ಎಫ್‌ಐಡಿ ಇಲ್ಲದೇ ರೈತರಿಗೆ ಗೊಬ್ಬರ, ಬಿತ್ತನೆ ಬೀಜ ಪೂರೈಸಲು ರೈತರ ಆಗ್ರಹ

KannadaprabhaNewsNetwork |  
Published : May 14, 2026, 01:00 AM IST
ಹಾವೇರಿ ತಹಸೀಲ್ದಾರ್‌ ಕಚೇರಿ ಎದುರು ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರೈತ ಮುಖಂಡರು ಪ್ರತಿಭಟನೆ ನಡೆಸಿ, ತಹಸೀಲ್ದಾರ್‌ಗೆ ಮನವಿ ಸಲ್ಲಿಸಿದರು. | Kannada Prabha

ಸಾರಾಂಶ

ಎಫ್.ಐ.ಡಿ. ಇಲ್ಲದೇ ರೈತರಿಗೆ ಯೂರಿಯಾ ಗೊಬ್ಬರ ಪೂರೈಕೆ, ಬಿತ್ತನೆ ಬೀಜ ವಿತರಣೆ ಹಾಗೂ ಹಗಲು ಹೊತ್ತಿನಲ್ಲಿ ರೈತರಿಗೆ 7 ತಾಸು ವಿದ್ಯುತ್ ಪೂರೈಕೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರೈತ ಮುಖಂಡರು ಬುಧವಾರ ಹಾವೇರಿ ನಗರದ ತಹಸೀಲ್ದಾರ್‌ ಕಚೇರಿಯಲ್ಲಿ ಪ್ರತಿಭಟನೆ ನಡೆಸಿದರು.

ಹಾವೇರಿ: ಎಫ್.ಐ.ಡಿ. ಇಲ್ಲದೇ ರೈತರಿಗೆ ಯೂರಿಯಾ ಗೊಬ್ಬರ ಪೂರೈಕೆ, ಬಿತ್ತನೆ ಬೀಜ ವಿತರಣೆ ಹಾಗೂ ಹಗಲು ಹೊತ್ತಿನಲ್ಲಿ ರೈತರಿಗೆ 7 ತಾಸು ವಿದ್ಯುತ್ ಪೂರೈಕೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಾಮೂಹಿಕ ನಾಯಕತ್ವದ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕು ಘಟಕದ ರೈತ ಮುಖಂಡರು ಬುಧವಾರ ನಗರದ ತಹಸೀಲ್ದಾರ್‌ ಕಚೇರಿಯಲ್ಲಿ ಪ್ರತಿಭಟನೆ ನಡೆಸಿದರು.

ಈ ವೇಳೆ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಕಾರ್ಯಾಧ್ಯಕ್ಷ ಶಿವಬಸವಪ್ಪ ಗೋವಿ ಮಾತನಾಡಿ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಪ್ರತಿ ನಿತ್ಯ ಹೊಸ ಹೊಸ ಕಾನೂನು ಜಾರಿಗೆ ತರುತ್ತಿದ್ದು, ಈ ಕಾನೂನುಗಳಿಂದ ರೈತರು ಹಾಗೂ ರೈತ ಕಾರ್ಮಿಕರಿಗೆ ಬಹಳ ತೊಂದರೆಯಾಗುತ್ತಿದೆ. ಯೂರಿಯಾ ಗೊಬ್ಬರ, ಬಿತ್ತನೆ ಬೀಜ ವಿತರಣೆಗೆ ಎಫ್.ಐ.ಡಿ., ಆಧಾರ್‌ ಕಾರ್ಡ್‌, ಬ್ಯಾಂಕ್ ಪಾಸ್‌ಬುಕ್‌, ಫೋಟೋ, ಉತಾರ ಹೀಗೆ ಅನೇಕ ದಾಖಲೆಗಳನ್ನು ಪೂರೈಸಲು ಹೇಳಿದ್ದಾರೆ. ಇದರಿಂದ ರೈತರಿಗೆ ಬಹಳ ಕಷ್ಟವಾಗುತ್ತದೆ. ಈ ಕೂಡಲೇ ಇಂತಹ ಬಿಗಿಯಾದ ಕಾನೂನುಗಳನ್ನು ಹಿಂಪಡೆದು, ಈ ಹಿಂದೆ ಇದ್ದ ಮಾದರಿಯಲ್ಲಿಯೇ ಗೊಬ್ಬರ, ಬೀಜ ಪೂರೈಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಡಿಸಿ ಕಚೇರಿ ಎದುರು ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.

ಕಬ್ಬು ಬೆಳೆಗಾರರ ಸಂಘದ ಜಿಲ್ಲಾಧ್ಯಕ್ಷ ಭುವನೇಶ್ವರ ಶಿಡ್ಲಾಪುರ ಮಾತನಾಡಿ, ಎಫ್.ಐ.ಡಿ. ಇಲ್ಲದೇ ರೈತರಿಗೆ ಯೂರಿಯಾ ಗೊಬ್ಬರ, ಬೀಜ ವಿತರಣೆ ಮಾಡಬೇಕು. ಹೆಸ್ಕಾಂನಿಂದ ಪ್ರತಿದಿನ ಹಗಲುವೇಳೆ 7 ತಾಸು ವಿದ್ಯುತ್ ಪೂರೈಸಬೇಕು. ತೋಟಗಾರಿಕೆ ಇಲಾಖೆಯಿಂದ ಎಸ್‌ಸಿ-ಎಸ್‌ಟಿ ಅನುದಾನದಡಿ ಸಹಾಯಧನ ನೀಡುತ್ತಿಲ್ಲ, ತಕ್ಷಣ ಗ್ರಾಂಟ್ ಬಿಡುಗಡೆ ಮಾಡಬೇಕು. ಚಿರತೆ, ಚಿಗರೆ ಹಾವಳಿಯಿಂದ ರೈತರ ಪ್ರಾಣಹಾನಿ, ರೈತರ ಬೆಳೆಯನ್ನು ರಕ್ಷಣೆ ಮಾಡಲು ಅರಣ್ಯ ಇಲಾಖೆಯವರು ರೈತರ ಪರವಾಗಿ ಜಾಗ್ರತರಾಗಿರಬೇಕು ಎಂದು ಒತ್ತಾಯಿಸಿದರು.

ಸಂಘದ ತಾಲೂಕು ಪ್ರಧಾನ ಕಾರ್ಯದರ್ಶಿ ಶಿವಯೋಗಿ ಹೊಸಗೌಡ್ರ ಮಾತನಾಡಿ, ಹಾವೇರಿ ಶಹರದಲ್ಲಿ ಒಳಚರಂಡಿ, ರಸ್ತೆ, ಗಟಾರ ಹದಿಗೆಟ್ಟಿರುತ್ತದೆ. ನಗರಸಭೆಯವರು ಆದಷ್ಟು ಬೇಗನೇ ಕಾಮಗಾರಿ ಪ್ರಾರಂಭಿಸಬೇಕು. ಬ್ಯಾಂಕಿನಿಂದ ದಬ್ಬಾಳಿಕೆ ಮಾಡಿ ಸಾಲ ವಸೂಲಿ ಮಾಡುತ್ತಿದ್ದು, ಇದನ್ನು ತಕ್ಷಣವೇ ನಿಲ್ಲಿಸಬೇಕು. ನಮ್ಮ ಹೊಲ ನಮ್ಮ ದಾರಿ, ಸರಿಯಾಗಿ ಗ್ರಾಮ ಪಂಚಾಯಿತಿಯಿಂದ ದಾರಿ ಮಾಡಿಸಿಕೊಡಬೇಕು. ಹಾವೇರಿ ತಾಲೂಕನಲ್ಲಿ ಬೆಳೆವಿಮೆ ಹಾಗೂ ಬೆಳೆ ಹಾನಿ ಬಹಳಷ್ಟು ರೈತರಿಗೆ ಅನ್ಯಾಯವಾಗಿರುತ್ತದೆ, ತಕ್ಷಣ ಸರಿಪಡಿಸಬೇಕೆಂದು ಒತ್ತಾಯಿಸಿದರು.

ರೈತ ಮುಖಂಡರಾದ ರಾಜು ತರ್ಲಗಟ್ಟ, ಸುರೇಶ ಚಲವಾದಿ, ಚನ್ನಪ್ಪ ಮರಡೂರ, ಫಕ್ಕೀರಗೌಡ ಗಾಜಿಗೌಡ್ರ, ಸಿದ್ದನಗೌಡ ಗಡೆಪ್ಪಗೌಡ್ರ, ನಾಗರಾಜ ವಿಭೂತಿ, ಪರಮೇಶ ನರಗುಂದ, ಶಿವಯೋಗಿ ಬೆನ್ನೂರ, ಬಾಬುಸಾಬ ಲಿಂಗದಹಳ್ಳಿ, ಜಾಫರ್ ಸಾಬ್, ರೆಹಮಾನ್‌ಸಾಬ್ ತಟ್ಟಿಮನಿ, ಇಸ್ಪಾಕ್‌ಸಾಬ್, ಗುಡ್ಡಪ್ಪ ಸತ್ಯಪ್ಪನವರ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನೀಟ್ ಪರೀಕ್ಷೆ ರದ್ದುಪಡಿಸಲು ಆಗ್ರಹ, ಎಸ್‌ಎಫ್‌ಐ ಪ್ರತಿಭಟನೆ
ಬಿಸಿಲ ತಾಪದಿಂದ ಬಳಲುತ್ತಿದ್ದ ಪೊಲೀಸ್ ಶ್ವಾನಗಳಿಗೆ ಏರ್‌ ಕೂಲರ್‌!