28 ಕ್ಷೇತ್ರಗಳಲ್ಲಿ ಗೆಲ್ಲುವುದು ಖಚಿತ: ವಿಜಯೇಂದ್ರ

KannadaprabhaNewsNetwork | Published : Feb 3, 2024 1:45 AM

ಸಾರಾಂಶ

ಮುಂಬರುವ ಸಂಸತ್ ಚುನಾವಣೆಯಲ್ಲಿ ಬಿಜೆಪಿ 28 ಕ್ಷೇತ್ರವನ್ನು ಗೆಲ್ಲುವುದು ಖಚಿತ. ಇದರಲ್ಲಿ ಯಾವುದೇ ಅನುಮಾನ ಬೇಡ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ತಿಳಿಸಿದರು.

ಕನ್ನಡಪ್ರಭ ವಾರ್ತೆ ತುಮಕೂರು

ಮುಂಬರುವ ಸಂಸತ್ ಚುನಾವಣೆಯಲ್ಲಿ ಬಿಜೆಪಿ 28 ಕ್ಷೇತ್ರವನ್ನು ಗೆಲ್ಲುವುದು ಖಚಿತ. ಇದರಲ್ಲಿ ಯಾವುದೇ ಅನುಮಾನ ಬೇಡ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ತಿಳಿಸಿದರು.

ನಗರದ ಶ್ರೀ ಸಿದ್ದಿವಿನಾಯಕ ಸಮುದಾಯ ಭವನದಲ್ಲಿ ಜಿಲ್ಲಾ ಬಿಜೆಪಿ ವತಿಯಿಂದ ಆಯೋಜಿಸಲಾಗಿದ್ದ ರಾಜ್ಯ ಮಟ್ಟದ ಶಕ್ತಿ ವಂದನಾ ಅಭಿಯಾನದ ಸಮಾರೋಪ ಸಮಾರಂಭದಲ್ಲಿ ಶ್ರೀರಾಮ ಭಾವಚಿತ್ರಕ್ಕೆ ಹಾಗೂ ಬಿಜೆಪಿಯ ಹಿರಿಯ ಮುಖಂಡರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾತನಾಡಿದ ಅವರು,ಮುಂಬರುವ ಲೋಕಸಭಾ ಚುನಾವಣೆ ಗೆಲುವಿಗೆ ಎಲ್ಲರೂ ಒಟ್ಟಾಗಿ ಶ್ರಮಿಸಬೇಕು ಎಂದರು.

ಆರು ಬಜೆಟ್ ಮಂಡನೆ ಮಾಡಿರುವ ಹೆಮ್ಮೆಯ ದಿಟ್ಟ ಮಹಿಳೆ ನಿರ್ಮಲಾ ಸೀತರಾಮ್ ಅವರು ನರೇಂದ್ರ ಮೋದಿ ಅವರಿಗೆ ಶಕ್ತಿ ತುಂಬುತ್ತಿದ್ದಾರೆ ಎಂದರು. ಈ ದೇಶದಲ್ಲಿ ಸ್ತ್ರೀ ಸಮಾನತೆ ಬಗ್ಗೆ 12ನೇ ಶತಮಾನದಲ್ಲಿ ಅಕ್ಕಮಹಾದೇವಿ ಮೊಟ್ಟ ಮೊದಲ ಬಾರಿಗೆ ಧ್ವನಿ ಎತ್ತಿದ್ದರು. ಆದರೆ, ಈ ದೇಶದಲ್ಲಿ ನಿರಂತರವಾಗಿ ದೇಶದ ಚುಕ್ಕಾಣಿ ಹಿಡಿದಿದ್ದ ಇಂದಿರಾಗಾಂಧಿ ಮಹಿಳೆಯರ ಅಭಿವೃದ್ಧಿಗೆ ಯಾವುದೇ ಕೊಡುಗೆ ನೀಡಿಲ್ಲ. ಸುದೀರ್ಘವಾಗಿ ಆಡಳಿತ ನಡೆಸಿದ್ದರೂ ಸಹ ಸ್ತ್ರೀ ಶೋಷಣೆ ತಡೆಗಟ್ಟಲು, ಸ್ತ್ರೀ ಅಭಿವೃದ್ಧಿ ಮಾಡಲಿಕ್ಕೆ ಸಾಧ್ಯವಾಗಲಿಲ್ಲ. ಆದರೆ ಎಲ್ಲಾ ಸ್ತ್ರೀಯರಿಗೂ ಸಮಾನತೆ ಸಿಗಬೇಕು ಎಂಬ ಕೈಂಕರ್ಯ ತೊಟ್ಟಿರುವ ನರೇಂದ್ರ ಮೋದಿ ಅವರು ದೇಶದ ಅಭಿವೃದ್ಧಿಗೆ, ಸ್ತ್ರೀಯರ ಸಮಾನತೆಗೆ ದುಡಿಯುತ್ತಿದ್ದಾರೆ ಎಂದರು.

ನರೇಂದ್ರ ಮೋದಿ ಅವರು 2047ನೇ ಇಸವಿಗೆ ವಿಕಸಿತ ಭಾರತವಾಗಿ ದೇಶ ಹೊರ ಹೊಮ್ಮುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದಾರೆ. ಇದಕ್ಕೆ ಮಹಿಳೆಯರ ಸಹಕಾರ ಸಿಗಬೇಕು. ಮಹಿಳೆಯರಿಗೆ ಆಯಾ ಕ್ಷೇತ್ರದಲ್ಲಿ ಅಭಿವೃದ್ಧಿ ಕಾಣಬೇಕು ಎಂಬ ನಿಟ್ಟಿನಲ್ಲಿ ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದರು.

ರಾಷ್ಟ್ರದ ಅತ್ಯುತ್ತಮ ಸ್ಥಾನಮಾನವಾಗ ರಾಷ್ಟ್ರಪತಿ ಹುದ್ದೆಗೆ ದಲಿತ ಮಹಿಳೆ ದ್ರೌಪತಿ ಮುರ್ಮು ಅವರನ್ನು ಬಿಜೆಪಿ ಸರ್ಕಾರ ಕೂರಿಸಿದೆ. ಮುಂದಿನ ದಿನಗಳಲ್ಲಿ ರಾಜಕೀಯದಲ್ಲಿ ಮಹಿಳೆಯರಿಗೆ ಶೇ. 33 ರಷ್ಟು ಲೋಕಸಭೆ, ವಿಧಾನಸಭೆಯಲ್ಲಿ ಮೀಸಲಾತಿ ಕಲ್ಪಿಸಲು ಚಿಂತನೆ ನಡೆದಿದೆ. ಈ ಸಂಬಂಧ ವಿಶೇಷ ಅಧಿವೇಶನ ಕರೆದು ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂದರು.

2047ರ ವೇಳೆಗೆ ಭಾರತವನ್ನು ಬಲಿಷ್ಟ ರಾಷ್ಟ್ರವಾಗಿ ನಿರ್ಮಾಣ ಮಾಡಲು ಪ್ರಧಾನ ಮಂತ್ರಿ ನರೇಂದ್ರ ಮೋದಿ ಶ್ರಮಿಸುತ್ತಿದ್ದಾರೆ ಎಂದ ಅವರು, ದೇಶದಲ್ಲಿ ನಾಲ್ಕು ಜಾತಿಗಳಿವೆ. ಒಂದು ರೈತ, ಬಡವ, ಮಹಿಳೆ ಹಾಗೂ ಯುವ ಜನಾಂಗ. ಇವರೆಲ್ಲರ ಸಹಕಾರದಿಂದ ಈ ದೇಶ ಅಭಿವೃದ್ಧಿ ಕಾಣಲು ಸಾಧ್ಯ ಎಂದರು.

ಬಿಜೆಪಿ ಅಂದರೆ ಅಲ್ಪಸಂಖ್ಯಾತ ವಿರೋಧಿ ಎಂಬುದಾಗಿ ವಿರೋಧ ಪಕ್ಷದವರು ಬಿಂಬಿಸುತ್ತಿದ್ದಾರೆ. ಆದರೆ, ತ್ರಿವಳಿ ತಲಾಕ್ ಒಡೆದು ಹಾಕುವ ಮೂಲಕ ಅಲ್ಪಸಂಖ್ಯಾತರಿಗೂ ನ್ಯಾಯ ಒದಗಿಸುವ ಕೆಲಸವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಮಾಡಿದ್ದಾರೆ ಎಂದರು.

25 ಲಕ್ಷಕ್ಕೂ ಹೆಚ್ಚು ಮಹಿಳೆಯರು ಕೇಂದ್ರ ಸರ್ಕಾರದ ಯೋಜನೆಗಳ ಲಾಭ ಪಡೆಯುತ್ತಿದ್ದಾರೆ. ಕೇಂದ್ರ ಸರ್ಕಾರದ ಯೋಜನೆಗಳ ಮೂಲಕ ಸ್ವಾವಲಂಬನೆ ಬದುಕು ಕಟ್ಟಿಕೊಡುವ ಬಗ್ಗೆ ತಿಳಿಸಿಕೊಡುವ ಕರ್ತವ್ಯ ನಮ್ಮ ಮೇಲಿದೆ ಎಂದರು.

ರಾಜಕಾರಣಿ ರಾಜಕೀಯದ ಬಗ್ಗೆ ಯೋಚನೆ ಮಾಡಿದರೆ, ರಾಜಕೀಯ ತಜ್ಞ ಮುಂದಿನ ಪೀಳಿಗೆ ಬಗ್ಗೆ ಚಿಂತನೆ ಮಾಡುತ್ತಾನೆ. ಹಾಗಾಗಿ ಪ್ರಧಾನಿ ಮೋದಿ ಅವರು ಭಾರತವನ್ನು ಬಲಿಷ್ಠ ರಾಷ್ಟ್ರವನ್ನಾಗಿ ರೂಪಿಸಲು ಮುಂದಾಗಿದ್ದಾರೆ. ದೇಶದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ ಎಂದರು.

ಲೋಕಸಭಾ ಚುನಾವಣಾ ಯಾವಾಗ ಬೇಕಾದರೂ ಬರಬಹುದು. ಹಾಗಾಗಿ ಪ್ರಧಾನಿ ಮೋದಿ ಅವರ ಯೋಜನೆಗಳನ್ನು ಮನೆ ಮನೆಗೆ ತಲುಪಿಸುವ ಕೆಲಸವಾಗಬೇಕು ಎಂದು ಅವರು ಕರೆ ನೀಡಿದರು.

ಫೆ. 22 ಅಥವಾ 23 ರಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಶಕ್ತಿವಂದನಾ ಸಂವಾದ ಮಾಡಲಿದ್ದಾರೆ. ಪ್ರತಿ ಮಂಡಲದಿಂದ 500 ಮಹಿಳೆಯರು ತಪ್ಪದೆ ಭಾಗಿಯಾಗಬೇಕು ಎಂದು ಹೇಳಿದರು.

ಬಿಜೆಪಿ ಸರ್ಕಾರ ಇದ್ದಾಗ ಪ್ರಧಾನ ಮಂತ್ರಿ ಕಿಸಾನ ಯೋಜನೆಯಡಿ ಕೇಂದ್ರದಿಂದ 6 ಸಾವಿರ ಕೊಡುತ್ತಿದ್ದರು. ಇದರ ಜೊತೆಗೆ ಯಡಿಯೂರಪ್ಪ ಅವರು 4000 ಕೊಡುತ್ತಿದ್ದರು. ಅದನ್ನು ಕಾಂಗ್ರೆಸ್ ಸರ್ಕಾರ ಸ್ಥಗಿತ ಮಾಡಿತು ಎಂದು ತಿಳಿಸಿದರು.

ಇಡೀ ದೇಶದಲ್ಲಿ ಅಬಕಾರಿ ಹೆಚ್ಚು ದರ ಇರುವುದು ಕರ್ನಾಟಕದಲ್ಲಿ ಮಾತ್ರ 50 ರು. ಇದ್ದ ಬಾಟಲ್ ಬೆಲೆ 200 ರು. ಆಗಿದೆ. ಮನೆಯೊಡತಿಗೆ 2 ಸಾವಿರ ರು. ಬರುತ್ತದೆ. ಆದರೆ ಅವರ ಮನೆ ಯಜಮಾನರು ತಿಂಗಳಿಗೆ 4 ಸಾವಿರ ಖರ್ಚು ಮಾಡುತ್ತಿದ್ದಾರೆ. ಇದಕ್ಕೆ ಮದ್ಯದ ದರ ಹೆಚ್ಚಾಗಿರುವುದೇ ಕಾರಣ ಎಂದರು.

ಮುಂದಿನ ಲೋಕಸಭಾ ಚುನಾವಣೆಯಲ್ಲಿ 28 ಕ್ಷೇತ್ರ ಗೆದ್ದೇ ಗೆಲ್ಲುತ್ತೇವೆ, ಅನುಮಾನವೇ ಬೇಡ. ರಾಜ್ಯ ಸರ್ಕಾರ ಗ್ಯಾರಂಟಿ ಸ್ಕ್ಯಾಮ್ ಇದು. ರಾಜ್ಯ ಸರ್ಕಾರದ ಗ್ಯಾರಂಟಿ 2 ಲಕ್ಷ ಫಲಾನುಭವಿಗಳಿಗೂ ತಲುಪಿಲ್ಲ. ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಗಂಡಸಿ ಶಿವರಾಮ್ ಅವರು ಶೇ. 50 ಪರ್ಸೆಂಟ್ ಕಮಿಷನ್ ಆರೋಪ ಮಾಡಿದ್ದಾರೆ. ಅವರದ್ದೇ ಸರ್ಕಾರ ಮೇಲೆ ಆರೋಪ ಮಾಡಿದ್ದಾರೆ. ಬಿಜೆಪಿ ಮೇಲೆ ಮಾಡಿದ್ದ ಆರೋಪ ದಾಖಲೆ ರಹಿತವಾಗಿದೆ ಎಂದು ವಾಗ್ದಾಳಿ ನಡೆಸಿದರು.

ಕಾರ್ಯಕ್ರಮದಲ್ಲಿ ಶಾಸಕರಾದ ಶಶಿಕಲಾ ಜೊಲ್ಲೆ, ಜ್ಯೋತಿಗಣೇಶ್, ಬಿಜೆಪಿ ಜಿಲ್ಲಾಧ್ಯಕ್ಷ ರವಿಶಂಕರ್‌ ಹೆಬ್ಬಾಕ, ವಿಧಾನ ಪರಿಷತ್ ಸದಸ್ಯರಾದ ಚಿದಾನಂದ ಗೌಡ, ಮಧುಗಿರಿ ಅಧ್ಯಕ್ಷ ಹನುಮಂತೇಗೌಡ, ಡಿ. ಕೃಷ್ಣಕುಮಾರ್‌, ಎಚ್.ಡಿ. ರಾಜೇಶ್‌ಗೌಡ, ರಾಜ್ಯ ಮಹಿಳಾ ಮೋರ್ಚಾ ಅಧ್ಯಕ್ಷೆ ಮಂಜುಳ, ರಾಜ್ಯ ಸಹ ಸಂಚಾಲಕರಾದ ಗೀತಾ, ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ಶಿಲ್ಪಾ, ರಾಜ್ಯ ಉಪಾಧ್ಯಕ್ಷರಾದ ಶರಣಮ್ಮ, ಅಂಬಿಕಾ ಹುಲಿನಾಯ್ಕರ್‌, ನವೀನ್, ವಿನಯ್ ಬಿದರೆ ಮತ್ತಿತರರು ಭಾಗವಹಿಸಿದ್ದರು.BOX

ಗ್ಯಾರಂಟಿ ಯೋಜನೆ ಬರೀ ಸ್ಕ್ಯಾಮ್ ಅಷ್ಟೆ

200 ಯೂನಿಟ್ ಉಚಿತ ವಿದ್ಯುತ್ ಭ್ರಮೆ ಎಂದು ವಿಜಯೇಂದ್ರ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು. ರಾಜ್ಯದಲ್ಲಿ ಭೀಕರ ಬರ ಬಂದಿದೆ. ಬೆಳೆದ ಬೆಳೆಗೆ ಸರಿಯಾದ ನೀರು ಬೇಕಾಗುತ್ತದೆ. ಸರ್ಕಾರ ವಿದ್ಯುತ್ ಕೊಟ್ಟರೆ ಸಂಪೂರ್ಣವಾಗಿ ಬೆಳೆ ಕೈ ಸೇರಲಿದೆ. ಆದರೆ ವಿದ್ಯುತ್ ಕೊಡದ ಪರಿಣಾಮ ಬೆಳೆ ಕೈಸೇರಲಿಲ್ಲ. ಇದರಿಂದ ರಾಜ್ಯದಲ್ಲಿ 500 ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದಕ್ಕೆ ರಾಜ್ಯ ಸರ್ಕಾರವೇ ಕಾರಣ ಎಂದು ಹರಿಹಾಯ್ದರು. ಉಚಿತ ಬಸ್ ಪ್ರಯಾಣ ಯೋಜನೆ ಉತ್ತಮ ಕೆಲಸ. ಆದರೆ ಮತ್ತೊಂದು ಕಡೆ ಗ್ರಾಮೀಣ ಮಕ್ಕಳು ಶಾಲಾ ಕಾಲೇಜುಗಳಿಗೆ ಹೋಗಲಿಕ್ಕೆ ಆಗುತ್ತಿಲ್ಲ. ಕಾರಣ ಶೇ. ೫೦ ರಷ್ಟು ಬಸ್ ಕಡಿತ ಮಾಡಿದ್ದಾರೆ. ಇದು ಇವರ ಗ್ಯಾರಂಟಿ ಯೋಜನೆ. ಇನ್ನೂ ಗೃಹಲಕ್ಷ್ಮೀ ಯೋಜನೆ ಸಮಪರ್ಕವಾಗಿ ತಲುಪುತ್ತಿಲ್ಲ ಎಂದರು.

Share this article