ಬಲಿಷ್ಠ ಭಾರತ ನಿರ್ಮಾಣಕ್ಕೆ ಬಿಜೆಪಿ ಬೆಂಬಲಿಸಿ: ದೊಡ್ಡನಗೌಡ ಪಾಟೀಲ

KannadaprabhaNewsNetwork | Published : Mar 28, 2024 12:45 AM

ಸಾರಾಂಶ

ಬಲಿಷ್ಠ ಭಾರತ ನಿರ್ಮಾಣಕ್ಕೆ ಎಲ್ಲರೂ ಮತ್ತೊಮ್ಮೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಗೆಲ್ಲಿಸಲು ಸರ್ವಸನ್ನದ್ಧರಾಗಬೇಕು.

ಬಿಜೆಪಿ ಬೂತ್ ವಿಜಯ ಅಭಿಯಾನಕ್ಕೆ ಚಾಲನೆ

ಕನ್ನಡಪ್ರಭ ವಾರ್ತೆ ಕಾರಟಗಿ

ಬಲಿಷ್ಠ ಭಾರತ ನಿರ್ಮಾಣಕ್ಕೆ ಎಲ್ಲರೂ ಮತ್ತೊಮ್ಮೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಗೆಲ್ಲಿಸಲು ಸರ್ವಸನ್ನದ್ಧರಾಗುವಂತೆ ಬಿಜೆಪಿ ಕಾರ್ಯಕರ್ತರಿಗೆ ವಿಧಾನಸಭೆ ವಿರೋಧಪಕ್ಷದ ಮುಖ್ಯ ಸಚೇತಕ ದೊಡ್ಡನಗೌಡ ಪಾಟೀಲ ಕರೆ ನೀಡಿದರು.

ಇಲ್ಲಿನ ಕೆರೆಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಕೊಪ್ಪಳ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ಬಿಜೆಪಿ ಬೂತ್ ವಿಜಯ ಅಭಿಯಾನಕ್ಕೆ ಬುಧವಾರ ಚಾಲನೆ ನೀಡಿ ಮಾತನಾಡಿದರು.

ಹಗರಣ ಮುಕ್ತ, ಭ್ರಷ್ಟಾಚಾರ ಮುಕ್ತ ಸರ್ಕಾರ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಮಾತ್ರ ಸಾಧ್ಯ.

ಲೋಕಸಭೆ ಚುನಾವಣೆ ಬಿಸಿಲಿನಂತೆ ಕಾವೇರಿದೆ. ಅಧಿಕಾರದ ಅಮಲಿನಲ್ಲಿ ಸಚಿವ ಶಿವರಾಜ್ ತಂಗಡಗಿ ಹೇಳಿದ್ದು ಸರಿಯಲ್ಲ. ಈ ಹಿಂದೆ ಸಣ್ಣ ನೀರಾವರಿ ಇಲಾಖೆಯಿಂದ ನಿಮ್ಮ ಮನೆ ತುಂಬಿದೆ, ಎಚ್ಚರಿಕೆ ಇರಲಿ. ನಿಮ್ಮ ಕೈ ಇಳಿಯುವವರೆಗೂ ನಮ್ಮ ಕಾರ್ಯಕರ್ತರು ಮೋದಿ ಮೋದಿ ಎನ್ನುತ್ತಾರೆ. ಗ್ಯಾರೆಂಟಿ ಮೇಲೆ ಅಧಿಕಾರಕ್ಕೆ ಬಂದಿದ್ದಿರಿ, ಬೇರೆ ಏನೂ ಹೇಳಲು ನಿಮ್ಮ ಬಳಿ ಇಲ್ಲ, ಅದಕ್ಕಾಗಿ ಮೋದಿ ಮೋದಿ ಎನ್ನುತ್ತಿರಿ ಎಂದು ತರಾಟೆ ತೆಗೆದುಕೊಂಡರು.

ನಿಷ್ಠಾವಂತ ಕಾರ್ಯಕರ್ತರು, ಮುಖಂಡರು ಪಕ್ಷವು ನಮಗೆ ನೀಡಿದ ಜವಾಬ್ದಾರಿಯನ್ನು ನಿಸ್ವಾರ್ಥದಿಂದ ನಿರ್ವಹಿಸಿ ಕೊಪ್ಪಳ ಲೋಕಸಭಾ ಅಭ್ಯರ್ಥಿಯಾಗಿರುವ ಡಾ. ಬಸವರಾಜ್ ಕ್ಯಾವಟರ್ ಅವರನ್ನು ಲಕ್ಷಕ್ಕೂ ಹೆಚ್ಚು ಮತಗಳಿಂದ ಗೆಲ್ಲಿಸುವ ಮೂಲಕ ಮತ್ತೊಮ್ಮೆ ನರೇಂದ್ರ ಮೋದಿಯನ್ನು ಪ್ರಧಾನಿಯಾಗಿ ಮಾಡಲು ನಾವೆಲ್ಲರೂ ಒಗ್ಗಟ್ಟಾಗಿ ಶ್ರಮಿಸೋಣ ಎಂದು ಹೇಳಿದರು.

ಮಾಜಿ ಸಚಿವ ಹಾಲಪ್ಪ ಆಚಾರ ಮಾತನಾಡಿ, ಇಂದು ಇಡೀ ಜಗತ್ತೇ ಭಾರತದ ಆರ್ಥಿಕಾಭಿವೃದ್ಧಿ ಕಂಡು ಬೆರಗಾಗಿದೆ. ಈಗ ನಮ್ಮ ಸರ್ಕಾರ ಬಂದ ಮೇಲೆ ಕಾಶ್ಮೀರ ಭಾರತದ ಅವಿಭಾಜ್ಯ ಅಂಗವಾಗಿದೆ ಎಂದರು.

ಅಭ್ಯರ್ಥಿ ಡಾ.ಬಸವರಾಜ್ ಕ್ಯಾವಟರ್ ಮಾತನಾಡಿ, ಸದೃಢ ಭಾರತ ಮತ್ತು ಕೊಪ್ಪಳ ಲೋಕಸಭೆ ಕ್ಷೇತ್ರದ ಸಮಗ್ರ ಅಭಿವೃದ್ಧಿ, ಮೂಲ ಸೌಕರ್ಯ ಅನುಷ್ಠಾನಕ್ಕಾಗಿ ನನ್ನನ್ನು ಬೆಂಬಲಿಸಿ ಎಂದು ಕೋರಿದರು.

ಮಾಜಿ ಶಾಸಕ ಬಸವರಾಜ ದಢೇಸ್ಗೂರು, ವಿಧಾನಪರಿಷತ್ ಸದಸ್ಯೆ ಹೇಮಲತಾ ನಾಯಕ್, ಜಿಲ್ಲಾಧ್ಯಕ್ಷ ನವೀನ್ ಗುಳಗಣ್ಣನವರ್, ಎಚ್. ಗಿರಿಗೌಡ ಮತ್ತು ನಾಗರಾಜ್ ಬಿಲ್ಗಾರ್ ಮಾತನಾಡಿದರು.

ಸತ್ಯನಾರಾಯಣ ದೇಶಪಾಂಡೆ ಪ್ರಾಸ್ತಾವಿಕ ಮಾತನಾಡಿದರು. ಜಿಪಂ ಮಾಜಿ ಅಧ್ಯಕ್ಷ ಅಮರೇಶ ಕುಳಗಿ, ಶ್ರೀಧರ್ ಕೆಸರಟ್ಟಿ, ಜಡೆಯಪ್ಪ ಮುಕ್ಕುಂದಿ, ಮಂಜುನಾಥ ಮಸ್ಕಿ, ಗುರುಸಿದ್ದಪ್ಪ ಯರಕಲ್, ರಮೇಶ್ ನಾಯಕ್, ಸಣ್ಣ ಕನಕಪ್ಪ, ಶಿವಕುಮಾರ್ ಅರಿಕೇರಿ, ಜಿಲ್ಲಾ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಮೌನೇಶ್ ದಢೇಸ್ಗೂರು ಸೇರಿದಂತೆ ಇತರರಿದ್ದರು.

Share this article