ಕನ್ನಡಪ್ರಭ ವಾರ್ತೆ ಮಧುಗಿರಿಜಾತಿ ವಿನಾಶವಾಗದ ಹೊರತು ಸುಸ್ಥಿರ ಸಮಾಜ ಕಟ್ಟಲು ಸಾಧ್ಯವಿಲ್ಲ. ಹಿಂದು ಧರ್ಮ ದುರ್ಬಲಗೊಳ್ಳಲು ಜಾತಿ ಪದ್ಧತಿಯೇ ಮೂಲ ಕಾರಣ ಎಂಬದನ್ನು ಯಾರು ಮರೆಯಲಾಗದು ಎಂದು ಜಿಲ್ಲಾ ಸತ್ರ ನ್ಯಾಯಾಧೀಶ ಕೆ.ಯಾದವ್ ಕಳವಳ ವ್ಯಕ್ತಪಡಿಸಿದರು.
ಇಲ್ಲಿನ ನ್ಯಾಯಾಲಯಗಳ ಸಂಕೀರ್ಣದ ಆವರಣದಲ್ಲಿನ ವಕೀಲರ ಸಂಘದಲ್ಲಿ ನಡೆದ 133ನೇ ಅಂಬೇಡ್ಕರ್ ಜಯಂತಿಯಲ್ಲಿ ಭಾಗವಹಿಸಿ ಮಾತನಾಡಿದರು. ಅಂಬೇಡ್ಕರ್ ವಿಚಾರ ಧಾರೆಗಳನ್ನು ಆಳವಾಗಿ ಅಧ್ಯಯನ ಮಾಡಿ ಅರ್ಥ ಮಾಡಿಕೊಂಡು ಜಾತಿ ಮುಕ್ತ ಸಮಾಜ ಕಟ್ಟುವ ನಿಟ್ಟಿನಲ್ಲಿ ಎಲ್ಲರೂ ಮುಂದಾಗಬೇಕು. ಅಂಬೇಡ್ಕರ್ ಬಗ್ಗೆ ಮಾತನಾಡಲು ಒಂದು ದಿನವಾದ ರೂ ಸಾಲದು, ಆದ್ದರಿಂದ ಅವರ ಚಿಂತನೆ ಓದಿಕೊಂಡು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಸಮ ಸಮಾಜ ನಿರ್ಮಿಸಲು ಮುಂದಾಗಬೇಕು ಎಂದರು.ವಕೀಲರ ಸಂಘದ ಅಧ್ಯಕ್ಷ ಪಿ.ಸಿ.ಕೃಷ್ಣಾರೆಡ್ಡಿ ಮಾತನಾಡಿ, ಅಂಬೇಡ್ಕರ್ ಈ ದೇಶದಲ್ಲಿ ಜನಿಸದಿದ್ದರೆ ದಲಿತರು, ಶೋಷಿತ ಜನಾಂಗ ನೋವಿನಲ್ಲಿಯೇ ನರಳಬೇಕಾಗಿತ್ತು. ಅಂದು ನಿರ್ಲಕ್ಷಿಸಲ್ಪಟ್ಟವರು ಇಂದು ಉನ್ನತ ಶಿಕ್ಷಣ ಪಡೆದು ಜವಾಬ್ದಾರಿಯುತ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸುವ ಮೂಲಕ ಉತ್ತಮ ಜೀವನ ಕಟ್ಟಿಕೊಂಡಿದ್ದಾರೆ ಎಂದರು.
ವಕೀಲ ಕವಿ ಬಿದಲೋಟಿ ರಂಗನಾಥ್ ಮಾತನಾಡಿ, ಕಾನೂನು ಕಟ್ಟಳೆಗಳಿಗಿಂತ ಮನುಷ್ಯ ಮನುಷ್ಯನನ್ನಾಗಿ ನೋಡಿದಾಗ ಮಾತ್ರ ಸಾಮಾಜಿಕ ಸಮಾನತೆ ದೊರೆಯುತ್ತದೆ. ದೀನ, ದಲಿತರಿಗೆ ದೇವರಿಗಿಂತ ವಿದ್ಯೆ ಅತಿ ಮುಖ್ಯ. ಈ ನಿಟ್ಟಿನಲ್ಲಿ ತಮ್ಮ ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡುವ ಮೂಲಕ ಉನ್ನತ ಸ್ಥಾನಮಾನಗಳನ್ನು ಪಡೆಯಲು ಶ್ರಮಿಸಿ. ಅದು ಅಂಬೇಡ್ಕರ್ ಕನಸು ಕೂಡ ಆಗಿತ್ತು.ಕಾರ್ಯಕ್ರಮದಲ್ಲಿ ಹಿರಿಯ ವಕೀಲರಾದ ಪಿ.ಸಿ.ನಾಗಭೂಷಣ್, ವಿ.ರಘುನಾಥರೆಡ್ಡಿ, ರಂಗನಾಥ, ಚಿತ್ತಯ್ಯ, ಅಶ್ವತ್ಥ, ತಿಮ್ಮರಾಜು, ಮುರುಳೀಧರ, ಉಪಾಧ್ಯಕ್ಷ ನರಸಿಂಹಮೂರ್ತಿ ಸುರೇಶ್, ಜಗದೀಶ್, ಮಹೇಶ್, ಪರಮೇಶ್, ಮನೋಹರ, ವಿನೋದ ಇದ್ದರು.