ಕನಕಪುರ: ಸಮಾಜದ ಎಲ್ಲ ವರ್ಗದ ಜನರನ್ನು ಒಗ್ಗೂಡಿಸಿ ಜಾತಿ, ಭೇದ ಇಲ್ಲದ ಸಮಾಜ ನಿರ್ಮಾಣ ಮಾಡಲು ಬುನಾದಿ ಹಾಕಿ ಬಸವಣ್ಣನವರು ಇಡೀ ಜಗತ್ತಿಗೇ ಬೆಳಕಾದರು ಎಂದು ವಚನ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎಲ್ಲೇಗೌಡ ಬೆಸಗರಹಳ್ಳಿ ತಿಳಿಸಿದರು. ನಗರದ ನಿರ್ವಾಣೇಶ್ವರ ಸ್ನೇಹ ಸ್ಪಂದನ ಗೆಳೆಯರ ಬಳಗದ ವತಿಯಿಂದ ನಡೆದ ಬಸವ ಜಯಂತಿ ಮತ್ತು ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬಸವಣ್ಣ, ಅಲ್ಲಮಪ್ರಭು, ಮಡಿವಾಳ ಮಾಚಿದೇವ, ನುಲಿಯ ಚಂದಯ್ಯ, ಸಿದ್ದರಾಮ, ಹಡಪದ ಅಪ್ಪಣ್ಣ, ಮುತ್ತಾಯಿ, ಅಕ್ಕ ಮಹಾದೇವಿ, ಅಕ್ಕ ನೀಲಮ್ಮ ಸೇರಿದಂತೆ ಎಲ್ಲ ಶರಣರು ಜಾತಿ, ಭೇದ ಇಲ್ಲದ ಸಮಾಜವನ್ನು ನಿರ್ಮಾಣ ಮಾಡಲು ಕ್ರಾಂತಿಯನ್ನೇ ನಡೆಸಿದ್ದನ್ನು ಈ ವೇಳೆ ನೆನೆದರು.
ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಕ ಎಚ್.ಪಿ.ಮಹದೇವಪ್ಪ ಅವರು ಧ್ವಜಾರೋಹಣ ನೆರವೇರಿಸಿದರು, ನಿರ್ವಾಣೇಶ್ವರ ನಗರದ ಸ್ನೇಹ ಸ್ಪಂದನ ಗೆಳೆಯರ ಬಳಗದ ಪದಾಧಿಕಾರಿಗಳು, ಸ್ಥಳೀಯ ಮುಖಂಡರು, ಮಕ್ಕಳು ಮಹಿಳೆಯರು ಪಾಲ್ಗೊಂಡಿದ್ದರು.