ಬಾಹ್ಯಕಾಶ ಕ್ಷೇತ್ರದ ನಕ್ಷತ್ರ ಸುನೀತಾ ವಿಲಿಯಮ್ಸ್: ಡಾ ಮಹೇಶ್

KannadaprabhaNewsNetwork | Published : Mar 20, 2025 1:21 AM

ಸಿರಿಗೆರೆ ಸಮೀಪದ ಕಡ್ಲೇಗುದ್ದು ಪ್ರೌಢಶಾಲೆಯಲ್ಲಿ ಬಾಹ್ಯಾಕಾಶದಿಂದ ಹಿಂತಿರುಗಿದ ಸುನಿತಾ ವಿಲಿಯಮ್ಸ್‌ ಅವರಿಗೆ ಸ್ವಾಗತ ಕೋರಲಾಯಿತು.

ಭೂಮಿಗೆ ಕ್ಷೇಮವಾಗಿ ಮರಳಿದ ಹಿನ್ನೆಲೆಯಲ್ಲಿ ಕಡ್ಲೆ ಗುದ್ದು ಪ್ರೌಢಶಾಲಾ ವಿದ್ಯಾರ್ಥಿಗಳಿಂದ ಸಂಭ್ರಮಚಾರಣೆಕನ್ನಡಪ್ರಭ ವಾರ್ತೆ ಸಿರಿಗೆರೆ

ಸುಮಾರು 9 ತಿಂಗಳಿನಿಂದ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ತ್ರಿಶಂಕು ಸ್ಥಿತಿಯಲ್ಲಿದ್ದ ಸುನೀತಾ ವಿಲಿಯಮ್ಸ್ ಅವರಿಗೆ ಕೊನೆಗೂ ಮುಕ್ತಿ ಸಿಕ್ಕಿದೆ. ಭಾರತೀಯ ಮೂಲದ ಸಂಜಾತೆ ಸುನೀತಾ ವಿಲಿಯಮ್ಸ್ ಬಾಹ್ಯಾಕಾಶ ಲೋಕದ ದೃವತಾರೆ ಆಗಿದ್ದಾರೆ. ಅವರ ಧೈರ್ಯ ಸಾಹಸ ಮನೋಸ್ಥೈರ್ಯ ನಮ್ಮೆಲ್ಲರಿಗೂ ಸ್ಪೂರ್ತಿಯಾಗಲಿ. ಸೀತೆಯಂತೆ ವನವಾಸ ಮುಗಿಸಿ ಸುನಿತಾ ಮರಳಿ ಭೂಮಿಗೆ ತಲುಪಿ ಸೀತೆ ಸುನಿತೇಯಾಗಿದ್ದಾರೆ. ನಮ್ಮೆಲ್ಲರಿಗೂ ಕ್ಷೇಮವಾಗಿ ತಲುಪಿರುವುದು ಹರ್ಷ ತಂದಿದೆ ಎಂದು ಡಾ.ಮಹೇಶ್ ತಿಳಿಸಿದರು.

ಸಮೀಪದ ಕಡ್ಲೆಗುದ್ದು ಗ್ರಾಮದ ಶ್ರೀ ಆಂಜನೇಯ ಸ್ವಾಮಿ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡಿದ್ದ ವೆಲ್ಕಮ್ ಬ್ಯಾಕ್ ಸುನಿತಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಸುನೀತಾ ವಿಲಿಯಮ್ಸ್, ಬುಚ್ ವಿಲ್ಮೋರ್, ನಿಕ್ ಹೇಗ್, ಅಲೆಕ್ಸಾಂಡರ್ ಗೊರ್ಬನೊವ್ ಅವರಿದ್ದ ಸ್ಪೇಸ್ಎಕ್ಸ್‌ ಡ್ರ್ಯಾಗನ್ ಕ್ಯಾಪ್ಸುಲ್ ಫ್ಲಾರಿಡಾದ ಕಡಲ ತೀರಕ್ಕೆ ಬಂದಿಳಿದಿದೆ. ನಾಸಾ ಹಾಗೂ ಸ್ಪೇಸ್ ಎಕ್ಸ್‌ನ ಜಂಟಿ ಪ್ರಯತ್ನ ಯಶಸ್ವಿಯಾಗಿದೆ.

ಸ್ಪೇಸ್ಎಕ್ಸ್‌ನ ‘ಫಾಲ್ಕನ್ 9’ ರಾಕೆಟ್ ಮೂಲಕ ಫ್ಲಾರಿಡಾದ ಕೆನಡಿ ಸ್ಪೇಸ್ ಸೆಂಟರ್‌ನಿಂದ ಕಳೆದ ಶುಕ್ರವಾರ ರಾತ್ರಿ 7.03ಕ್ಕೆ ನಭಕ್ಕೆ ಚಿಮ್ಮಿದ್ದ ‘ಡ್ರ್ಯಾಗನ್’ ಹೆಸರಿನ ಗಗನನೌಕೆಯನ್ನು ರವಿವಾರ ಬೆಳಗ್ಗೆ ಐಎಸ್ಐಎಸ್‌ಗೆ ಡಾಕಿಂಗ್ (ಜೋಡಣೆ) ಮಾಡಲಾಗಿತ್ತು. ಸ್ಪೇಸ್‌ ಎಕ್ಸ್ ಡ್ರ್ಯಾಗನ್ ಗಗನನೌಕೆಯಲ್ಲಿ ತೆರಳಿದ ನಾಸಾದ ಆ್ಯನ್ ಮೆಕ್ಲೀನ್ ಮತ್ತು ನಿಕೋಲ್ ಅಯೇರ್ಸ್, ಜಾಕ್ಸಾ ಗಗನಯಾನಿ ತಕುಯೊ ಒನಿಶಿ ಮತ್ತು ರೊಸ್ಕೋಸ್ಮಸ್ ನ ಕಿರಿಲ್ ಪೆಸ್ಕೋವ್ ಅವರು ಒಬ್ಬೊಬ್ಬರಾಗಿ ಐಎಸ್ಎಸ್ ಪ್ರವೇಶಿಸಿದ್ದರು. 2024ರ ಜೂನ್ 5ರಂದು ಬೋಯಿಂಗ್ ಸ್ಟಾರ್‌ಲೈನರ್‌ ಬಾಹ್ಯಾಕಾಶ ನೌಕೆಯಲ್ಲಿ ಗಗನಯಾತ್ರಿಗಳಾದ ಬುಚ್ ವಿಲ್ಮೋರ್ ಮತ್ತು ಸುನಿತಾ ವಿಲಿಯಮ್ಸ್ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ತೆರಳಿದ್ದರು. 8 ದಿನಗಳ ಕಾರ್ಯಾಚರಣೆಗಾಗಿ ತೆರಳಿದ್ದ ಇವರು ಆ ಬಳಿಕ ಭೂಮಿಗೆ ಮರಳಬೇಕಿತ್ತು. ಆದರೆ, ತಾಂತ್ರಿಕ ಸಮಸ್ಯೆಗಳಿಂದ ಇಬ್ಬರು ಗಗನಯಾತ್ರಿಗಳನ್ನು ಬಾಹ್ಯಾಕಾಶದಲ್ಲೇ ಬಿಟ್ಟು ಸ್ಟಾರ್‌ಲೈನರ್‌ ಭೂಮಿಗೆ ಮರಳಿತು. ಇದಾದ ಬಳಿಕ ಗಗನಯಾತ್ರಿಗಳನ್ನು ಭೂಮಿಗೆ ಕರೆತರುವ ಪ್ರಯತ್ನ ಹಲವು ಬಾರಿ ನಡೆದಿವೆ. ಆದರೆ, ಅದು ವಿಫಲವಾಗಿತ್ತು. ಇದೀಗ ನಾಸಾ ಮತ್ತು ಎಲಾನ್ ಮಸ್ಕ್ ಅವರ ಸ್ಪೇಸ್ ಎಕ್ಸ್ ಜಂಟಿ ಕಾರ್ಯಾಚರಣೆಯ ಫಲವಾಗಿ ಗಗನಯಾತ್ರಿಗಳನ್ನು ಯಶಸ್ವಿಯಾಗಿ ಭೂಮಿಗೆ ಕರೆ ತರಲಾಗಿದೆ.

ಸುದೀರ್ಘ 9 ತಿಂಗಳ ಕಾಲ ಬಾಹ್ಯಾಕಾಶ ನಿಲ್ದಾಣದಲ್ಲಿದ್ದು ನೀವು ನಡೆಸಿದ ಬಾಹ್ಯಾಕಾಶ ಅಧ್ಯಯನ, ಪ್ರಯೋಗ ಹಾಗೂ ವೈಜ್ಞಾನಿಕ ಸಂಶೋಧನೆಗಳು ಭವಿಷ್ಯದ ಬಾಹ್ಯಾಕಾಶ ವಿಜ್ಞಾನಕ್ಕೆ ಪೂರಕವಾಗುವ ನಿರೀಕ್ಷೆಯಿದೆ. ನಿಮ್ಮ ಈ ಸಾಧನೆ ಹಾಗೂ ಧೈರ್ಯ ನಮ್ಮ ವಿಜ್ಞಾನಿಗಳಿಗೆ ಸ್ಪೂರ್ತಿಯಾಗಲಿ ಎಂದರು.

ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಸಿಹಿ ಹಂಚಿ ಸಂಭ್ರಮಾಚರಣೆ ಮಾಡಲಾಯಿತು ಕಾರ್ಯಕ್ರಮದಲ್ಲಿ ಶಿಕ್ಷಕರಾದ ಮಂಜಪ್ಪ ಮಹಾಂತೇಶ್ ನಟರಾಜ್ ಹಾಜರಿದ್ದರು.