ಹುಬ್ಬಳ್ಳಿ: ಆರ್ಸಿಬಿ ವಿಜಯೋತ್ಸವದ ವೇಳೆ ನಡೆದ ಕಾಲ್ತುಳಿತದಲ್ಲಿ ಅಮಾಯಕ 11 ಜನ ಮೃತಪಟ್ಟಿರುವುದು ದುರದೃಷ್ಟಕರ ಸಂಗತಿ. ಘಟನೆಯಲ್ಲಿ ಕರ್ತವ್ಯಲೋಪ ಎಸಗಿದ ಬೆಂಗಳೂರು ನಗರ ಪೊಲೀಸ್ ಆಯುಕ್ತರನ್ನು ಸರ್ಕಾರ ಅಮಾನತು ಮಾಡಿರುವುದು ಒಳ್ಳೆಯ ನಿರ್ಧಾರ ಎಂದು ವಿಧಾನಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದುರ್ಘಟನೆ ಹಿನ್ನೆಲೆಯಲ್ಲಿ ದಯಾನಂದ ಸೇರಿ ಹಲವರ ಮೇಲೆ ಕ್ರಮ ಕೈಗೊಳ್ಳಲಾಗಿದೆ. ನನ್ನ 45 ವರ್ಷಕ್ಕೂ ಹೆಚ್ಚು ಸುದೀರ್ಘ ರಾಜಕಾರಣದಲ್ಲಿ ಇಂತಹ ದುರ್ಘಟನೆ ನೋಡಿಲ್ಲ. ಪೊಲೀಸ್ ಆಯುಕ್ತ ಮತ್ತು ದೊಡ್ಡ ಐಪಿಎಸ್ ಅಧಿಕಾರಿಗಳನ್ನು ಅಮಾನತು ಮಾಡಿರುವದು ಇದೇ ಮೊದಲು. ಅಧಿಕಾರಿಗಳು ಇಂತಹ ಕಾರ್ಯಕ್ರಮಕ್ಕೆ ಅವಕಾಶ ನೀಡಬಾರದಿತ್ತು ಎಂದ ಅವರು, ಈ ಘಟನೆ ಕುರಿತಂತೆ ಸರ್ಕಾರ ಕೈಗೊಂಡ ನಿರ್ಧಾರ ಪ್ರಶಂಸಿಸುತ್ತೇನೆ ಎಂದರು.ಕಾರ್ಯಕ್ರಮ ಯಾರು ಮಾಡಿದರು? ಏನಾಯ್ತು ಎನ್ನುವ ಕುರಿತಂತೆ ತಾಳಮೇಳವಿಲ್ಲ. ಮಧ್ಯರಾತ್ರಿ ನಿರ್ಧಾರ ತೆಗೆದುಕೊಂಡು ಕಾರ್ಯಕ್ರಮ ಮಾಡಲು ಮುಂದಾಗಿದ್ದು ದುರ್ಘಟನೆಗೆ ಕಾರಣ. ಸಮಯ ನಿಗದಿ ಮಾಡಿಕೊಂಡು ಕಾರ್ಯಕ್ರಮ ಮಾಡಬೇಕಿತ್ತು. ಬೆಂಗಳೂರಿನಲ್ಲಿ ನಡೆದ ಈ ಘಟನೆಯಿಂದ ದೇಶಕ್ಕೆ ತಪ್ಪು ಸಂದೇಶಕ್ಕೆ ರವಾನೆಯಾಗಿದೆ. ಸರ್ಕಾರವೂ ಇದರ ಬಗ್ಗೆ ಲಕ್ಷ್ಯ ಹರಿಸಬೇಕಿತ್ತು ಎಂದರು.
ಸರ್ಕಾರವೂ ಸಂಬಂಧ ಪಟ್ಟವರ ಜತೆ ಮಾತನಾಡಿ ಚರ್ಚೆ ಮಾಡಿ ಅವಕಾಶ ನೀಡಬೇಕಿತ್ತು. ಸರ್ಕಾರದ ಜೊತೆ ಕ್ರಿಕೆಟ್ ಸಂಸ್ಥೆಯದ್ದು ತಪ್ಪಿದೆ. ಈ ಅನಾಹುತದ ಹಿನ್ನೆಲೆಯಲ್ಲಿ ಸರ್ಕಾರ ಕ್ರಿಕೆಟ್ ಸಂಸ್ಥೆ ಮೇಲೆ ಹತ್ತಾರು ಕೇಸ್ ಹಾಕಲಿ. ಆ ಮೂಲಕ ಕ್ರಿಕೆಟ್ ಪಂದ್ಯ ಆಯೋಜಿಸುವವರಿಗೆ ಬುದ್ಧಿ ಕಲಿಸಬೇಕು. ಇಡೀ ದೇಶದಲ್ಲಿ ಕ್ರಿಕೆಟ್ ಹುಚ್ಚು ಒಳ್ಳೆಯದಲ್ಲ ಎಂದು ಹೇಳಿದರು.ಪ್ರಕರಣವನ್ನು ಸರ್ಕಾರ ನ್ಯಾಯಾಂಗ ತನಿಖೆಗೆ ಒಪ್ಪಿಸಿ ಸಿಎಂ ಒಳ್ಳೆಯ ಕ್ರಮ ತೆಗೆದುಕೊಂಡಿದ್ದಾರೆ. ಯಾರು ತಪ್ಪಿತಸ್ಥರಿದ್ದಾರೋ ಅವರ ಮೇಲೆ ನಿರ್ದಾಕ್ಷಿಣ್ಯ ಕ್ರಮವಾಗಲಿ ಎಂದು ತಿಳಿಸಿದರು.