ದೀಪಾವಳಿಯಲ್ಲೂ ಸಮೀಕ್ಷೆ; ಶಿಕ್ಷಕರ ಪ್ರತಿಭಟನೆ

KannadaprabhaNewsNetwork |  
Published : Oct 20, 2025, 01:03 AM IST
ದೀಪಾವಳಿ ಹಬ್ಬದಲ್ಲೂ ಸಮೀಕ್ಷೆಗೆ ಸೂಚನೆ ನೀಡಿರುವ ಜಿಲ್ಲಾಡಳಿತ ನಡೆ ವಿರುದ್ಧ ಶಿಕ್ಷಕರು ಬಳ್ಳಾರಿ ತಾಲೂಕು ಪಂಚಾಯಿತಿ  ಎದುರು ಭಾನುವಾರ ಪ್ರತಿಭಟನೆ ನಡೆಸಿದರು.  | Kannada Prabha

ಸಾರಾಂಶ

ಹಬ್ಬದಲ್ಲಿ ಸಮೀಕ್ಷೆಗೆ ತೆರಳಿದ ಜನರು ಸರಿಯಾಗಿ ಸ್ಪಂದಿಸುವುದಿಲ್ಲ.

ಬಳ್ಳಾರಿ: ದೀಪಾವಳಿ ಹಬ್ಬದಲ್ಲೂ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಗೆ ಸೂಚನೆ ನೀಡಿರುವ ಜಿಲ್ಲಾಡಳಿತ ನಡೆ ವಿರುದ್ಧ ನೂರಾರು ಶಿಕ್ಷಕರು ಹಾಗೂ ಸಮೀಕ್ಷೆ ಕರ್ತವ್ಯದಲ್ಲಿರುವ ನೌಕರರು ಇಲ್ಲಿನ ತಾಪಂ ಎದುರು ಭಾನುವಾರ ಪ್ರತಿಭಟನೆ ನಡೆಸಿ, ಆಕ್ರೋಶ ವ್ಯಕ್ತಪಡಿಸಿದರು.

ದಸರಾ ಹಬ್ಬವನ್ನೂ ಲೆಕ್ಕಿಸದೇ ಸಮೀಕ್ಷೆ ಮಾಡಿದ್ದೇವೆ. ಇದೀಗ ದೀಪಾವಳಿಗೂ ನಮಗೆ ಅವಕಾಶ ನೀಡದೇ ಸಮೀಕ್ಷೆಗೆ ಹಾಕಿರುವುದು ಎಷ್ಟು ಸರಿ ಎಂದು ಜಿಲ್ಲಾಡಳಿತ ನಡೆಯನ್ನು ಪ್ರಶ್ನಿಸಿದರು.

ಹಬ್ಬದಲ್ಲಿ ಸಮೀಕ್ಷೆಗೆ ತೆರಳಿದ ಜನರು ಸರಿಯಾಗಿ ಸ್ಪಂದಿಸುವುದಿಲ್ಲ. ಹಬ್ಬದ ದಿನ ಯಾಕೆ ಬಂದ್ರಿ ಎಂದು ಬೈಯುತ್ತಾರೆ. ಹೀಗಾಗಿ ಸಮೀಕ್ಷೆಗೆ ತೆರಳಿದರೂ ಕೆಲಸವಾಗುವುದಿಲ್ಲ. ಹಬ್ಬ ಎಂದು ಗೊತ್ತಿದ್ದರೂ ಜಿಲ್ಲಾಡಳಿತ ಸಮೀಕ್ಷೆಗೆ ತೆರಳುವಂತೆ ಸೂಚನೆ ನೀಡಿದೆ. ನಾವು ಕೆಲಸ ಮಾಡುವುದಿಲ್ಲ ಎಂದು ಹೇಳುತ್ತಿಲ್ಲ. ಆದರೆ, ಹಬ್ಬದ ದಿನಗಳಲ್ಲೂ ಸಮೀಕ್ಷೆ ಮಾಡುವಂತೆ ಹೇಳುವುದು ಎಷ್ಟು ಸರಿ? ಎಂದು ಪ್ರತಿಭಟನಾಕಾರರು ಕೇಳಿದರು.

ಬಳಿಕ ಸ್ಥಳಕ್ಕೆ ಆಗಮಿಸಿದ ಜಿಪಂ ಸಿಇಒ ಮಹ್ಮದ್ ಹ್ಯಾರೀಸ್ ಸುಮೈರ್, ಪ್ರತಿಭಟನಾಕಾರರನ್ನು ಮನವೊಲಿಸಲು ಪ್ರಯತ್ನಿಸಿದರಲ್ಲದೆ, ಸಮೀಕ್ಷೆಯಲ್ಲಿ ಬಳ್ಳಾರಿ ಜಿಲ್ಲೆ ಅತ್ಯಂತ ಕೆಳಸ್ತರದಲ್ಲಿ ಇರುವುದರಿಂದ ಭಾನುವಾರ ಎನ್ನದೇ ಕೆಲಸ ಮಾಡಿ ಎಂದು ಮನವಿ ಮಾಡಿಕೊಂಡರು.

ಸಮೀಕ್ಷೆ ಪ್ರಗತಿಯಲ್ಲಿ ಬಳ್ಳಾರಿ ಜಿಲ್ಲೆ ರಾಜ್ಯದಲ್ಲಿಯೇ 30ನೇ ಸ್ಥಾನದಲ್ಲಿದೆ. ಇಂದು ಕೆಲಸ ಮಾಡದೇ ಹೋದರೆ 31ನೇ ಸ್ಥಾನಕ್ಕೆ ಕುಸಿಯಲಿದೆ. ಜಿಲ್ಲಾ ಸಚಿವರು ಸಭೆ ನಡೆಸಿ, ಸಮೀಕ್ಷೆ ಪ್ರಗತಿಯ ಹಿನ್ನಡೆಯ ಬಗ್ಗೆ ಪ್ರಶ್ನಿಸಿದ್ದಾರೆ. ಪರಿಶೀಲನೆ ಮಾಡಿದಾಗ ಬಳ್ಳಾರಿ ನಗರದಲ್ಲಿ ಅತಿ ಕಡಿಮೆ ಪ್ರಗತಿ ಕಂಡು ಬಂದಿದೆ. ಇದಕ್ಕೆ ಮಹಾನಗರ ಪಾಲಿಕೆ ಸರಿಯಾಗಿ ಸ್ಪಂದಿಸದಿರುವುದು ಒಂದು ಕಾರಣವಾಗಿರಬಹುದು. ನಗರದಲ್ಲಿ ಮನೆಗಳ ಹುಡುಕಾಟ ನಡೆಸಿ ಸಮೀಕ್ಷೆ ಮಾಡುವುದು ಕಷ್ಟವಾಗಿದೆ. ಅದು ನನಗೆ ಸಹ ಗೊತ್ತಿದೆ. ನಾನು ಸಹ ಖುದ್ದಾಗಿ ಕೆಲವು ಕುಟುಂಬಗಳನ್ನು ಸಮೀಕ್ಷೆ ಮಾಡಿದ್ದೇನೆ. ನಾನು ಎಸಿ ರೂಂನಲ್ಲಿ ಕುಳಿತು ನಿಮಗೆ ಸೂಚನೆ ನೀಡುತ್ತಿಲ್ಲ. ನಿಮ್ಮಂತೆಯೇ ನಾನು ಸಮೀಕ್ಷಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದೇನೆ. ಸಂಜೆ ಮುಖ್ಯಮಂತ್ರಿ ಸಭೆ ಇದೆ. ಜಿಲ್ಲೆಯ ಪ್ರಗತಿ ಕೇಳುತ್ತಾರೆ. ನೀವೊಂದಿಷ್ಟು ಕೆಲಸ ಮಾಡಿದರೆ ಅನುಕೂಲವಾಗಲಿದೆ ಎಂದು ಸಿಇಒ ಕೇಳಿಕೊಂಡರಲ್ಲದೆ, ನಾನು ನಿಮಗೆ ಆದೇಶ ಮಾಡುತ್ತಿಲ್ಲ. ಮನವಿ ಮಾಡುತ್ತಿದ್ದೇನೆ. ದಯವಿಟ್ಟು ಇದೊಂದು ದಿನ ಕೆಲಸ ಮಾಡಿ ಎಂದರು.

ಇದೇ ವೇಳೆ ಸಮೀಕ್ಷೆ ನಿಯೋಜಿತ ಶಿಕ್ಷಕರು ಜಿಲ್ಲಾಡಳಿತ ನಡೆಯನ್ನು ಪ್ರಶ್ನಿಸಿದರಲ್ಲದೆ, ಹಬ್ಬದ ದಿನಗಳಲ್ಲೂ ಕೆಲಸ ಮಾಡುವುದು ಎಂದು ಹೇಳುವುದು ಎಷ್ಟು ಸರಿ? ಎಂದು ಕೇಳಿದರು. ಇಂದು ಎರಡು ತಾಸು ಹೆಚ್ಚು ಕೆಲಸ ಮಾಡುತ್ತೇವೆ. ಇಂದೇ ಸಮೀಕ್ಷೆ ಕಾರ್ಯಕ್ಕೆ ತೆರೆ ಎಳೆದುಬಿಡಿ. ಮತ್ತೆ ಕೆಲಸಕ್ಕೆ ನಿಯೋಜನೆಗೊಳಿಸಬೇಡಿ ಎಂದು ಒತ್ತಾಯಿಸಿದರು.

ಕೊನೆಗೆ ಶಿಕ್ಷಕರು, ನಿಯೋಜಿತ ಸಿಬ್ಬಂದಿ ಸಮೀಕ್ಷೆಗೆ ತೆರಳಲು ಒಪ್ಪಿಕೊಂಡರು. ಜಿಲ್ಲಾ ಖನಿಜ ನಿಧಿ ಅಧಿಕಾರಿ, ಸಮೀಕ್ಷೆಯ ಬಳ್ಳಾರಿ ತಾಲೂಕು ಉಸ್ತುವಾರಿ ಲೋಕೇಶ್, ಬಿಸಿಎಂ ಇಲಾಖೆಯ ಜಿಲ್ಲಾಧಿಕಾರಿ ಜಲಾಲಪ್ಪ, ಡಿಡಿಪಿಐ ಉಮಾದೇವಿ, ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಆಸಿಫ್ ಉಪಸ್ಥಿತರಿದ್ದರು.

ಶೇ.95 ಸಮೀಕ್ಷೆ ಪೂರ್ಣ: ಸುದ್ದಿಗಾರರ ಜೊತೆ ಮಾತನಾಡಿದ ಅವರು, ಆರಂಭದಲ್ಲಿ ಸರ್ವರ್ ಸಮಸ್ಯೆಯಿಂದ ಬಳ್ಳಾರಿ ತಾಲೂಕಿನ ಪ್ರಗತಿಯಲ್ಲಿ ಹಿನ್ನಡೆಯಾಯಿತು. ಜತೆಗೆ ನಾನಾ ತಾಂತ್ರಿಕ ಕಾರಣಗಳು ಎದುರಾದವು. ಜಿಲ್ಲೆಯ ಎಲ್ಲ ಸಮೀಕ್ಷೆದಾರರು ಅತ್ಯಂತ ಶ್ರಮ ವಹಿಸಿ ಕೆಲಸ ಮಾಡಿದ್ದಾರೆ. ಹಬ್ಬ ಎನ್ನದೇ ಸಮೀಕ್ಷೆ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ನೌಕರರ ಸೇವೆ ಬಗ್ಗೆ ಹೆಮ್ಮೆಯಿದೆ. ಬಳ್ಳಾರಿ ಜಿಲ್ಲೆ ಶೇ. 95 ಸಮೀಕ್ಷೆಯಾಗಿದೆ. ಮತ್ತಷ್ಟು ಕೆಲಸ ಮಾಡಿದರೆ ಪ್ರಗತಿ ಸುಧಾರಿಸಬಹುದು ಎಂದು ಶಿಕ್ಷಕರಲ್ಲಿ ಮನವಿ ಮಾಡಿಕೊಂಡಿದ್ದೇನೆ ಎಂದರು. ನಾಳೆ ಕೂಡ ಸಮೀಕ್ಷೆ ಕೆಲಸ ಇರಲಿದೆಯೇ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಿಇಒ ಸುಮೈರ್, ಅಂತಿಮವಾಗಿ ನಿರ್ಧಾರ ತೆಗೆದುಕೊಳ್ಳುವುದು ಜಿಲ್ಲಾಧಿಕಾರಿಯೇ ಹೊರತು ನಾನಲ್ಲ ಎಂದು ಸ್ಪಷ್ಟಪಡಿಸಿದರು.

PREV

Recommended Stories

ಖಾಸಗಿ ಸಂಘಟನೆಗಳಿಗೆ ನಿಷೇಧ ಹೇರಿದ್ದು ಜಗದೀಶ್‌ ಶೆಟ್ಟರ್‌ : ಪರಂ
ಕರ್ನಾಟಕಕ್ಕೆ ₹385 ಕೋಟಿ ಕೇಂದ್ರೀಯ ನೆರೆ ಪರಿಹಾರ