ಬಾಲಕಿ ಹತ್ಯೆ ಬೆನ್ನಲ್ಲೇ ಹುಬ್ಬಳ್ಳಿಯಲ್ಲಿ ಬಿಹಾರಿಗಳ ಬಗ್ಗೆ ಶುರುವಾದ ಶಂಕೆ!

KannadaprabhaNewsNetwork | Published : Apr 16, 2025 12:32 AM

ಐದು ವರ್ಷದ ಬಾಲಕಿಯ ಅಮಾನುಷ ಹತ್ಯೆಯ ಬೆನ್ನಲ್ಲೇ ಹುಬ್ಬಳ್ಳಿ-ಧಾರವಾಡ ಮಹಾನಗರದಲ್ಲಿ ವಿವಿಧ ಕಾಮಗಾರಿಗಳಲ್ಲಿ ಕಾರ್ಮಿಕರಾಗಿ ತೊಡಗಿರುವ ಬಿಹಾರಿಗಳ ಬಗ್ಗೆ ಜನತೆಯಲ್ಲಿ ಅತೀವ ಭಯ, ಶಂಕೆ ಶುರುವಾಗಿದೆ!

ಶಿವಾನಂದ ಅಂಗಡಿಕನ್ನಡಪ್ರಭ ವಾರ್ತೆ ಹುಬ್ಬಳ್ಳಿ

ಐದು ವರ್ಷದ ಬಾಲಕಿಯ ಅಮಾನುಷ ಹತ್ಯೆಯ ಬೆನ್ನಲ್ಲೇ ಹುಬ್ಬಳ್ಳಿ-ಧಾರವಾಡ ಮಹಾನಗರದಲ್ಲಿ ವಿವಿಧ ಕಾಮಗಾರಿಗಳಲ್ಲಿ ಕಾರ್ಮಿಕರಾಗಿ ತೊಡಗಿರುವ ಬಿಹಾರಿಗಳ ಬಗ್ಗೆ ಜನತೆಯಲ್ಲಿ ಅತೀವ ಭಯ, ಶಂಕೆ ಶುರುವಾಗಿದೆ!

ಬಾಲಕಿಯ ಹತ್ಯೆಗೈದು ಪೊಲೀಸ್‌ ಎನ್‌ಕೌಂಟರ್‌ನಲ್ಲಿ ಬಲಿಯಾದದ್ದು ಬಿಹಾರ ಮೂಲದ ಕಾರ್ಮಿಕ ರಿತೇಶಕುಮಾರ್ ಎನ್ನುವುದು ಈ ಭಯ, ಶಂಕೆಗೆ ಪ್ರಮುಖ ಕಾರಣ.

ಹಾಡಹಗಲೇ ಮನೆಯ ಅಂಗಳದಲ್ಲಿ ಆಡುವ ಮುಗ್ದ ಬಾಲಕಿಯನ್ನು ಅಪಹರಿಸುವ ದೃಶ್ಯ ಸಿಸಿ ಟಿವಿಯಲ್ಲಿ ದಾಖಲಾಗಿದ್ದು, ಆ ದೃಶ್ಯ ಅವನೊಬ್ಬ ವಿಕೃತಕಾಮಿ, ಅಸ್ವಸ್ಥ ಮನಸಿನ ಯುವಕ, ಮಾದಕ ವಸ್ತುಗಳ ವ್ಯಸನಿ, ಸುಮಾರು ದಿನಗಳಿಂದ ಕುಟುಂಬದಿಂದ ದೂರವಿದ್ದ ದಾರಿ ತಪ್ಪಿದ ಮಗ, ಎಂಥ ಕೃತ್ಯಕ್ಕೂ ಸಿದ್ಧನಾಗಿದ್ದ ಕ್ರಿಮಿನಲ್‌ ಎನ್ನುವುದನ್ನು ಎತ್ತಿ ಹೇಳುತ್ತದೆ.ಇಂದು ಹುಬ್ಬಳ್ಳಿ-ಧಾರವಾಡ ಮಹಾನಗರದಲ್ಲಿ ವಿವಿಧ ಕಾಮಗಾರಿಗಳಲ್ಲಿ ಲಕ್ಷಕ್ಕೂ ಹೆಚ್ಚು ಬಿಹಾರಿಗಳು ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದಾರೆ. ಬಡತನ, ನಿರುದ್ಯೋಗ ಕಾರಣಕ್ಕಾಗಿ ಆಗಮಿಸುವ ಇವರಲ್ಲಿ ಯುವಕರೇ ಹೆಚ್ಚಾಗಿದ್ದು, ಇವರು ಹೆಚ್ಚಿನ ಶಿಕ್ಷಣ ಪಡೆದಿಲ್ಲ. ಪಾಲಕರ ನಿಯಂತ್ರಣ ತಪ್ಪಿದೆ. ಊರೇ ಬಿಟ್ಟು ಬಂದವರಿಗೆ ಭಯ ಭೀತಿ ಇಲ್ಲದಂತಾಗಿ ದುಶ್ಚಟಗಳ ದಾಸರಾಗುತ್ತಿರುವುದು ಕಂಡು ಬಂದಿದೆ. ವರ್ಷಗಟ್ಟಲೇ ತವರೂರು ಮತ್ತು ಕುಟುಂಬದಿಂದ ದೂರವಿದ್ದವರು. ಇವರ ಮೇಲೆ ಯಾರದೇ ಹಿಡಿತ ಇರುವುದಿಲ್ಲ. ನಾಲ್ಕುದಿನ ಒಂದುಕಡೆ ಕೆಲಸ ಮಾಡಿದರೆ, ಮುಂದಿನ ವಾರ ಬೇರೊಂದುಕಡೆ ಕೆಲಸ ಮಾಡುತ್ತಿರುತ್ತಾರೆ. ಇದು ಸಹಜವಾಗಿಯೇ ಅವರ ಮಾನಸಿಕ ಸ್ಥಿತಿ ಬದಲಿಸಿರುತ್ತದೆ. ಇವರಲ್ಲಿ ರಿತೇಶಕುಮಾರ್ ನಂತಹ ವಿಕೃತರು ಎಷ್ಟಿರಬಹುದು? ಎನ್ನುವ ಅನುಮಾನ ಮತ್ತು ಭಯ ಮಹಾನಗರದ ಜನತೆಯನ್ನು ಈಗ ಕಾಡುತ್ತಿದೆ.

ವಲಸಿಗರ ನಿಯಂತ್ರಿಸಿ?: ಹುಬ್ಬಳ್ಳಿ-ಧಾರವಾಡ ಸೇರಿದಂತೆ ರಾಜ್ಯದ ಮಹಾನಗರಗಳಲ್ಲಿ ಬಿಹಾರ, ಪಶ್ಚಿಮ ಬಂಗಾಳ, ಓಡಿಸಾ, ಕೊಲ್ಕೊತ್ತಾ ಕಾರ್ಮಿಕರ ದೊಡ್ಡ ದಂಡೇ ಇದೆ. ಬಹುತೇಕ ನಿರ್ಮಾಣ ಕಾಮಗಾರಿಗಳಲ್ಲಿ ವಲಸಿಗರೇ ಇದ್ದಾರೆ. ಇವರ ನಿಯಂತ್ರಣ ಯಾರು ಮಾಡಬೇಕು ಎನ್ನುವುದು ಸರ್ಕಾರಕ್ಕೆ ದೊಡ್ಡ ಸವಾಲಾಗಿದೆ.

ಹೋಟೆಲ್‌, ಬಂಗಾರದ ಆಭರಣ ಅಂಗಡಿಗಳು, ಬಾರ್‌ ಆಂಡ್‌ ರೆಸ್ಟೋರೆಂಟ್‌, ಬಾರ್‌ ಬೆಂಡಿಂಗ್‌, ಕಾರ್ಪೆಂಟರ್‌, ಪೈಪ್‌ಲೈನ್‌ ಕಾಮಗಾರಿ, ಇಟ್ಟಿಗೆ ಭಟ್ಟಿ, ಅಮರಗೋಳ ಎಪಿಎಂಸಿಯಲ್ಲಿ ಗ್ರೇಡಿಂಗ್‌ ಮಾಡುವ ಕೆಲಸದಲ್ಲಿಯೂ ಇವರೇ ಇದ್ದಾರೆ. ಬಹುತೇಕ ಶ್ರಮದ ಕೆಲಗಳಲ್ಲಿ ಈ ವಲಸಿಗರೇ ಇದ್ದಾರೆ.

ಹೀಗೆ ಅನ್ಯರಾಜ್ಯದ ಕಾರ್ಮಿಕರನ್ನು ಕರೆದುಕೊಂಡ ಬರಲು ಅನಧಿಕೃತ ಏಜೆನ್ಸಿಗಳು ಇವೆ. ಸ್ಥಳೀಯರಿಗೆ ಹೆಚ್ಚಿಗೆ ಪಗಾರ ಕೊಡಬೇಕು ಎನ್ನುವ ಕಾರಣಕ್ಕಾಗಿಯೇ ಕಾಮಗಾರಿ ಕೈಗೊಳ್ಳುವ ಗುತ್ತಿಗೆದಾರರು ಅನ್ಯ ರಾಜ್ಯಗಳಿಂದ ಕಾರ್ಮಿಕರನ್ನು ಕರೆದುಕೊಂಡು ಬರುವುದು ರೂಢಿಯಲ್ಲಿದೆ.

ಅಲ್ಲಿಂದ ಕೆಲಸಕ್ಕೆಂದು ಬಂದ ಮೇಲೆ ಇರಾಕೊಂದು ಜಾಗ, ಊಟದ ವ್ಯವಸ್ಥೆ ಆಯಿತು ಅಂದ್ರೆ ಎಷ್ಟೇ ಕಠಿಣ ಕೆಲಸವಿದ್ದರೂ ಅವರು ಮಾಡಿ ಮುಗಿಸುತ್ತಾರೆ. ಸ್ಥಳೀಯ ಕಾರ್ಮಿಕರು 8 ಗಂಟೆ ಮಾತ್ರ ಮಾಡುತ್ತಿದ್ದು, ಪಗಾರ ಸಹ ಹೆಚ್ಚಿಗೆ ಕೊಡಬೇಕು, ಮೇಲಾಗಿ ಕಠಿಣ ಕೆಲಸಗಳಿಗೆ ಬಿಹಾರದ ಕಾರ್ಮಿಕರೇ ಬೇಕು. ಹೀಗಾಗಿ ಅವರಿಗೆ ಬೇಡಿಕೆ ಜಾಸ್ತಿ ಎನ್ನುತ್ತಾರೆ ಕಟ್ಟಡ ಕೆಲಸದ ಮೇಸ್ತ್ರಿಯೊಬ್ಬರು.

ಹೀಗೆ ಕೆಲಸಕ್ಕೆಂದು ಬಂದ ಕಾರ್ಮಿಕರ ನೋಂದಣಿ ಸಹ ಇರುವುದಿಲ್ಲ. ಅವರ ರಾಜ್ಯದ ಆಡಳಿತಕ್ಕೂ ಇವರ ಮಾಹಿತಿ ಇರುವುದಿಲ್ಲ. ವಾಪಸ್‌ ಹೋದ ಬಗ್ಗೆಯೂ ಮಾಹಿತಿ ಇರುವುದಿಲ್ಲ. ಹಂತಕ ರಿತೇಶಕುಮಾರನ ಆಧಾರ್‌ ಕಾರ್ಡ, ವಿಳಾಸ ಈ ವರೆಗೂ ಲಭಿಸದೇ ಆತನ ಶವ ಅನಾಥವಾಗಿ ಬಿದ್ದಿದೆ. ಹೀಗಾಗಿ ಜಿಲ್ಲಾಡಳಿತ ಸೇರಿದಂತೆ ಕಾರ್ಮಿಕ ಇಲಾಖೆ, ಕಾರ್ಮಿಕರ ಸಂಘಟನೆಗಳ ಬಳಿ ಸರಿಯಾದ ಅಂಕಿಸಂಖ್ಯೆಗಳೇ ಸಿಗುತ್ತಿಲ್ಲ. ಮೇಲಾಗಿ ಈ ವಲಸೆ ಕಾರ್ಮಿಕರ ನಿಯಂತ್ರಣ ಯಾರ ಹೆಗಲಿಗೆ ಎನ್ನುವುದರಲ್ಲಿ ಇಲಾಖೆಗಳ ಮಧ್ಯೆ ಗೊಂದಲವಿದೆ.

ಬಿಹಾರ, ಪಶ್ಚಿಮ ಬಂಗಾಳ, ಓಡಿಸಾದ ವಲಸೆ ಕಾರ್ಮಿಕರು ಹುಬ್ಬಳ್ಳಿ ಸೇರಿದಂತೆ ರಾಜ್ಯದ ವಿವಿಧ ಮಹಾನಗರಗಳಲ್ಲಿ ಕಠಿಣ ಶ್ರಮದ ಕೆಲಸಗಳಲ್ಲಿ ತೊಡಗಿಕೊಂಡಿದ್ದು, ರಾಜ್ಯ ಸರ್ಕಾರ ಇವರ ನೋಂದಣಿ ಸೇರಿದಂತೆ ಸರ್ಕಾರ ನಿರ್ದಿಷ್ಟ ನಿಯಮಗಳನ್ನು ರೂಪಿಸಬೇಕು ಎಂದು ಸಿಐಟಿಯು ರಾಜ್ಯ ಕಾರ್ಯದರ್ಶಿ ಮಹೇಶ ಪತ್ತಾರ ಹೇಳುತ್ತಾರೆ.

ದಶಕಗಳಿಂದ ಹುಬ್ಬಳ್ಳಿಯ ರೆಸ್ಟೋರೆಂಟ್‌ವೊಂದರಲ್ಲಿ ಮುಖ್ಯ ಅಡುಗೆ ತಯಾರಕನಾಗಿ ಕೆಲಸ ಮಾಡುತ್ತಿದ್ದೇನೆ. ನನ್ನ ಜತೆಗೆ ನಮ್ಮ ರಾಜ್ಯದ ನಾಲ್ಕೈದು ಹುಡುಗರು ಕೆಲಸ ಮಾಡುತ್ತಿದ್ದಾರೆ. ಐದಾರು ತಿಂಗಳಿಗೊಮ್ಮೆ ಊರಿಗೆ ಹೋಗಿ ಬರುತ್ತೇವೆ. ಕುಟುಂಬದ ಸದಸ್ಯರೆಲ್ಲ ಊರಲ್ಲೇ ಇದ್ದಾರೆ ಪಶ್ಚಿಮ ಬಂಗಾಳ ಕಾರ್ಮಿಕ ನಿಕೋಲಸ್ ಮಾಲ್ದಾರ್ ಹೇಳುತ್ತಾರೆ.