ಸುಂಟಿಕೊಪ್ಪ: ಸುಂಟಿಕೊಪ್ಪದಲ್ಲಿ 29, 30ರಂದು ನಡೆಯುವ ಕೊಡಗು ಜಿಲ್ಲಾ 17ನೇ ಸಾಹಿತ್ಯ ಸಮ್ಮೇಳನದ ಪೂರ್ವ ಸಿದ್ಧತೆಗಳು ನಡೆಯುತ್ತಿವೆ. 2015ರಲ್ಲಿ ಹೋಬಳಿ ಮಟ್ಟದ ಸಾಹಿತ್ಯ ಸಮ್ಮೇಳನ ನಡೆದ ಬಳಿಕ ಜಿಲ್ಲಾ ಮಟ್ಟದ ಸಾಹಿತ್ಯ ಸಮ್ಮೇಳನಕ್ಕೆ ಸರ್ವ ಜನಾಂಗದ ಶಾಂತಿಯ ತೋಟ ಎಂದೇ ಹೆಸರಾದ ಸುಂಟಿಕೊಪ್ಪ ಸಜ್ಜುಗೊಳ್ಳುತ್ತಿದೆ. ಹಲವು ವೈಶಿಷ್ಟತೆಯನ್ನು ಹೊಂದಿರುವ ಸುಂಟಿಕೊಪ್ಪ ತನ್ನದೆ ಆದ ಇತಿಹಾಸ ಹೊಂದಿದೆ. ರಾಷ್ಟ್ರಕವಿ ಕುವೆಂಪು, ದ.ರಾ. ಬೇಂದ್ರೆ, ಶಿವರಾಮ ಕಾರಂತ, ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ಸೇರಿದಂತೆ ಸಾಕಷ್ಟು ಕವಿಗಳ ವೃತ್ತದ ಮೂಲಕವೇ ಗುರುತಿಸಿಕೊಂಡಿದೆ.
ಇದಕ್ಕೆ ಪೂರಕವಾಗಿ ಜಿಲ್ಲಾ ಸಾಹಿತ್ಯ ಸಮ್ಮೇಳನದ ತಾತ್ಕಾಲಿಕ ಕಚೇರಿಯನ್ನು ಸುಂಟಿಕೊಪ್ಪ ಗ್ರಾ.ಪಂ.ನ ಹಳೆಯ ಕಟ್ಟಡದಲ್ಲಿ ತೆರೆಯಲಾಗಿದೆ. ಸಮ್ಮೇಳದ ಆಶೋತ್ತರಗಳನ್ನು ಪ್ರತಿಬಿಂಬಿಸುವ ಲಾಂಛನವನ್ನು ಕನ್ನಡ ಸಾಹಿತ್ಯ ಸಂಸ್ಥಾಪನಾ ದಿನದಂದು ಅನಾವರಣಗೊಳಿಸಲಾಗಿದೆ. ಸಮ್ಮೇಳನದ ನೆನಪುಗಳನ್ನು ಚಿರಸ್ಥಾಯಿ ಆಗಿಸಲು ವಿಶೇಷ ಸಂದರ್ಶನಗಳು, ಲೇಖನಗಳು ಮತ್ತು ಚಿತ್ರ ಸಂಪುಟದೊಂದಿಗೆ ಸ್ಮರಣ ಸಂಚಿಕೆ ಹೊರತರಲಾಗುವುದು. ಈಗಾಗಲೇ ಜಿಲ್ಲಾ ಕಸಾಪ, ಹೋಬಳಿ ಕಸಾಪ ಸಾಕಷ್ಟು ಪೂರ್ವಬಾವಿ ಸಭೆಗಳನ್ನು ನಡೆಸಿದ್ದು, ಮಡಿಕೇರಿ ವಿಧಾಸಭಾ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ ಅಧ್ಯಕ್ಷತೆಯಲ್ಲಿ ಸ್ವಾಗತ ಸಮಿತಿ ರಚಿಸಲಾಗಿದ್ದು, ಕಾರ್ಯಾಧ್ಯಕ್ಷರಾಗಿ ಜಿಲ್ಲಾ ಕಸಾಪ ಅಧ್ಯಕ್ಷ ಎಂ.ಪಿ. ಕೇಶವ ಕಾಮತ್ ಇದ್ದಾರೆ. ಸ್ವಾಗತ ಸಮಿತಿ ಉಪಾಧ್ಯಕ್ಷರಾಗಿ ಮತ್ತು ಹಣಕಾಸು ಸಮಿತಿ ಅಧ್ಯಕ್ಷರಾಗಿ ಎ. ಲೋಕೇಶ್ ಕುಮಾರ್ ಕಾರ್ಯನಿರ್ವಹಿಸುತ್ತಿದ್ದಾರೆ. ಸ್ವಾಗತ ಸಮಿತಿ ಗೌರವಧ್ಯಕ್ಷರಾಗಿ ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್. ಬೋಸರಾಜ್, ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಎ.ಎಸ್. ಪೊನ್ನಣ್ಣ ಇದ್ದಾರೆ.
ವಿವಿಧ ಉಪಸಮಿತಿಗಳನ್ನು ರಚಿಸಲಾಗಿದೆ. ಹಣಕಾಸು ಸಮಿತಿಯಲ್ಲಿ ಅರ್ಥಿಕ ಸಂಪೂನ್ಮೂಲ ಕ್ರೋಢೀಕರಣ, ಮೆರವಣಿಗೆ, ಸ್ಮರಣ ಸಂಚಿಕೆ, ಆಹಾರ ಮತ್ತು ಅಲಂಕಾರ, ಸಾಂಸ್ಕೃತಿಕ ಹಾಗೂ ದ್ವಾರ ಸಮಿತಿಗಳನ್ನು ರಚಿಸಲಾಗಿದೆ.17 ಮಹಾ ದ್ವಾರ ನಿರ್ಮಾಣ: ಸುಂಟಿಕೊಪ್ಪ ವ್ಯಾಪ್ತಿಯ ಪ್ರತಿಷ್ಠಿತ ಕುಟುಂಬಗಳು ಹಾಗೂ ಗಣ್ಯರ ಹೆಸರಿನಲ್ಲಿ 17 ಮಹಾ ದ್ವಾರಗಳನ್ನು ನಿರ್ಮಿಸಲಾಗುತ್ತದೆ. ಸಮ್ಮೇಳನ ನಡೆಯುವ ಸಭಾಂಗಣ ಮತ್ತು ಮುಖ್ಯ ವೇದಿಕೆಗೆ ಕನ್ನಡ ನಾಡು ನುಡಿಗೆ ಗಣನೀಯ ಸೇವೆ ಮಾಡಿದವರ ಹೆಸರನ್ನು ಇಡಲಾಗುವುದು ಎಂದು ಜಿಲ್ಲಾಧ್ಯಕ್ಷ ಎಂ.ಪಿ. ಕೇಶವ ಕಾಮತ್ ಮಾಹಿತಿ ನೀಡಿದರು.ಸಮ್ಮೇಳನದಲ್ಲಿ 17 ಮಂದಿ ಜಿಲ್ಲೆಯ ಸಾಧಕರನ್ನು ವಿವಿಧ ಕ್ಷೇತ್ರಗಳಲ್ಲಿ ಅವರು ನೀಡಿದ ಕೊಡುಗೆಯನ್ನು ಪರಿಗಣಿಸಿ ಸನ್ಮಾನಿಸಲಾಗುವುದು. ಪುಟ್ಬಾಲ್ ಮಾತ್ರವಲ್ಲದೆ ಹಾಕಿ, ಬಾಸ್ಕೆಟ್ಬಾಲ್, ಹ್ಯಾಂಡ್ಬಾಲ್, ಸೆಸ್ಟೋಬಾಲ್ ಕ್ರೀಡೆಗಳಲ್ಲಿನ ಸಾಧಕರನ್ನು ಸನ್ಮಾನಿಸಲಾಗುವುದು ಎಂದು ಸುಂಟಿಕೊಪ್ಪ ಹೋಬಳಿ ಕಸಾಪ ಅಧ್ಯಕ್ಷ ಸಮ್ಮೇಳನದ ಮಹಾ ಪ್ರಧಾನ ಕಾರ್ಯದರ್ಶಿ ಪಿ.ಎಫ್. ಸಬಾಸ್ಟಿನ್ ತಿಳಿಸಿದ್ದಾರೆ.