ಕೈ ಹಿಡಿದಿದೆ ರೇಷ್ಮೆ, ಬಾಳೆ, ಅರಿಶಿನ, ಕಬ್ಬು

KannadaprabhaNewsNetwork | Published : Jun 4, 2025 2:04 AM
ರೇಷ್ಮೆಯನ್ನು ವರ್ಷಕ್ಕೆ ಆರು ಬೆಳೆ ಬೆಳೆಯುತ್ತಾರೆ. ಮೈಸೂರಿನ ರೇಷ್ಮೆಗೂಡು ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಾರೆ.

ಅಂಶಿ ಪ್ರಸನ್ನಕುಮಾರ್

ಕನ್ನಡಪ್ರಭ ವಾರ್ತೆ ಮೈಸೂರು

ಟಿ. ನರಸೀಪುರ ತಾಲೂಕು ಮೂಗೂರು ಹೋಬಳಿ ಹ್ಯಾಕನೂರಿನ ರೈತ ಎಚ್.ಎಂ ಸ್ವಾಮಿ ಅವರು ರೇಷ್ಮೆ, ಬಾಳೆ, ಅರಿಶಿನ, ಕಬ್ಬು, ತರಕಾರಿ ಬೆಳೆಯುತ್ತಾ ವಾರ್ಷಿಕ 3 ಲಕ್ಷ ರು. ಉಳಿತಾಯ ಮಾಡುತ್ತಿದ್ದಾರೆ.

ಅವರಿಗೆ 6 ಎಕರೆ ಜಮೀನಿದೆ. ಮೂರು ಕೊಳವೆ ಬಾವಿಗಳಿವೆ. ಎರಡು ಎಕರೆಯಲ್ಲಿ ರೇಷ್ಮೆ, ಒಂದು ಎಕರೆಯಲ್ಲಿ ಜಿ9 ಬಾಳೆ, ಒಂದು ಎಕರೆಯಲ್ಲಿ ಅರಿಶಿನ, ಒಂದು ಎಕರೆಯಲ್ಲಿ ಕಬ್ಬು, ಬೆಳೆದಿದ್ದಾರೆ. ಇವರ ಜಮೀನಿನಲ್ಲಿ 70 ತೆಂಗು, 30 ತೇಗದ ಮರಗಳಿವೆ. ಎಚ್‌.ಎಂ. ಸ್ವಾಮಿ ಅವರಿಗೆ ಇಬ್ಬರು ಪುತ್ರರು. ಎಚ್.ಎಸ್. ಕುಮಾರ್ ತಂದೆ ಎಚ್‌.ಎಂ. ಸ್ವಾಮಿ, ತಾಯಿ ಮರಿತಾಯಮ್ಮ ಅವರ ಜೊತೆ ಸೇರಿ ಸಂಪೂರ್ಣವಾಗಿ ವ್ಯವಸಾಯದ ಉಸ್ತುವಾರಿ ಮಾಡುತ್ತಾರೆ. ಮತ್ತೊರ್ವ ಪುತ್ರ ಎಚ್.ಎಸ್. ಯೋಗೇಶ್ ಮೂಗೂರಿನಲ್ಲಿ ರಸಗೊಬ್ಬರದ ಅಂಗಡಿ ನಡೆಸುತ್ತಾರೆ.

ರೇಷ್ಮೆಯನ್ನು ವರ್ಷಕ್ಕೆ ಆರು ಬೆಳೆ ಬೆಳೆಯುತ್ತಾರೆ. ಮೈಸೂರಿನ ರೇಷ್ಮೆಗೂಡು ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಾರೆ. ಪ್ರತಿ ಬೆಳೆಗೆ 50 ಸಾವಿರ ರು. ಸಿಗುತ್ತದೆ. ಬಾಳೆಯಿಂದ ವಾರ್ಷಿಕ 1 ಲಕ್ಷ ರೂ. ಆದಾಯವಿದೆ. ಕಳೆದ ವರ್ಷ ಅರಿಶಿನ ಬೆಳೆ ಕ್ವಿಂಟಲ್‌ಗೆ 12,500 ರು. ಇತ್ತು. 40 ಕ್ವಿಂಟಲ್‌ ಮಾರಾಟ ಮಾಡಿದ್ದರು. ಈ ಬಾರಿ ಬೆಳೆ ಕುಸಿತವಾಗಿದೆ. ಕಬ್ಬು 100 ಟನ್‌ ಆಗಿತ್ತು. ಕುಂತೂರು ಸಕ್ಕರೆ ಕಾರ್ಖಾನೆಗೆ ಪೂರೈಸಿದರು. ತೆಂಗಿನ ಮರಗಳಿಂದ ಕಾಯಿ ಬದಲು ಎಳನೀರು ಮಾರಾಟಕ್ಕೆ ಆದ್ಯತೆ ನೀಡುತ್ತಿದ್ದಾರೆ. ವಾರ್ಷಿಕ 1.50 ಲಕ್ಷ ರೂ. ಸಿಗುತ್ತಿದೆ. ಇದರಲ್ಲಿ ಶೇ.50 ರಷ್ಟು ಕೃಷಿಗೆ ಖರ್ಚಾಗುತ್ತದೆ.

ಎರಡು ಹಸುಗಳಿವೆ. ಡೇರಿಗೆ ಪ್ರತಿನಿತ್ಯ ಎಂಟು ಲೀಟರ್ ಹಾಲು ಪೂರೈಸುತ್ತಾರೆ. ಹಿಂದೆ ಮೀನುಮರಿ ಸಾಕಾಣಿಕೆ ಮಾಡಿದ್ದರು. ಆದರೆ ನಷ್ಟವಾಗಿದ್ದರಿಂದ ಕೈಬಿಟ್ಟಿದ್ದಾರೆ.

ಸ್ವಾಮಿ ಅವರನ್ನು 2022 ರ ಮೈಸೂರು ರೈತ ದಸರಾದಲ್ಲಿ ಸನ್ಮಾನಿಸಲಾಗಿದೆ. ಎಚ್.ಎಸ್. ಕುಮಾರ್ ಅವರು ಮೈಸೂರು ಆಕಾಶವಾಣಿ ಕೃಷಿ ರಂಗ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. ಕುಮಾರ್ ಅವರು ನರ್ಸರಿ ಕೂಡ ಹೊಂದಿದ್ದರು. ಟೊಮ್ಯಾಟೋ, ಬದನೆ, ಕಲ್ಲಂಗಡಿ ಮೊದಲಾದ ಸಸಿಗಳನ್ನು ಬೆಳೆದು ಮಾರಾಟ ಮಾಡುತ್ತಿದ್ದರು.

ಇವರು ಕೃಷಿ ಯಂತ್ರೋಪಕರಣ ಬಳಸುತ್ತಾರೆ. ಟಿಲ್ಲರ್‌ ಇದೆ. ಬಾಳೆಗೆ ಎನ್ಆರ್‌ಇಜಿ ಯೋಜನೆಯಲ್ಲಿ ಸಹಾಯಧನ ಪಡೆದಿದ್ದಾರೆ. ಕೃಷಿ ಇಲಾಖೆಯಿಂದಲೂ ಸಹಾಯಧನ ಪಡೆದಿದ್ದರು.

ಸಂಪರ್ಕ ವಿಳಾಸಃ

ಎಚ್.ಎಂ. ಸ್ವಾಮಿ ಬಿನ್‌ ಲೇಟ್‌ ಮಾದಪ್ಪ

ಹ್ಯಾಕನೂರು,

ಮೂಗೂರು ಹೋಬಳಿ,

ಟಿ. ನರಸೀಪುರ ತಾಲೂಕು

ಮೈಸೂರು ಜಿಲ್ಲೆ

ಮೊ. 97433 08034

--

ಕೋಟ್

ಹತ್ತು ಹಲವು ಸಮಸ್ಯೆಗಳ ನಡುವೆ ರೈತಾಪಿವರ್ಗ ಕೆಲಸ ಮಾಡಬೇಕಾಗಿದೆ. ಎಷ್ಟೇ ಕಷ್ಟಪಟ್ಟು ವ್ಯವಸಾಯ ಮಾಡಿದರೂ ಇಷ್ಟೇ ಲಾಭ ಬರುತ್ತದೆ ಎಂದು ಹೇಳಲಾಗದು. ಅವತ್ತಿನ ಪರಿಸ್ಥಿತಿಯಲ್ಲಿ ಮಾರುಕಟ್ಟೆಯಲ್ಲಿ ಏನು ರೇಟು ಇರುತ್ತೋ ಅದರಂತೆ ನಮಗೆ ಲಾಭ- ನಷ್ಟ ಗೊತ್ತಾಗುತ್ತದೆ.

- ಎಚ್‌.ಎಸ್‌. ಕುಮಾರ್‌, ಹ್ಯಾಕನೂರು