ಸುಂಟಿಕೊಪ್ಪ: ನ.1ರಂದು ಅದ್ಧೂರಿ ಕನ್ನಡ ರಾಜ್ಯೋತ್ಸವ ಆಚರಣೆ ನಿರ್ಧಾರ

KannadaprabhaNewsNetwork | Published : Oct 24, 2024 12:46 AM

ಸಾರಾಂಶ

ಮಂಗಳವಾರ ಸುಂಟಿಕೊಪ್ಪದ ದ್ವಾರಕ ಸಭಾಂಗಣದಲ್ಲಿ ಹೋಬಳಿ ಕ.ಸಾ.ಪ.ಅಧ್ಯಕ್ಷ ಪಿ.ಎಫ್.ಸಭಾಸ್ಟೀನ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸುಂಟಿಕೊಪ್ಪದ ಕನ್ನಡ ವೃತ್ತದಲ್ಲಿ ನ.1 ರಂದು ಕನ್ನಡ ರಾಜ್ಯೋತ್ಸವವನ್ನು ಅದ್ಧೂರಿಯಾಗಿ ಆಚರಿಸಲು ನಿರ್ಧರಿಸಲಾಯಿತು.

ಕನ್ನಡಪ್ರಭ ವಾರ್ತೆ ಸುಂಟಿಕೊಪ್ಪ

ಸುಂಟಿಕೊಪ್ಪ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಕನ್ನಡ ರಾಜ್ಯೋತ್ಸವ ಆಚರಣೆ ಪೂರ್ವಬಾವಿ ಸಭೆ ನಡೆಯಿತು.

ಮಂಗಳವಾರ ದ್ವಾರಕ ಸಭಾಂಗಣದಲ್ಲಿ ಹೋಬಳಿ ಕ.ಸಾ.ಪ.ಅಧ್ಯಕ್ಷ ಪಿ.ಎಫ್.ಸಭಾಸ್ಟೀನ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸುಂಟಿಕೊಪ್ಪದ ಕನ್ನಡ ವೃತ್ತದಲ್ಲಿ ನ.1 ರಂದು ಕನ್ನಡ ರಾಜ್ಯೋತ್ಸವವನ್ನು ಅದ್ಧೂರಿಯಾಗಿ ಆಚರಿಸಲು ನಿರ್ಧರಿಸಲಾಯಿತು.

ಕನ್ನಡ ವೃತ್ತ ಸ್ಥಾಪನೆಗೆ ಕಾರಣಕರ್ತರಲ್ಲಿ ಒಬ್ಬರಾಗಿ ಆ ಸಮಯದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರು ಆಗಿದ್ದ ಕ್ಲಾಡಿಯಸ್ ಲೋಬೋ ಮತ್ತು ಕನ್ನಡ ಪರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ಸಮಾಜ ಸೇವಕ ಜಾಹಿದ್‌ಆಹ್ಮದ್ ಅವರನ್ನು ಸನ್ಮಾನಿಸಲು ನಿರ್ಧರಿಸಲಾಯಿತು.

ಕುಶಾಲನಗರ ತಾಲೂಕು ಕ.ಸಾ.ಪ. ಅಧ್ಯಕ್ಷ ಕೆ.ಎಸ್ ನಾಗೇಶ್ ಮಾತನಾಡಿ, ನ.11 ರಂದು ಕುಶಾಲನಗರದಲ್ಲಿ ರಾಜ್ಯೋತ್ಸವ ಕಾರ್ಯಕ್ರಮದ ಅಂಗವಾಗಿ 5 ಸಹಸ್ರ ಮಂದಿಯಿಂದ ಏಕಕಂಠದಿಂದ ಏಕಕಾಲದಲ್ಲಿ ಕನ್ನಡ ನಾಡಗೀತೆ, ರೈತಗೀತೆ ಮತ್ತು ಹುಟ್ಟಿದರೆ ಕನ್ನಡನಾಡಲ್ಲಿ ಹುಟ್ಟಬೇಕು ಗೀತಾ ಗಾಯನದ ಕುರಿತು ವಿವರ ಮಾಹಿತಿ ನೀಡಿದರು.

ಸುವರ್ಣ ಕರ್ನಾಟಕ ಸಂಭ್ರಮ 50 ಸಮಾರೋಪ ಹಾಗೂ ಮಂಡ್ಯದಲ್ಲಿ ಡಿ.20,21 ಮತ್ತು 22 ರಂದು ನಡೆಯಲಿರುವ 87 ನೇ ಅಖಿಲಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಪ್ರಚಾರದ ಕನ್ನಡ ಜ್ಯೋತಿ ಕುಶಾಲನಗರಕ್ಕೆ ಆಗಮಿಲಿದೆ. ಬೈಚನಹಳ್ಳಿ ಮಾರಮ್ಮ ದೇವಸ್ಥಾನದಿಂದ ರಥಬೀದಿಯವರೆಗೆ ಕಲಾ ತಂಡಗಳು ಸ್ಥಳೀಯ ಸಾಂಸ್ಕೃತಿಕ ವೈಭವದೊಂದಿಗೆ ಅದ್ಧೂರಿ ಮೆರವಣಿಗೆ ನಡೆಯಲಿದೆ ಎಂದು ಹೇಳಿದರು.

ಸುಂಟಿಕೊಪ್ಪ ಹೋಬಳಿ ಕಾರ್ಯದರ್ಶಿ ಕೆ.ಎಸ್.ಅನಿಲ್‌ಕುಮಾರ್ ಸ್ವಾಗತಿಸಿ, ವಂದಿಸಿದರು.

ತಾಲೂಕು ಕ.ಸಾ.ಪ. ಪ್ರಧಾನ ಕಾರ್ಯದರ್ಶಿ ಟಿ.ವಿ.ಶೈಲಾ, ಪದಾಧಿಕಾರಿಗಳಾದ ಬಿ.ಸಿ.ದಿನೇಶ್, ಟಿ.ಜಿ.ಪ್ರೇಮ್‌ಕುಮಾರ್, ಡಿ.ಆರ್.ಸೋಮಶೇಖರ್, ಬಿ.ಬಿ.ಹೇಮಲತಾ, ದೇವಿಪ್ರಸಾದ್ ಕಾಯಾರ್‌ಮಾರ್, ಜಿ.ಬಿ.ಹರೀಶ್, ಸುಂಟಿಕೊಪ್ಪ ಕ.ಸಾ.ಪ. ಕೋಶಾಧಿಕಾರಿ ಬಿ.ಆರ್.ಸತೀಶ್‌ ಶೇಟ್, ನಿಕಟಪೂರ್ವ ಅಧ್ಯಕ್ಷ ಎಂ.ಎಸ್.ಸುನಿಲ್, ಪದಾಧಿಕಾರಿಗಳಾದ ಅಶೋಕ್ ಶೇಟ್, ವಿನ್ಸೆಂಟ್, ಲೀಲಾವತಿ, ಸುನೀತ ಗಿರೀಶ್ ಸೇರಿದಂತೆ ಪದಾಧಿಕಾರಿಗಳು ಪಾಲ್ಗೊಂಡಿದ್ದರು.

Share this article