ಮಂಗಳೂರು: ಇಂದು ಜನತೆ ರಾಸಾಯನಿಕ ಮುಕ್ತ ಮತ್ತು ಸಾವಯವ ಕೃಷಿ ಪದ್ಧತಿಯಿಂದ ಬೆಳೆಯುವ ಪೌಷ್ಠಿಕ ಆಹಾರ ಸೇವಿಸುವತ್ತ ಮುಖ ಮಾಡುತ್ತಿದ್ದಾರೆ. ಇದರಂತೆ ಅನಾದಿ ಕಾಲದಿಂದ ನಮ್ಮ ದೇಶ ಅನುಸರಿಸುತ್ತಿದ್ದ ಆಯುರ್ವೇದ ಪದ್ಧತಿಯನ್ನು ನಾವೆಲ್ಲರೂ ಚಿಕಿತ್ಸಾ ವಿಧಾನವಾಗಿ ಬಳಸಿಕೊಳ್ಳುವ ಬಗ್ಗೆ ಚಿಂತಿಸಿದಲ್ಲಿ ಸುಸ್ಥಿರ ಆರೋಗ್ಯ ಕಂಡುಕೊಳ್ಳುವುದು ಸಾಧ್ಯವಾಗುತ್ತದೆ ಎಂದು ಆಯುಷ್ ಇಲಾಖೆ ಸೀನಿಯರ್ ಕನ್ಸಲ್ಟೆಂಟ್ ಡಾ. ಅಜಿತ್ ಹೇಳಿದ್ದಾರೆ.ಶ್ರೀವೇದಮಾಯು ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಮಂಗಳೂರು, ಸಾವಯವ ಕೃಷಿಕ-ಗ್ರಾಹಕ ಬಳಗ (ರಿ) ಮಂಗಳೂರು ಮತ್ತು ಪ್ರಣವ ಸೌಹಾರ್ದ ಸಹಕಾರಿ ಸಂಘ ನಿಯಮಿತ ಆಶ್ರಯದಲ್ಲಿ ಧನ್ವಂತರಿ ಜಯಂತಿಯ ಪ್ರಯುಕ್ತ ಯೆಯ್ಯಾಡಿ ಶ್ರೀ ವೇದಮಾಯು ಆಯುರ್ವೆದ ಆಸ್ಪತ್ರೆಯಲ್ಲಿ ಆಯೋಜಿಸಲಾದ ಉಚಿತ ಆಯುರ್ವೇದ ವೈದ್ಯಕೀಯ ಶಿಬಿರದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ಸಾವಯವ ಕೃಷಿಕ ಮತ್ತು ಗ್ರಾಹಕ ಬಳಗ ಕಾರ್ಯದರ್ಶಿ ರತ್ನಾಕರ ಕುಳಾಯಿ ಮಾತನಾಡಿ, ನಮ್ಮ ಬಳಗ ಕಳೆದ ೧೦ ವರ್ಷಗಳಿಂದ ‘ಮನೆ ಮದ್ದು ಶಿಬಿರ’ ಆಯೋಜಿಸುತ್ತಿದೆ. ಇದಕ್ಕಿಂತಲೂ ಮಿಗಿಲಾಗಿ ವೇದಮಾಯು ಆಸ್ಪತ್ರೆ ಮುಖ್ಯಸ್ಥ ಡಾ. ಕೇಶವರಾಜ್ ಅವರು ತ್ವರಿತ ರೀತಿಯಲ್ಲಿ ಆಯುರ್ವೆದ ವೈದ್ಯ ಪದ್ಧತಿಯ ಉನ್ನತಿಗೆ ಶ್ರಮ ವಹಿಸುತ್ತಿದ್ದು, ಅವರ ಕಾಳಜಿಗೆ ನಮ್ಮ ಬಳಗ ಸದಾ ಬೆಂಬಲ ನೀಡಲಿದೆ ಎಂದರು.ಪ್ರಖ್ಯಾತ ಆಯುರ್ವೇದ ಸರ್ಜನ್ ಡಾ. ಸುರೇಶ್ ನೆಗಳಗುಳಿ ಮಾತನಾಡಿ, ನಮ್ಮ ದೇಶದ ಪುರಾತನ ಚಿಕಿತ್ಸಾ ವಿಧಾನ ಜನಮಾನಸದಲ್ಲಿ ಮತ್ತೆ ವಿಜೃಂಬಿಸಬೇಕು ಎನ್ನುವ ಸದಾಶಯದೊಂದಿಗೆ ಡಾ. ಕೇಶವ ರಾಜ್ ಅವರು, ಚಳವಳಿ ಮಾದರಿಯಲ್ಲಿ ಕಾರ್ಯತತ್ಪರರಾಗಿರುವುದು ಪ್ರಶಂಸಾರ್ಹವಾಗಿದೆ ಎಂದರು. ಶ್ರೀ ವೇದಮಾಯು ಆಯುರ್ವೇದ ಆಸ್ಪತ್ರೆ ಮುಖ್ಯಸ್ಥ ಡಾ. ಕೇಶವ ರಾಜ್ ಪ್ರಸ್ತಾವಿಕದಲ್ಲಿ, ನಮ್ಮ ಆಸ್ಪತ್ರೆ ಆಯುರ್ವೇದ ವೈದ್ಯ ಪದ್ಧತಿ ಮೂಲಕ ರೋಗಿಗಳಿಗೆ ಗುಣಮಟ್ಟದ ಸೇವೆ ಒದಗಿಸುತ್ತಿದೆ. ಮಾತ್ರವಲ್ಲದೆ ಸಮಾಜ ಮುಖಿ ಸಂಘಟನೆಗಳ ಸಹಯೋಗದೊಂದಿಗೆ ಹತ್ತು ಹಲವು ಜನೋಪಯೋಗಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ ಎಂದರು. ಪ್ರಣವ ಸೌಹಾರ್ದ ಸಹಕಾರಿ ಸಂಘ ನಿಯಮಿತ ನಿರ್ದೇಶಕ ಸೋಮಪ್ಪ ನಾಯಕ್ ಇದ್ದರು. ಡಾ. ನಿಶಿತಾ ಪ್ರಾರ್ಥಿಸಿದರು. ಬಾಲಕೃಷ್ಣ ಪಚ್ಚನಾಡಿ ನಿರೂಪಿಸಿದರು.