ಪ್ರಾಚೀನ ಬೇಡರ ಬುಡಕಟ್ಟು ಕ್ಷೇತ್ರದ ವಿಶೇಷ ಸ್ಥಾನ ನೀಡಲು ಕ್ಷೇತ್ರ ಅಧ್ಯಯನಬಿಜಿಕೆರೆ ಬಸವರಾಜ
ಬುಡಕಟ್ಟು ಆಚರಣೆಯ ಮೂಲಕ ರಾಜ್ಯದ ಗಮನ ಸೆಳೆದಿರುವ ಆಂಧ್ರ ಪ್ರದೇಶದ ಗಡಿಗೆ ಹೊಂದಿಕೊಂಡಿರುವ ಹಿಂದುಳಿದ ಮೊಳಕಾಲ್ಮುರು ಕ್ಷೇತ್ರಕ್ಕೆ, ಅನ್ಯ ರಾಜ್ಯಗಳಲ್ಲಿ ಆದಿವಾಸಿಗಳು ಹೆಚ್ಚಾಗಿ ವಾಸಿಸುವಂತ ಪ್ರದೇಶಗಳಿಗೆ ನೀಡಿದಂತೆ ಪ್ರತ್ಯೇಕ ಸ್ಥಾನ ನೀಡಲು ಸರ್ಕಾರ ಮುಂದಾಗಿದೆ ಎನ್ನಲಾಗಿದೆ. ಇದಕ್ಕೆ ಇಂಬು ನೀಡುವಂತೆ ಆರ್ಥಿಕ ಸ್ಥಿತಿ ಗತಿಯ ಕುರಿತು ಕ್ಷೇತ್ರದಲ್ಲಿ ಸರ್ವೇ ಕಾರ್ಯ ನಡೆಯುತ್ತಿರುವುದು ಸಾಕ್ಷಿ ಒದಗಿಸಿದೆ.ರಾಜ್ಯದಲ್ಲಿಯೇ ಮೊಳಕಾಲ್ಮುರನ್ನು ಗುರುತಿಸಿರುವ ಸರ್ಕಾರ ಕ್ಷೇತ್ರಕ್ಕೆ ಪ್ರಾಚೀನ ಬೇಡರ ಕ್ಷೇತ್ರದ ಸ್ಥಾನಮಾನ ಕಲ್ಪಿಸಲು ಅಧ್ಯಯನ ಆರಂಭಿಸಿದೆ ಎನ್ನುವುದಕ್ಕೆ ಬುಡಕಟ್ಟು ಜನರೇ ಹೆಚ್ಚಾಗಿ ವಾಸಿಸುವ ಈ ಕ್ಷೇತ್ರಕ್ಕೆ ವಿಶೇಷ ಸ್ಥಾನ ಮಾನ ನೀಡುವ ಸುಳಿವನ್ನುಶಾಸಕ ಎನ್.ವೈ.ಗೋಪಾಲಕೃಷ್ಣ ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಜನತೆಯ ಮುಂದೆ ಬಿಚ್ಚಿಟ್ಟದ್ದರು. ಕ್ಷೇತ್ರ ಅಧ್ಯಯನಕ್ಕಾಗಿ 37 ಲಕ್ಷ ರು.ಗಳನ್ನು ಬಿಡುಗಡೆಗೊಳಿಸಲಾಗಿದೆ ಎಂದು ಜನತೆಗೆ ತಿಳಿಸಿದ್ದರು.
ಮೈಸೂರಿನ ಬುಡಕಟ್ಟು ಸಂಶೋಧನಾ ಸಂಸ್ಥೆಯ ಹೊರ ಗುತ್ತಿಗೆ ಸಿಬ್ಬಂದಿ ಕ್ಷೇತ್ರದ ವಿವಿಧ ಹಟ್ಟಿ ಮತ್ತು ಕಾಡಂಚಿನಲ್ಲಿ ಬದುಕುತ್ತಿರುವ ಜನರ ನೈಜ ಸ್ಥಿತಿಯ ಸರ್ವೇ ನಡೆಸುತ್ತಿದ್ದಾರೆ. ಈಗಾಗಲೆ ತಾಲೂಕಿನ ಕೋನಸಾಗರ, ಕಾಟನಾಯಕನಹಳ್ಳಿ, ಕೊಮ್ಮನಪಟ್ಟಿ, ಹಿರೇಕೆರೆ ಹಳ್ಳಿ, ತಳವಾರಹಳ್ಳಿ, ಮ್ಯಾಸರಹಟ್ಟಿ, ಹಾನಗಲ್ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಸರ್ವೇ ನಡೆಸಿರುವ ಮೈಸೂರಿನ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆಯ ತಂಡ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ, ರಾಜಕೀಯ, ಉದ್ಯೋಗ, ಕುರಿತ ಸ್ಥಿತಿಗಳ ಸರ್ಕಾರಕ್ಕೆ 12 ತಿಂಗಳ ಕಾಲ ಮಿತಿಯೊಳಗೆ ವರದಿ ಸಿದ್ಧಪಡಿಸಲು ಅಧ್ಯಯನ ನಡೆಯುತ್ತಿದೆ.ರಾಜ್ಯದಲ್ಲಿಯೇ ಹಿಂದುಳಿದ ಪ್ರದೇಶ ಮೊಳಕಾಲ್ಮುರು ಶತ ಶತಮಾನಗಳಿಂದಲೂ ಮೂಲ ಸೌಲಭ್ಯಗಳಿಂದ ವಂಚಿತಗೊಂಡಿದೆ. ಕುಡಿಯಲು ನೀರಿಲ್ಲದೆ, ದುಡಿಯಲು ಉದ್ಯೋಗವಿಲ್ಲದೆ ಬಳಲುತ್ತಿರುವ ಜನತೆಗೆ ಆಂಧ್ರ ಪ್ರದೇಶ, ತೆಲಂಗಾಣ, ಜಾರ್ಖಂಡ್, ಛತ್ತೀಸ್ಗಡ್, ಹಿಮಾಚಲ ಪ್ರದೇಶ, ಮಧ್ಯ ಪ್ರದೇಶ, ಗುಜರಾತ್, ಮಹಾರಾಷ್ಟ್ರ, ಒಡಿಸ್ಸಾ, ರಾಜಸ್ಥಾನ ರಾಜ್ಯಗಳಲ್ಲಿ ಬಹುತೇಕ ಆದಿವಾಸಿಗಳೇ ವಾಸ ಮಾಡುವಂತ ಹಲವು ಪ್ರದೇಶಗಳಿಗೆ ನೀಡಿದಂತೆ ಪ್ರಾಚೀನ ಬೇಡರ ಕ್ಷೇತ್ರ ಎನ್ನುವ ವಿಶೇಷ ಸ್ಥಾನ ಕಲ್ಪಿಸಲು ಸರ್ಕಾರ ಸರ್ವೇ ಕಾರ್ಯ ಆರಂಬಿಸಿರುವುದು ಜನತೆಗೆ ಹೊಸ ಭರವಸೆಯೊಂದು ಚಿಗುರೊಡೆಯುವಂತಾಗಿದೆ.
ಪ್ರಾಚೀನ ಬೇಡರ ಬುಡಕಟ್ಟು ಕ್ಷೇತ್ರ ಎಂದು ವಿಶೇಷ ಸ್ಥಾನ ನೀಡುವ ಸಂಬಂಧವಾಗಿ ಸರ್ಕಾರದ ಆದೇಶದ ಪ್ರಕಾರವಾಗಿ ಕ್ಷೇತ್ರದಲ್ಲಿ ಸರ್ವೇ ಕಾರ್ಯ ನಡೆಸುತ್ತಿದ್ದೇವೆ. ಜನತೆಯ ಆರ್ಥಿಕ, ಸಾಮಾಜಿಕ, ಶೈಕ್ಷಣಿ, ಉದ್ಯೋಗ ಕುರಿತಂತೆ ಸಂಪೂರ್ಣ ವರದಿಯನ್ನು ಸಿದ್ಧಪಡಿಸಿ ಮುಂದಿನ ಕ್ರಮಕ್ಕಾಗಿ ಸರ್ಕಾರಕ್ಕೆ ಸಲ್ಲಿಸುತ್ತೇವೆ.
-