ಹೈನುಗಾರಿಕೆ ಮತ್ತು ಕುರಿ ಸಾಕಾಣಿಕೆಯ ಬಗ್ಗೆ ಉದ್ಯಮ ತರಬೇತುದಾರ ಮಾಹಿತಿ
ಕನ್ನಡಪ್ರಭ ವಾರ್ತೆ ಕೊಪ್ಪಳಕೃಷಿಕರು ತಮ್ಮ ಮೂಲ ಕಸುಬಿನೊಂದಿಗೆ ಹೈನೋದ್ಯಮ ಮತ್ತು ಕುರಿ ಸಾಕಾಣಿಕೆಯಂತಹ ಉಪ ಕಸುಬುಗಳಿಂದ ಸುಸ್ತಿರವಾದ ಲಾಭ ಗಳಿಸಲು ಸಾಧ್ಯ ಎಂದು ಉದ್ಯಮ ತರಬೇತುದಾರ ಮಂಜುನಾಥ ಜಿ. ಗೊಂಡಬಾಳ ಸಲಹೆ ನೀಡಿದರು.
ನಗರದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಗ್ರಾಮೀಣ ಸ್ವಯಂ ಉದ್ಯೋಗ ತರಬೇತಿ ಸಂಸ್ಥೆಯಲ್ಲಿ ಹೈನೋದ್ಯಮ, ಕುರಿ ಸಾಕಾಣಿಕೆ ಹಾಗೂ ಎರೆಹುಳು ಗೊಬ್ಬರ ತಯಾರಿಕೆ ಕುರಿತು ಹತ್ತು ದಿನಗಳ ತರಬೇತಿಯಲ್ಲಿ ಪ್ರಗತಿಪರ ರೈತರಿಗೆ ಇರುವ ಅವಕಾಶ ಮತ್ತು ಸ್ವಾವಲಂಬನೆ ಜೀವನಕ್ಕೆ ಹೈನುಗಾರಿಕೆ ಮತ್ತು ಕುರಿ ಸಾಕಾಣಿಕೆಯ ಬಗ್ಗೆ ಮಾಹಿತಿ ನೀಡಿದರು.ಕೃಷಿಕರು ಕೇವಲ ವಾರ್ಷಿಕ ಬೆಳೆಗಳ ಮೇಲೆ ಅವಲಂಬನೆಯಾಗದೇ ಹೈನೋದ್ಯಮ ಮತ್ತು ಕುರಿ ಸಾಕಾಣಿಕೆ, ಎರೆಹುಳು ಗೊಬ್ಬರ, ಮೀನು ಸಾಕಾಣಿಕೆ ಹಾಗೂ ಕೋಳಿ ಸಾಕಾಣಿಕೆಯ ಮೂಲಕ ಸುಸ್ತಿರ ಆದಾಯ ಮತ್ತು ಪ್ರಗತಿ ಹೊಂದಬೇಕು ಎಂದು ಕರೆ ನೀಡಿದರು.
ಯಾವುದೇ ಉದ್ಯೋಗ ಸಮಯ ಮತ್ತು ಪ್ರಯತ್ನ ಬಯಸುತ್ತದೆ. ಅದರ ಜತೆಗೆ ಆರ್ಥಿಕವಾಗಿ ಬೆಳೆಯಲು ಅದೂ ಬಂಡವಾಳವನ್ನು ಅದಕ್ಕೆ ಪೂರಕವಾಗಿ ಕೆಲಸ ಮಾಡುವುದನ್ನು ಬಯಸುತ್ತದೆ. ಹೊಸ ಕೆಲಸದಲ್ಲಿ ಆರ್ಥಿಕ ಅಪಾಯಗಳು ಇದ್ದೇ ಇರುತ್ತವೆ. ಆದರೆ ಬೆಳೆಯಬೇಕೆಂಬ ಮನುಷ್ಯನಿಗೆ ಅಂತಹ ಅಪಾಯದ ಭಯ ಇರಬಾರದು. ಪ್ರಯತ್ನ ಮತ್ತು ಅಚಲವಾದ ವಿಶ್ವಾಸದಿಂದ ಗೆಲುವು ಸಾಧ್ಯ ಎಂದರು.ಈ ನಾಲ್ಕು ಬಗೆಯ ಉಪ ಕಸುಬು ಆರಂಭಿಸಲು ಇರುವ ಆರ್ಥಿಕ ಸಹಾಯಧನ, ಹಣಕಾಸಿನ ನೆರವು ಮತ್ತು ಯೋಜನೆಯ ಕುರಿತು ತರಬೇತಿ ನೀಡಿದರು. ತರಬೇತಿ ಕೇಂದ್ರದ ಉಪನ್ಯಾಸಕಿ ಗೀತಾ ಬೋಲಾ ಮತ್ತು ವಿಜಯಲಕ್ಷ್ಮೀ ಕನಕಿ ಇದ್ದರು. ಜಿಲ್ಲೆಯ ವಿವಿಧ ಭಾಗಗಳ ಶಿಬಿರಾರ್ಥಿಗಳು ಪಾಲ್ಗೊಂಡಿದ್ದರು.