ಧಾರವಾಡ:ನಗರದ ಕರ್ನಾಟಕ ಕಾಲೇಜು ಮೈದಾನದಲ್ಲಿ ಸಂಸದ ಕ್ರೀಡಾ ಮಹೋತ್ಸವ ಅಂಗವಾಗಿ ನಡೆದ ಕುಸ್ತಿ ಸ್ಪರ್ಧೆಗೆ ಶುಕ್ರವಾರ ಚಾಲನೆ ದೊರೆಯಿತು. ತೊಡೆ ತಟ್ಟಿ ಅಖಾಡಕ್ಕಿಳಿದ ಪೈಲ್ವಾನರು ಎದುರಾಳಿಗಳನ್ನು ಮಣಿಸಿದ ರೀತಿ ಸ್ಪರ್ಧೆಗೆ ಹುರುಪು ತುಂಬಿತು. ಬಿಸಿಲನ್ನೂ ಲೆಕ್ಕಿಸದೇ ಕುಸ್ತಿ ಪಂದ್ಯ ವೀಕ್ಷಿಸಿ ಕ್ರೀಡಾಭಿಮಾನ ಮೆರೆದ ಜನತೆ, ಕ್ರೀಡಾಪಟುಗಳನ್ನು ಹುರಿದುಂಬಿಸುತ್ತಿದ್ದರು.
ಸ್ಪರ್ಧೆಯ ಮೊದಲ ದಿನ ತೂಕದ ಕುಸ್ತಿಗಳು ನಡೆದವು. ತೊಡೆ ತಟ್ಟಿ ನಿಂತ ಮಲ್ಲರು ಪಟ್ಟು ಹಾಕಿ ಎದುರಾಳಿಯನ್ನು ಎತ್ತಿ ಬೀಳಿಸುತ್ತಿರುವುದು ರೋಮಾಂಚನಕಾರಿಯಾಗಿತ್ತು. ಜಟ್ಟಿಗಳ ಕಾದಾಟ ನೋಡುಗರನ್ನು ರೋಮಾಂಚನಗೊಳಿಸುತ್ತಿತ್ತು. ಮೈದಾನದಲ್ಲಿ ಜಗ-ಜಟ್ಟಿಗಳ ಕಾದಾಟ ನೋಡುಗರನ್ನು ಬೆರಗುಗೊಳಿಸಿಸುವಂತಿತ್ತು.ಕುಸ್ತಿಪಟುಗಳು ಒಳ್ಳೆಯ ಪಟ್ಟು ಹಾಕಿದಾಗ ಜನ ಮೆಚ್ಚುಗೆ ಸೂಚಿಸಿದರು. ತಮ್ಮ ನೆಚ್ಚಿನ ಕ್ರೀಡಾಪಟು ನಿರೀಕ್ಷಿತ ಪ್ರದರ್ಶನ ನೀಡದಿದ್ದಾಗ ನಿರಾಶರಾಗುತ್ತಿದ್ದೂ ಕಂಡಿತು. ಸ್ಪರ್ಧೆಯಲ್ಲಿ ವೀಕ್ಷಕ ವಿವರಣೆ ನೀಡುತ್ತಿದ್ದಾಗ ಜನ ಕೇಕೆಯೊಂದಿಗೆ ಬಂದಾ ನೋಡು ನಮ್ಮ ಪೈಲ್ವಾನ್ ಎಂದು ಹುರಿದುಂಬಿಸುತ್ತಿದ್ದರು.
ಕುಸ್ತಿ ಸ್ಪರ್ಧೆಗೆ ಚಾಲನೆ ನೀಡಿದ ವಿಪ ಸದಸ್ಯ ಶ್ರೀ ಎಸ್.ವಿ. ಸಂಕನೂರ, ಹಳ್ಳಿಗಳಲ್ಲಿ ಕುಸ್ತಿ ಕಣ್ಮರೆಯಾಗುತ್ತಿದೆ. ಇಂತಹ ಸಂದರ್ಭದಲ್ಲಿ ಕುಸ್ತಿ ಸ್ಪರ್ಧೆ ಆಯೋಜಿಸಿರುವ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರ ಕಾರ್ಯ ಮೆಚ್ಚುವಂತಹದ್ದು. ಸುತ್ತಮುತ್ತಲಿನ ಹಳ್ಳಿಗಳಿಂದ ಬಂದ ಜನರು ಕುಸ್ತಿ ನೋಡಿ ಸಂಭ್ರಮಿಸುತ್ತಿದ್ದಾರೆ ಎಂದು ಹರ್ಷ ವ್ಯಕ್ತಪಡಿಸಿದರು.ಮೇಯರ್ ಜ್ಯೋತಿ ಪಾಟೀಲ್, ಉಪ ಮೇಯರ್ ಸಂತೋಷ ಚವ್ಹಾಣ, ಪಾಲಿಕೆ ಸದಸ್ಯರಾದ ತಿಪ್ಪಣ್ಣ ಮಜ್ಜಗಿ, ಈರೇಶ ಅಂಚಟಗೇರಿ, ಚಂದ್ರಶೇಖರ ಮನಗುಂಡಿ, ವಿಜಯಾನಂದ ಶೆಟ್ಟಿ, ಶಂಕರ ಶೇಳಕೆ, ರಾಮಣ್ಣ ಬಡಿಗೇರ, ಸುರೇಶ ಬೇದ್ರೆ, ಶಶಿಮೌಳಿ ಕುಲಕರ್ಣಿ, ಶರಣು ಅಂಗಡಿ, ಅನೂಪ್ ಬಿಜವಾಡ, ಕಲ್ಮೇಶ ಬೇಲೂರ, ಶಂಕರಕೊಮಾರ ದೇಸಾಯಿ, ಬಸವರಾಜ ಗರಗ, ಮಂಡಳ ಅಧ್ಯಕ್ಷರು ಉಪಸ್ಥಿತರಿದ್ದರು.ಶನಿವಾರ ಜಂಗಿ ನಿಖಾಲಿ ಕುಸ್ತಿ ಸ್ಪರ್ಧೆ ನಡೆಯಲಿದ್ದು ಅಂತಾರಾಷ್ಟ್ರೀಯ ಚಾಂಪಿಯನ್ ಇರಾನ್ನ ಮಿರ್ಜಾ ಇರಾನ್ ಜತೆಗೆ ಹರಿಯಾಣದ ಪುಷ್ಪೇಂದ್ರ ಮತ್ತು ಇನ್ನಿತರ ಪ್ರಖ್ಯಾತ ಕುಸ್ತಿಪಟುಗಳು ಸೆಣಸಲಿದ್ದಾರೆ.