ಹೊಸಪೇಟೆ; ವಿಜಯನಗರ ಜಿಲ್ಲೆಯಲ್ಲಿ ಹೊಸ ವರ್ಷಾಚರಣೆ ಸಂಭ್ರಮಕ್ಕೆ ಸಕಲ ಸಿದ್ಧತೆ ನಡೆದಿದ್ದು, ದೇಶ, ವಿದೇಶಿ ಪ್ರವಾಸಿಗರು ಹಂಪಿಯ ಹೇಮಕೂಟ ಪರ್ವತದಲ್ಲಿ ಸೂರ್ಯಾಸ್ತಮಾನ ವೀಕ್ಷಣೆ ಮಾಡುವ ಮೂಲಕ 2024ರ ವರ್ಷಕ್ಕೆ ವಿದಾಯ ಹೇಳಿದರು.ಹಂಪಿಯ ಸ್ಮಾರಕಗಳ ವೀಕ್ಷಣೆಗೆ ದೇಶ, ವಿದೇಶಿ ಪ್ರವಾಸಿಗರು ಬೀಡುಬಿಟ್ಟಿದ್ದಾರೆ. ಇನ್ನು ಹಂಪಿ ಆಚೆ ಆನೆಗೊಂದಿ ಸುತ್ತಮುತ್ತಲಿನ ರೆಸಾರ್ಟ್ಗಳಲ್ಲೂ ದೇಶ, ವಿದೇಶಿ ಪ್ರವಾಸಿಗರು ಬೀಡುಬಿಟ್ಟಿದ್ದು, ಸಂಗೀತ ಕಾರ್ಯಕ್ರಮಗಳಲ್ಲಿ ಪ್ರವಾಸಿಗರು ಭಾಗಿಯಾಗಲಿದ್ದಾರೆ. ಹೊಸ ವರ್ಷಕ್ಕಾಗಿ ಹೊಸಪೇಟೆ, ಕಮಲಾಪುರ ಭಾಗದ ಹೋಟೆಲ್, ರೆಸಾರ್ಟ್ಗಳಲ್ಲಿ ಕೇಕ್ ಕತ್ತರಿಸಿ, ಸಂಗೀತ ಕಾರ್ಯಕ್ರಮಗಳು ನಡೆಯಲಿವೆ. ಈಗಾಗಲೇ ಪೊಲೀಸರು ಕೂಡ ಜಿಲ್ಲೆಯಲ್ಲಿ ನಿಗಾ ವಹಿಸಿದ್ದು, ಅಹಿತಕರ ಘಟನೆ ನಡೆಯದಂತೆ ಬಂದೋಬಸ್ತ್ ಕೂಡ ಕೈಗೊಂಡಿದ್ದಾರೆ.
ಹೊಸ ವರ್ಷದ ಸಂಭ್ರಮಾಚರಣೆಗೆ ಬೇಕರಿಗಳಲ್ಲಿ ಬಗೆಬಗೆಯ ತರಹೇವಾರಿ ಕೇಕ್ ಗಳು ಸಿದ್ಧಗೊಂಡಿವೆ. ರಸ್ಮಲಾಯಿ, ಬ್ಲಾಕ್ ಫಾರೆಸ್ಟ್, ಬಟರ್ ಸ್ಕಾಚ್, ರೆಡ್ ವೆಲ್ ವೆಟ್, ಮ್ಯಾಂಗ್ಯೊ, ಪೈನಾಪಲ್, ಡ್ರೈ ಫ್ರೂಟ್ಸ್, ಬಾದಾಮ್, ಚಾಕೋ ಚಿಪ್ಸ್, ವೈಟ್ ಫಾರೆಸ್ಟ್, ಹನಿ ರೋಸ್ ಸೇರಿದಂತೆ 45 ಬಗೆಯ ಕೇಕ್ ಗಳು ಬೇಕರಿಗಳಲ್ಲಿ ಸಿದ್ಧಗೊಂಡಿವೆ. ಮಧ್ಯರಾತ್ರಿಯಲ್ಲಿ ಕೇಕ್ಗಳನ್ನು ಮನೆಗಳಲ್ಲಿ ಮತ್ತು ಹೋಟೆಲ್, ರೆಸಾರ್ಟ್ಗಳಲ್ಲಿ ಕತ್ತರಿಸಲಾಗುತ್ತದೆ. ಹಾಗಾಗಿ ಮೊದಲೇ ಕೇಕ್ಗಳನ್ನು ಸಿದ್ಧ ಮಾಡಲಾಗಿದೆ.
2025ರ ಸ್ವಾಗತಕ್ಕೆ ಯುವಕರ ಪಡೆ ಕೂಡ ಸಜ್ಜಾಗಿದೆ. ಯುವ ಸಮೂಹ ಹೊಸ ವರ್ಷವನ್ನು ಸಂಭ್ರಮದಿಂದ ಆಚರಣೆ ಮಾಡಲಿದ್ದಾರೆ. ಹಾಗಾಗಿ ನಗರದ ಪುನೀತ್ ರಾಜ್ಕುಮಾರ ವೃತ್ತ ಸೇರಿದಂತೆ ಪ್ರಮುಖ ವೃತ್ತಗಳಲ್ಲೂ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ.ಪೊಲೀಸರ ನಿಗಾ:
ಹಂಪಿ, ತುಂಗಭದ್ರಾ ಜಲಾಶಯ ಸೇರಿದಂತೆ ಪ್ರವಾಸಿಗರು ಸೇರುವ ಸ್ಥಳಗಳ ಮೇಲೆ ಹದ್ದಿನ ಕಣ್ಣು ಇಡಲಾಗಿದೆ. ಜನ ಸೇರುವ ಸ್ಥಳಗಳಲ್ಲಿ ವಿಶೇಷವಾಗಿ ಪೊಲೀಸ್ ಗಸ್ತು ಕೂಡ ಹೆಚ್ಚು ಮಾಡಲಾಗಿದೆ. ಹಂಪಿಯಲ್ಲಿ ಈಗಾಗಲೇ ಪ್ರವಾಸಿಗರು ಆಗಮಿಸಿದ್ದು, ರಾತ್ರಿ ಹೊತ್ತಿನಲ್ಲೂ ಹೆಚ್ಚಿನ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ.