ಅಪರಿಚಿತ ಮಹಿಳೆ ಅತ್ಯಾಚಾರವೆಸಗಿ ಕೊಲೆಗೈದು ಸುಟ್ಟಿರುವ ಶಂಕೆ

KannadaprabhaNewsNetwork |  
Published : Jun 10, 2026, 02:15 AM IST
ಪೋಟೋ                                                              ಆರೋಪಿಗಳ ಪತ್ತೆ ಹಚ್ಚಲು ಶ್ವಾನದಳದಿಂದ ಕಾರ್ಯಾಚರಣೆ ನಡೆಯಿತು.  | Kannada Prabha

ಸಾರಾಂಶ

ಆರೋಪಿಗಳು ಪುಸಲಾಯಿಸಿ ಪಟ್ಟಣದ ಮಧ್ಯ ಇರುವ ನಿರ್ಮಾಣ ಹಂತದ ಕಟ್ಟಡಕ್ಕೆ ಕರೆದುಕೊಂಡು ಹೋಗಿ ಅತ್ಯಾಚಾರವೆಸಗಿ ಕೊಲೆಗೈದಿದ್ದಲ್ಲದೇ ಸಾಕ್ಷ್ಯ ಮುಚ್ಚಿ ಹಾಕುವುದಕ್ಕಾಗಿ ಶವ ಸುಟ್ಟು ಹಾಕಲೆತ್ನಿಸಿ ಪರಾರಿಯಾಗಿದ್ದಾರೆ ಎನ್ನಲಾಗಿದೆ.

ಕನಕಗಿರಿ: ಅಪರಿಚಿತ ವಿವಾಹಿತ ಮಹಿಳೆಯೋರ್ವಳ ಮೇಲೆ ಅತ್ಯಾಚಾರವೆಸಗಿ ಕೊಲೆಗೈದು ಸುಟ್ಟು ಹಾಕಲಾದ ಹೃದಯವಿದ್ರಾಹಕ ಘಟನೆ ಪಟ್ಟಣದಲ್ಲಿ ಸೋಮವಾರ ತಡರಾತ್ರಿ ನಡೆದಿದೆ.

ಪಟ್ಟಣದ ಎಸ್‌ಬಿಐ ಎಟಿಎಂ ಹಿಂಭಾಗದಲ್ಲಿನ ಸಂಗನಗೌಡ ತಾವರಗೇರಾ ಅವರಿಗೆ ಸೇರಿದ ನಿರ್ಮಾಣ ಹಂತದಲ್ಲಿರುವ ಕಟ್ಟಡದ ೩ನೇ ಮಹಡಿಯ ಮೇಲೆ ದುಷ್ಕರ್ಮಿಗಳು ೩೫ ರಿಂದ ೪೦ ವಯಸ್ಸಿನ ವಿವಾಹಿತೆಯ ಮೇಲೆ ಅತ್ಯಾಚಾರ ಮಾಡಿ ಕೊಲೆಗೈದಿದ್ದು, ಯಾರಿಗೂ ಸಂಶಯ ಬರಬಾರದು ಎಂದು ಶವಕ್ಕೆ ಪ್ಲಾಸ್ಟಿಕ್ ಮೆಶ್‌ ಸುತ್ತಿ ಬಳಿಕ ಪೆಟ್ರೋಲ್ ಸುರಿದು ಸುಟ್ಟು ಹಾಕಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಮಾಹಿತಿ ತಿಳಿದು ಎಸ್ಪಿ ರಾಮ್ ಅರಸಿದ್ದಿ ಹಾಗೂ ಡಿವೈಎಸ್‌ಪಿ ಜೆ.ಎಸ್ ನ್ಯಾಮಗೌಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿನೆ ನಡೆಸಿದ್ದಾರೆ. ಘಟನೆ ನಡೆದ ಮನೆಯ ಸುತ್ತಮುತ್ತಲೂ ಇರುವ ಮಹಿಳೆಯರನ್ನು ವಿಚಾರಣೆ ನಡೆಸಲಾಗಿದ್ದು, ಬೆಳಗಿನ ಜಾವ ಶ್ವಾನದಳದಿಂದಲೂ ಆರೋಪಿಗಳ ಪತ್ತೆಗಾಗಿ ಶೋಧ ಕಾರ್ಯ ನಡೆಸಲಾಗಿದೆ.

ಬೆಚ್ಚಿ ಬಿದ್ದ ಜನತೆ: ಮೃತ ಮಹಿಳೆ ಗೌಂಡಿ ಕೆಲಸ ಮಾಡುತ್ತಿರಬಹುದೆಂದು ಶಂಕಿಸಲಾಗಿದ್ದು, ಸೋಮವಾರ ವಾರದ ಸಂತೆ ಮಾಡಿಕೊಂಡು ಬಂದಿರಬಹುದು ಎನ್ನಲಾಗಿದೆ. ಆರೋಪಿಗಳು ಪುಸಲಾಯಿಸಿ ಪಟ್ಟಣದ ಮಧ್ಯ ಇರುವ ನಿರ್ಮಾಣ ಹಂತದ ಕಟ್ಟಡಕ್ಕೆ ಕರೆದುಕೊಂಡು ಹೋಗಿ ಅತ್ಯಾಚಾರವೆಸಗಿ ಕೊಲೆಗೈದಿದ್ದಲ್ಲದೇ ಸಾಕ್ಷ್ಯ ಮುಚ್ಚಿ ಹಾಕುವುದಕ್ಕಾಗಿ ಶವ ಸುಟ್ಟು ಹಾಕಲೆತ್ನಿಸಿ ಪರಾರಿಯಾಗಿದ್ದಾರೆ ಎನ್ನಲಾಗಿದೆ. ಈ ದುರ್ಘಟನೆಯಿಂದಾಗಿ ಪಟ್ಟಣದ ಜನತೆ ಬೆಚ್ಚಿ ಬಿದ್ದಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಮನೆಯ ಮಾಲೀಕ ಸಂಗನಗೌಡ ದೂರು ನೀಡಿದ್ದು, ಅಕ್ಕಪಕ್ಕದ ಮನೆಗಳ ಸಿಸಿಟಿವಿ ಕ್ಯಾಮೆರಾಗಳಲ್ಲಿ ಆರೋಪಿಗಳ ಓಡಾಟ ಸೆರೆಯಾಗಿದೆ ಎಂದು ತಿಳಿದು ಬಂದಿದೆ. ಕೆಲ ಅನುಮಾನಾಸ್ಪದ ವ್ಯಕ್ತಿಗಳನ್ನು ಠಾಣೆಗೆ ಕರೆತಂದು ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಅಪರಿಚಿತ ಮಹಿಳೆಯೊರ್ವಳು ಕೊಲೆಯಾಗಿರುವ ಶಂಕೆ ಇದೆ. ಎಲ್ಲ ಆಯಾಮಗಳಿಂದಲೂ ತನಿಖೆ ಚುರುಕಾಗಿ ನಡೆಸಲಾಗುತ್ತಿದೆ. ಕನಕಗಿರಿ ಪಟ್ಟಣದ ಜನತೆಯಲ್ಲಿ ಸೃಷ್ಟಿಯಾಗಿರುವ ಆತಂಕ ದೂರ ಮಾಡಲು ಹೆಚ್ಚುವರಿ ಪೊಲೀಸರ ನಿಯೋಜನೆ ಮಾಡಲಾಗುವುದು ಎಂದು ಗಂಗಾವತಿ ಡಿವೈಎಸ್‌ಪಿ ಜೆ.ಎಸ್.ನ್ಯಾಮಗೌಡ ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜೂ.15ರೊಳಗೆ ಸಣ್ಣ ನೀರಾವರಿ ಗಣತಿ ಪೂರ್ಣಗೊಳಿಸಿ: ಜಿಲ್ಲಾಧಿಕಾರಿ ಕವಿತಾ ಎಸ್‌. ಮನ್ನಿಕೇರಿ
ಅಧಿಕಾರಿಗಳ ವಿರುದ್ಧ ದೂರುಗಳ ಸುರಿಮಳೆ