನಡಪ್ರಭ ವಾರ್ತೆ ದಾವಣಗೆರೆ

ರಾಜ್ಯದಲ್ಲಿ ಕಬ್ಬಿನ ಎಫ್ಆರ್‌ಪಿ ಅವೈಜ್ಞಾನಿಕವಾಗಿದೆ. ಸರ್ಕಾರವು ರಾಜ್ಯ ಸಲಹಾ ಬೆಲೆ ಕಾಯ್ದೆ ಪ್ರಕಾರ ಉಪ ಉತ್ಪನ್ನಗಳ ಲಾಭ ಲೆಕ್ಕ ಹಾಕಿ, ಹೆಚ್ಚುವರಿ ದರ ₹3500 ನಿಗದಿಪಡಿಸಲಿ. ಮುಖ್ಯಮಂತ್ರಿ ಸಿದ್ದರಾಮಯ್ಯ ಕಬ್ಬಿನ ಬೆಲೆ ನಿಗದಿ ವಿಚಾರಕ್ಕೆ ಪ್ರಧಾನಿ ನರೇಂದ್ರ ಮೋದಿ ಬಳಿ ರೈತ ಮುಖಂಡರ ನಿಯೋಗ ಕೊಂಡೊಯ್ಯುವ ದಿಟ್ಟ ನಿರ್ಧಾರ ಕೈಗೊಳ್ಳಲಿ ಎಂದು ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ಮುಖಂಡ, ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ ಆಗ್ರಹಿಸಿದರು.

ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಳಗಾವಿ, ಬಾಗಲಕೋಟೆ ಭಾಗದಲ್ಲಿ ಅತಿ ಹೆಚ್ಚು ಕಬ್ಬು ಬೆಳೆಯಲಾಗುತ್ತಿದೆ. ಆ ಭಾಗದ ಪ್ರಭಾವಿ ರಾಜಕಾರಣಿಗಳು, ಸಚಿವರು, ಶಾಸಕರೇ ಸಕ್ಕರೆ ಕಾರ್ಖಾನೆಗಳ ಮಾಲೀಕರಾಗಿದ್ದಾರೆ. ಇದರಿಂದಾಗಿ ಸಿಎಂ ಅವರು ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಬೇಕು ಎಂದರು.

ಅತಿವೃಷ್ಟಿ, ಮಳೆಹಾನಿ ಸೇರಿದಂತೆ ಪ್ರಕೃತಿ ವಿಕೋಪದಿಂದಾಗಿ ಆದ ಹಾನಿ, ಬೆಳೆನಷ್ಟ ಪರಿಹಾರವನ್ನು ಎನ್‌ಡಿಆರ್‌ಎಪ್‌ ಮಾನದಂಡಕ್ಕೆ ತಿದ್ದುಪಡಿ ತರಬೇಕು. ಸಚಿವರು, ಸಂಸದರು, ಶಾಸಕರು ಪ್ರತಿ ವರ್ಷದ ತಮ್ಮ ವೇತನ, ಭತ್ಯೆ, ಸೌಲಭ್ಯ ಹೆಚ್ಚಿಸಿಕೊಳ್ಳುತ್ತಾರೆ. ಸರ್ಕಾರಿ ನೌಕರರಿಗೆ ಪ್ರತಿ ವರ್ಷ ವೇತನ ಹೆಚ್ಚಿಸುತ್ತಾರೆ. ಆದರೆ, ರೈತರು ಬೆಳೆ ನಷ್ಟ ಪರಿಹಾರ ಮಾನದಂಡವನ್ನು 8 ವರ್ಷವಾದರೂ ಹೆಚ್ಚಿಸಿರದ ಬಗ್ಗೆ ಪ್ರಶ್ನಿಸಿದರೆ ಎಲ್ಲ ಜನಪ್ರತಿನಿಧಿಗಳು ರೈತರ ಬಗ್ಗೆ ಮೊಸಳೆ ಕಣ್ಣೀರು ಸುರಿಸುತ್ತಾರೆ. ಇದು ರೈತರಿಗೆ ಮಾಡುವ ಮಹಾಮೋಸ ಎಂದು ದೂರಿದರು.

ಮಳೆ ಆಶ್ರಯದ ಬೆಳೆನಷ್ಟಕ್ಕೆ ಎಕರೆಗೆ ಕನಿಷ್ಠ ₹25 ಸಾವಿರ, ನೀರಾವರಿ ತೋಟಗಾರಿಕೆ ಬೆಳೆಗೆ ಕನಿಷ್ಟ ₹40 ಸಾವಿರ, ವಾಣಿಜ್ಯ ಬೆಳೆಗೆ ₹60 ಸಾವಿರ ಏರಿಸಿ, ಕೇಂದ್ರ ಸರ್ಕಾರ ತಿದ್ದುಪಡಿ ತರಬೇಕು. ಕಲ್ಯಾಣ ಕರ್ನಾಟಕ, ಉತ್ತರ ಕರ್ನಾಟಕದ ಮಳೆಹಾನಿ, ಪ್ರವಾಹ ಹಾನಿ, ರೈತರ ಬೆಳೆ ನಷ್ಟಕ್ಕೆ ಕೇಂದ್ರ ಸರ್ಕಾರವು ಪಂಜಾಬ್ ರಾಜ್ಯಕ್ಕೆ ವಿಶೇಷ ಪ್ಯಾಕೇಜ್ ನೀಡಿದಂತೆ ಕರ್ನಾಟಕಕ್ಕೂ 5 ಸಾವಿರ ಕೋಟಿ ರು.ಗಳ ವಿಶೇಷ ಪ್ಯಾಕೇಜ್ ನೀಡಲಿ. ಈ ಬಗ್ಗೆ ರಾಜ್ಯದ ಸಮಸ್ತ ಸಂಸದರು ಪಕ್ಷಾತೀತವಾಗಿ ಕೇಂದ್ರದ ಮೇಲೆ ಒತ್ತಡ ಹೇರಲಿ ಎಂದು ಅವರು ಆಗ್ರಹಿಸಿದರು.

ಕೃಷಿ ಇಲಾಖೆಯೇ ಕಬ್ಬು ಬೆಳೆಯಲು ಪ್ರತಿ ಟನ್‌ಗೆ ₹3700 ವೆಚ್ಚ ಆಗುತ್ತದೆಂದು ಕೇಂದ್ರ ಕೃಷಿ ಬೆಲೆ ಆಯೋಗಕ್ಕೆ ವರದಿ ನೀಡಿದೆ. ಅದನ್ನು ಅರಿತು ರಾಜ್ಯ ಸರ್ಕಾರ ಕಬ್ಬಿಗೆ ಹೆಚ್ಚುವರಿ ರಾಜ್ಯ ಸಲಹಾ ಬೆಲೆ ನಿಗದಿಪಡಿಸಲಿ. ಕಬ್ಬಿನ ತೂಕದಲ್ಲಿ ಮೋಸ ತಪ್ಪಿಸಲು ಎಲ್ಲ ಸಕ್ಕರೆ ಕಾರ್ಖಾನೆ ಮುಂಭಾಗದಲ್ಲಿ ಸರ್ಕಾರದಿಂದಲೇ ತೂಕದ ಯಂತ್ರವನ್ನು ಸ್ಥಾಪಿಸಲಿ. ಕೃಷಿ ಬಳಕೆಗೆ ಇದ್ದ ನರೇಗಾ ಯೋಜನೆ ಸ್ಥಗಿತಗೊಳಿಸಿದ್ದನ್ನು ಪುನಾರಂಭಿಸಬೇಕು. ಭತ್ತದ ಕನಿಷ್ಠ ಬೆಂಬಲ ಬೆಲೆ ₹2369ಕ್ಕೆ ಹೆಚ್ಚುವರಿ ಪ್ರೋತ್ಸಾಹಧನ ₹500 ಪ್ರತಿ ಕ್ವಿಂಟಾಲ್‌ಗೆ ನೀಡಬೇಕು. ಸರ್ಕಾರದಿಂದ ಖರೀದಿ ಕೇಂದ್ರಗಳನ್ನೂ ಸ್ಥಾಪಿಸಬೇಕು ಎಂದು ಕುರುಬೂರು ಶಾಂತಕುಮಾರ ಒತ್ತಾಯಿಸಿದರು.

ಹಸಿರು ಸೇನೆ ರಾಜ್ಯಾಧ್ಯಕ್ಷ ಕರಬಸಪ್ಪ ಗೌಡ, ರಾಜ್ಯ ಕಬ್ಬು ಬೆಳೆಗಾರರ ಸಂಘದ ಸಂಘಟನಾ ಕಾರ್ಯದರ್ಶಿ ಹತ್ತಳ್ಳಿ ದೇವರಾಜ, ರೈತ ಸಂಘದ ಹಿರಿಯ ಮುಖಂಡ ನಿಟುವಳ್ಳಿ ಅಂಜಿನಪ್ಪ ಪೂಜಾರ, ರಾಜ್ಯ ಉಪಾಧ್ಯಕ್ಷ ದೇವಕುಮಾರ, ಬರಡನಪುರ ನಾಗರಾಜ, ಮಲ್ಲಿಕಾರ್ಜುನ, ಬಸಪ್ಪ ಮೇಷ್ಟ್ರು, ಬಸವರಾಜಪ್ಪ ಹೊನ್ನತ್ತಿ, ಪರಶುರಾಮ ಇತರರು ಇದ್ದರು.

- - -

-7ಕೆಡಿವಿಜಿ2:

ದಾವಣಗೆರೆಯಲ್ಲಿ ಶುಕ್ರವಾರ ರಾಜ್ಯ ರೈತ ಮುಖಂಡ ಕುರುಬೂರು ಶಾಂತಕುಮಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

PREV

Recommended Stories

ಬ್ರಾಹ್ಮಣ ಸಮುದಾಯಕ್ಕೆ ಸೌಲಭ್ಯ ನೀಡಲು ಬದ್ಧ : ಸಚಿವ ದಿನೇಶ್‌ ಗುಂಡೂರಾವ್‌
ಬೆಂಗಳೂರು ನಗರದ 6 ಆರ್‌ಟಿಒ ಕಚೇರಿ ಮೇಲೆ ದಾಳಿ: ಹಲವು ಅಕ್ರಮ ಪತ್ತೆ