ಶರಣರು ಸಮೃದ್ಧಿಗಿಂತಲೂ,ಸಂತೃಪ್ತಿಗೆ ವಿಶೇಷ ಮಹತ್ವ

KannadaprabhaNewsNetwork | Published : Jul 27, 2024 12:53 AM

ಸಾರಾಂಶ

ಪ್ರತಿಯೊಬ್ಬರೂ ಸತ್ಯಶುದ್ಧ ಕಾಯಕ ಮತ್ತು ದಾಸೋಹ ಮಾಡಬೇಕು. 12 ನೇ ಶತಮಾನ ವಚನ ಸಾಹಿತ್ಯದ ಆರಂಭ

ಗದಗ: ಬಸವಾದಿ ಶರಣರ ವಚನ ಸಾಹಿತ್ಯ ಬಹಳ ಮೌಲಿಕವಾಗಿರುವ ಸಾಹಿತ್ಯ. ಬಸವಾದಿ ಶಿವಶರಣರ ವಚನ ಮತ್ತು ಜೀವನಚರಿತ್ರೆ ಓದಿದಾಗ ಶರಣರು ಸಮೃದ್ಧಿಗಿಂತಲೂ, ಸಂತೃಪ್ತಿಗೆ ವಿಶೇಷವಾದ ಮಹತ್ವ ಕೊಟ್ಟಿದ್ದಾರೆ ಎಂದು ಡಾ. ತೋಂಟದ ಸಿದ್ಧರಾಮ ಸ್ವಾಮಿಗಳು ತಿಳಿಸಿದರು.

ಅವರು ನಗರದ ತೋಂಟದಾರ್ಯ ಮಠದಲ್ಲಿ ನಡೆದ ಲಿಂಗಾಯತ ಪ್ರಗತಿಶೀಲ ಸಂಘದ 2703ನೇ ಶಿವಾನುಭವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿ, ವಚನ ಸಾಹಿತ್ಯದಲ್ಲಿ ಮೌಲ್ಯ, ಆದರ್ಶ, ತತ್ವ ಬಹಳ ಅಮೂಲ್ಯವಾಗಿರುವುದರಿಂದ ವಚನ ಸಾಹಿತ್ಯಕ್ಕೆ ಅಂತಾರಾಷ್ಟ್ರೀಯ ಮಟ್ಟದ ಗೌರವ ಪ್ರಾಪ್ತವಾಗಿದೆ ಎಂದರೆ ಅತಿಶಯೋಕ್ತಿಯಲ್ಲ. ವಚನ ಸಾಹಿತ್ಯ ಬೇರೆ ಬೇರೆ ದೇಶಗಳಲ್ಲಿರುವ ಜನರು ಕೂಡಾ ತಮ್ಮ ತಮ್ಮ ಭಾಷೆಯಲ್ಲಿ ಓದುತ್ತಿದ್ದಾರೆ ಎಂದರು.

ಶರಣ ಮಾರ್ಗ ವಿಷಯ ಕುರಿತು ಅಥಣಿ ಶರಣತತ್ತ್ವ ಚಿಂತಕ ಡಾ.ಸಿದ್ಧಣ್ಣ ಉತ್ನಾಳ ಉಪನ್ಯಾಸ ನೀಡಿ, 12ನೇ ಶತಮಾನದ ಬಸವಾದಿ ಶಿವಶರಣರು ಕಾಯಕ ಮತ್ತು ದಾಸೋಹ ಸಿದ್ಧಾಂತ ಸಾರಿದ್ದಾರೆ. ಪ್ರತಿಯೊಬ್ಬರೂ ಸತ್ಯಶುದ್ಧ ಕಾಯಕ ಮತ್ತು ದಾಸೋಹ ಮಾಡಬೇಕು. 12 ನೇ ಶತಮಾನ ವಚನ ಸಾಹಿತ್ಯದ ಆರಂಭ. ನಂತರ ವಚನ ಸಾಹಿತ್ಯಕ್ಕೆ ಪ್ರಖರವಾದಂತಹ ಶಕ್ತಿ ತುಂಬಿದವರು. 15ನೇ ಶತಮಾನದ ತೋಂಟದ ಸಿದ್ಧಲಿಂಗ ಯತಿಗಳು. ಪ್ರಗತಿಪರ ನಿಲುವು, ಜನಪರ ನಿಲುವು, ಸಮಾಜಪರ ಒಲವು ವಚನ ಸಾಹಿತ್ಯದ ಮೂಲ ಕೊಡುಗೆಗಳು ಎಂದರು.

ಈ ವೇಳೆ ವನ್ಯಜೀವಿ ಸಂರಕ್ಷಣೆಗಾಗಿ ಮುಖ್ಯಮಂತ್ರಿಗಳ ಚಿನ್ನದ ಪದಕದಿಂದ ಪುರಸ್ಕೃತರಾದ ಮುಂಡರಗಿ ಕಪ್ಪತ್ತಗುಡ್ಡ ವಲಯದ ಅರಣ್ಯಾಧಿಕಾರಿ ವೀರೇಂದ್ರ ಸೋಮಶೇಖರ ಅವರನ್ನು ಪೂಜ್ಯರು ಸನ್ಮಾನಿಸಿದರು. ಎಸ್.ಎ. ಪಾಟೀಲ ಮಾತನಾಡಿದರು.

ಮೃತ್ಯಂಜಯ ಹಿರೇಮಠ ಮತ್ತು ಗುರುನಾಥ ಸುತಾರ ವಚನಸಂಗೀತ ಹಾಡಿದರು. ಧರ್ಮಗ್ರಂಥ ಪಠಣವನ್ನು ಅನ್ನಪೂರ್ಣ.ಎಸ್. ವರವಿ, ವಚನ ಚಿಂತನೆಯನ್ನು ನಿರ್ಮಲಾ.ಜಿ. ಪಾಟೀಲ ಮಾಡಿದರು. ಶಿವಾನುಭವದ ದಾಸೋಹ ಭಕ್ತಿಸೇವೆ ವಹಿಸಿದ್ದ ಎಸ್.ಎ. ಪಾಟೀಲ, ವಿ.ಎ. ಪಾಟೀಲ ಹಾಗೂ ಜಿ.ಎ. ಪಾಟೀಲ ಮತ್ತು ಕುಟುಂಬದ ಸದಸ್ಯರನ್ನು ಸನ್ಮಾನಿಸಲಾಯಿತು.

ಲಿಂಗಾಯತ ಪ್ರಗತಿಶೀಲ ಸಂಘದ ಉಪಾಧ್ಯಕ್ಷ ಬಾಲಚಂದ್ರ ಭರಮಗೌಡರ, ರೇಣುಕಾ ಕರೇಗೌಡ್ರ, ಕಾರ್ಯದರ್ಶಿ ಮಹೇಶ ಗಾಣಿಗೇರ, ವಿಜಯಕುಮಾರ ಹಿರೇಮಠ, ವಿರುಪಾಕ್ಷಪ್ಪ ಅರಳಿ, ಅಶೋಕ ಹಾದಿ, ಸುರೇಶ ನಿಲೂಗಲ್, ವಿವೇಕಾನಂದಗೌಡ ಪಾಟೀಲ ಇದ್ದರು. ಸಂಘದ ಅಧ್ಯಕ್ಷ ಶೇಖಣ್ಣ ಕಳಸಾಪೂರ ಸ್ವಾಗತಿಸಿದರು. ರತ್ನಕ್ಕ ಪಾಟೀಲ ನಿರೂಪಿಸಿದರು.

Share this article