ದಾವಣಗೆರೆ: ದಾವಣಗೆರೆ ಜಿಲ್ಲಾ ವಕೀಲರ ಸಂಘದ ನೂತನ ಅಧ್ಯಕ್ಷರಾಗಿ ಟಿ.ಆರ್.ಗುರು ಬಸವರಾಜ ಆಯ್ಕೆಯಾಗಿದ್ದಾರೆ.
ನಗರದ ಜಿಲ್ಲಾ ವಕೀಲರ ಸಾಂಸ್ಕೃತಿಕ ಭವನದಲ್ಲಿ ಶನಿವಾರ ನಡೆದ ಚುನಾವಣೆಯಲ್ಲಿ ಸಂಘದ ನೂತನ ಅಧ್ಯಕ್ಷರಾಗಿ ಟಿ.ಆರ್.ಗುರು ಬಸವರಾಜ ದೈವಾರ್ಷಿಕ ಅವಧಿಗೆ ನಡೆದ ಚುನಾವಣೆಯಲ್ಲಿ ನೂತನ ಅಧ್ಯಕ್ಷರಾಗಿ ಬಹುಮತದೊಂದಿಗೆ ಆಯ್ಕೆಯಾದರು.ಸಂಘದ ಒಟ್ಟು 1216 ಸದಸ್ಯರಲ್ಲಿ 1029 ಮತದಾರರು ತಮ್ಮ ಹಕ್ಕು ಚಲಾಯಿಸಿದರು. ಚುನಾವಣಾಧಿಕಾರಿಯಾಗಿ ಎಲ್.ದಯಾನಂದ, ಡಿ.ಎಚ್.ರಾಜು, ಸೈಯದ್ ಹರ್ಷದ್ ಹುಸೇನ್, ಎಚ್.ಶಿವಣ್ಣ ಕಾರ್ಯ ನಿರ್ವಹಿಸಿದರು.
ಅಧ್ಯಕ್ಷ ಸ್ಥಾನಕ್ಕೆ ಐವರು ಸ್ಪರ್ಧಿಸಿದ್ದು, ಟಿ.ಆರ್.ಗುರುಬಸವರಾಜ 477 ಮತ ಪಡೆದು, ಗೆಲುವು ಸಾಧಿಸಿದರು. ಗುಮ್ಮನೂರು ಕೆ.ಎಂ.ಮಲ್ಲಿಕಾರ್ಜುನಪ್ಪ 102 ಮತ, ಕೆ.ಎಚ್.ಮಂಜಪ್ಪ 49, ಲೋಕಿಕೆರೆ ಟಿ.ಎಚ್.ಸಿದ್ದಪ್ಪ 87 ಮತ, ತಿಮ್ಮಲಾಪುರ ರವಿಶಂಕರ 247 ಮತ ಗಳಿಸಿದರು.ಉಪಾಧ್ಯಕ್ಷರಾಗಿ 553 ಮತ ಪಡೆದ ಕೆ.ಜಿ.ಕೆ.ಸ್ವಾಮಿ ಆಯ್ಕೆಯಾದರು. ಮಂಜಪ್ಪ ಹಲಗೇರಿ 226 ಮತ, ಕೆ.ಸಿ.ನಾಗರಾಜಪ್ಪ 47, ಟಿ.ಬಿ.ರಾಮಣ್ಣ 176 ಮತಗಳನ್ನಷ್ಟೇ ಪಡೆದರು.
ಕಾರ್ಯದರ್ಶಿಯಾಗಿ 494 ಮತ ಪಡೆದ ಎಸ್.ಮಂಜು ಆಯ್ಕೆಯಾಗಿದ್ದು, ಒಟ್ಟು ನಾಲ್ವರು ಉಮೇದುವಾರರಿದ್ದರು. ಪಿ.ಲಕ್ಕಪ್ಪ 182 ಮತ, ಎಲ್.ಎಚ್.ಪ್ರದೀಪ 286, ಕೆ.ಎಚ್.ವೆಂಕಟೇಶ 45 ಮತಗಳನ್ನು ತಮ್ಮದಾಗಿಸಿಕೊಂಡರು. ಜಂಟಿ ಕಾರ್ಯದರ್ಶಿ ಸ್ಥಾನಕ್ಕೆ ಇಬ್ಬರು ಕಣದಲ್ಲಿದ್ದು, ಕೆ.ಎಸ್.ರೇವಣಸಿದ್ದಪ್ಪ 788 ಮತ ಪಡೆದು ಆಯ್ಕೆಯಾದರೆ, ಆರ್.ಭಾಗ್ಯಲಕ್ಷ್ಮಿ 216 ಮತ ಮಾತ್ರ ಗಳಿಸುವಲ್ಲಿ ಸಫಲರಾದರು.ಮಹಿಳಾ ಮೀಸಲಾಗಿದ್ದ ಖಜಾಂಚಿ ಸ್ಥಾನಕ್ಕೆ ಜಿ.ಇ.ವನಜಾಕ್ಷಿ ಅವಿರೋಧವಾಗಿ ಆಯ್ಕೆಯಾದರು. ನಾಲ್ಕು ಸ್ಥಾನ ಮಹಿಳಾ ಮೀಸಲು ಒಳಗೊಂಡಂತೆ ಕಾರ್ಯಕಾರಿ ಸಮಿತಿಯ 12 ಸ್ಥಾನಕ್ಕೆ ಅವಿರೋಧ ಆಯ್ಕೆಯಾಗಿದ್ದಾರೆ. ಬಿ.ಅಜ್ಜಯ್ಯ, ಕೆ.ಅಣ್ಣಪ್ಪ, ಕೆ.ಚೌಡಪ್ಪ, ಎಂ.ಶಂಕರ ರಾವ್, ಬಿ.ಎಚ್.ಸಿದ್ದೇಶ, ಆರ್.ಸುರೇಶ, ಎಸ್.ವಿಜಯಕುಮಾರ, ಬಿ.ವಿಶ್ವನಾಥ, ಅಲಮೇಲಮ್ಮ, ಎಚ್.ಕೆ.ಅಮೃತಾ, ಕೆ.ಮಂಜುಳಾ, ಶ್ವೇತಾ ಹಿಂಜಗಿಮಠ ಆಯ್ಕೆಯಾದ ಸದಸ್ಯರು.