11ರಂದು ಸ್ವಾಮಿ ವಿವೇಕಾನಂದರ ಮೂರ್ತಿ ಅನಾವರಣ: ಡಾ. ಸುರೇಶ್ ನಾಡಗೌಡರ

KannadaprabhaNewsNetwork | Published : Sep 10, 2024 1:31 AM

ಸಾರಾಂಶ

ಸೆ. 11ರಂದು ಜಿಲ್ಲೆಯ ಆರ್.ಡಿ.ಪಿ.ಆರ್. ವಿಶ್ವವಿದ್ಯಾಲಯದ ನಾಗಾವಿಯ ಕ್ಯಾಂಪಸ್‌ನಲ್ಲಿ ವಿಶ್ವಚೇತನ ಸ್ವಾಮಿ ವಿವೇಕಾನಂದರ 39.5 ಅಡಿ ಎತ್ತರದ ಪುತ್ಥಳಿ ಅನಾವರಣಗೊಳಿಸುವ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ವಿಶ್ವವಿದ್ಯಾಲಯದ ಕುಲಪತಿ ಡಾ. ಸುರೇಶ್ ನಾಡಗೌಡರ ಹೇಳಿದರು.

ಗದಗ: ಪಾಶ್ಚಿಮಾತ್ಯ ರಾಷ್ಟ್ರಗಳಿಗೆ ಭಾರತದ ಆಧ್ಯಾತ್ಮಿಕ ಶಕ್ತಿ ಪರಿಚಯಿಸಿದವರು ಸ್ವಾಮಿ ವಿವೇಕಾನಂದರು. ಅವರು ವಿಶ್ವ ವಿಖ್ಯಾತ ಶಿಕಾಗೊ ಭಾಷಣ ಮಾಡಿದ ದಿನವಾದ ಸೆ. 11ರಂದು ಜಿಲ್ಲೆಯ ಆರ್.ಡಿ.ಪಿ.ಆರ್. ವಿಶ್ವವಿದ್ಯಾಲಯದ ನಾಗಾವಿಯ ಕ್ಯಾಂಪಸ್‌ನಲ್ಲಿ ವಿಶ್ವಚೇತನ ಸ್ವಾಮಿ ವಿವೇಕಾನಂದರ 39.5 ಅಡಿ ಎತ್ತರದ ಪುತ್ಥಳಿ ಅನಾವರಣಗೊಳಿಸುವ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ವಿಶ್ವವಿದ್ಯಾಲಯದ ಕುಲಪತಿ ಡಾ. ಸುರೇಶ್ ನಾಡಗೌಡರ ಹೇಳಿದರು.

ನಗರದ ಆರ್.ಡಿ.ಪಿ.ಆರ್‌. ವಿಶ್ವವಿದ್ಯಾಲಯದ ಕೌಶಲ್ಯ ವಿಕಾಸಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಸ್ನೇಹ ಸಹೋದರತ್ವ ಭಾವನೆಯ ಪ್ರತೀಕವಾಗಿ ವಿಶ್ವದ ಗಮನ ಸೆಳೆದ ಮಹಾನ್ ಚೇತನ, ಭಾರತೀಯ ಚಿಂತನ ಶೈಲಿಯ ಮಹತ್ವವನ್ನು ವಿಶ್ವ ಮಾನ್ಯಗೊಳಿಸಿದವರು ಸ್ವಾಮಿ ವಿವೇಕಾನಂದರು. ಇಂತಹ ಆದರ್ಶ ವ್ಯಕ್ತಿತ್ವದ ಪ್ರತಿಕೃತಿಯನ್ನು ಸ್ಥಾಪಿಸುವ ಮೂಲಕ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳಲ್ಲಿ ಅವರ ವಿಚಾರಧಾರೆಗಳನ್ನು ಪುನಶ್ಚೇತನಗೊಳಿಸುವ ಪ್ರಯತ್ನವನ್ನು ಮಾಡುವುದು. ಕರ್ನಾಟಕ ಹಾಗೂ ದೇಶದಲ್ಲಿ ವಿವೇಕಾನಂದರ ಪ್ರಸ್ತುತಿಯನ್ನು ಪ್ರಚುರಪಡಿಸಲು ವಿಶ್ವವಿದ್ಯಾಲಯದ ಆವರಣದಲ್ಲಿ ಸ್ವಾಮಿ ವಿವೇಕಾನಂದರ ಭವ್ಯವಾದ ಕಂಚಿನ ಪುತ್ಥಳಿಯನ್ನು ಕಲ್ಕತ್ತಾದ ಸ್ವಾಮಿ ವಿವೇಕಾನಂದ ರಾಮಕೃಷ್ಣ ಮಿಷನ್ ಅವರು ಒದಗಿಸಿದ್ದಾರೆ. ಈ ಪುತ್ಥಳಿಯನ್ನು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ, ಮಾಜಿ ಶಾಸಕ ಡಿ.ಆರ್. ಪಾಟೀಲ್, ಗದಗಿನ ವಿವೇಕಾನಂದ ರಾಮಕೃಷ್ಣ ಆಶ್ರಮದ ಸ್ವಾಮಿ ನಿರ್ಭಯಾನಂದಜಿ ಅವರ ಮಾರ್ಗದರ್ಶನದಲ್ಲಿ ನಿರ್ಮಿಸಲಾಗಿದೆ ಎಂದು ತಿಳಿಸಿದರು.

ಅನಾವರಣ ಸಮಾರಂಭವನ್ನು ಸೆ. 11ರಂದು ಬೆಳಗ್ಗೆ 11ಕ್ಕೆ ಹಮ್ಮಿಕೊಳ್ಳಲಾಗಿದ್ದು. ಸಮಾರಂಭಕ್ಕೆ ವಿಪ ಸಭಾಪತಿ ಬಸವರಾಜ ಹೊರಟ್ಟಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಚಿವ ಪ್ರಿಯಾಂಕ ಖರ್ಗೆ, ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್.ಕೆ. ಪಾಟೀಲ ಸೇರಿ ವಿವಿಧ ಗಣ್ಯರು ಆಗಮಿಸಲಿದ್ದಾರೆ.

ರಾಮಕೃಷ್ಣ ಆಶ್ರಮದ ಅಧ್ಯಕ್ಷ ಸ್ವಾಮಿ ಮುಕ್ತಿನಾನಂದಜೀ, ತೋಂಟದಾರ್ಯ ಮಠದ ಶ್ರೀ ಸಿದ್ಧರಾಮೇಶ್ವರ ಸ್ವಾಮಿಗಳು, ರಾಮಕೃಷ್ಣ ವಿವೇಕಾನಂದ ಆಶ್ರಮದ ಶ್ರೀ ನಿರ್ಭಯಾನಂದ ಸ್ವಾಮೀಜಿ ಸಾನಿಧ್ಯ ವಹಿಸಲಿದ್ದಾರೆ. ಈ ಸಂದರ್ಭದಲ್ಲಿ ವಿಶ್ವವಿದ್ಯಾಲಯದ ಆವರಣದಲ್ಲಿ ನಿರ್ಮಿಸಿರುವ ಖಾದಿ ಮಳಿಗೆ ಹಾಗೂ ಸ್ವಾಮಿ ವಿವೇಕಾನಂದ ಮತ್ತು ಮಹಾತ್ಮಾ ಗಾಂಧೀಜಿ ಕುರಿತಾದ ಪುಸ್ತಕಗಳು ಹಾಗೂ ವಿಶ್ವವಿದ್ಯಾಲಯದ ಇತರ ಪ್ರಕಟಣೆಗಳ ಪ್ರಚಾರ ಹಾಗೂ ಮಾರಾಟ ಮಳಿಗೆಗಳನ್ನು, ವಿಶ್ವವಿದ್ಯಾಲಯದ ಸ್ಪೋರ್ಟ್ಸ್ ಮತ್ತು ವ್ಯಾಯಾಮ ಶಾಲೆ ಕಟ್ಟಡದ ಉದ್ಘಾಟನೆಯನ್ನೂ ನೆರವೇರಿಸಲಾಗುವುದು ಎಂದು ತಿಳಿಸಿದರು.

ಈ ವೇಳೆ ವಿಶ್ವವಿದ್ಯಾಲಯದ ಹಣಕಾಸು ಅಧಿಕಾರಿ ಜೆ.ಸಿ. ಪ್ರಶಾಂತ ಸೇರಿದಂತೆ ಉಮೇಶ ಬಾರ್ಕಿ, ಶಶಿ ಭೂಷಣ, ಡಾ. ಅಬ್ದುಲ್, ಗಿರೀಶ ದಿಕ್ಷೀತ್, ಪ್ರಶಾಂತ ಮೆಹರವಾಡೆ ಇದ್ದರು.

Share this article