ಕನ್ನಡಪ್ರಭವಾರ್ತೆ ತುರುವೇಕೆರೆ
ಹಿಂದಿನ ಅಧ್ಯಕ್ಷರಾಗಿದ್ದ ಎಚ್. ಆರ್.ರಾಮೇಗೌಡರು ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರಿಂದ ಗುರುವಾರ ಚುನಾವಣೆ ನಡೆಯಿತು. ಅಧ್ಯಕ್ಷ ಸ್ಥಾನಕ್ಕೆ ಟಿ.ಆರ್.ರಂಗನಾಥ್ ಮಾತ್ರ ನಾಮಪತ್ರ ಸಲ್ಲಿಸಿದ್ದರಿಂದ ಚುನಾವಣಾಧಿಕಾರಿಗಳಾಗಿದ್ದ ಸಂಘದ ಸಿಇಒ ಎನ್.ಶರತ್ ಕುಮಾರ್ ರವರು ನೂತನ ಅಧ್ಯಕ್ಷರಾಗಿ ಟಿ.ಆರ್.ರಂಗನಾಥ್ ಆಯ್ಕೆಯಾಗಿದ್ದಾರೆಂದು ಘೋಷಿಸಿದರು. ಈ ಸಂಧರ್ಭದಲ್ಲಿ ಮಾತನಾಡಿದ ಟಿ.ಆರ್.ರಂಗನಾಥ್ ತಮ್ಮ ಸಂಘದಲ್ಲಿ ಸುಮಾರು 1500 ಷೇರುದಾರರು ಇದ್ದಾರೆ. ನಷ್ಠದಲ್ಲಿದ್ದ ಸಂಘವನ್ನು ಲಾಭದತ್ತ ತರಲಾಗುತ್ತಿದೆ. ಈಗಾಗಲೇ ಹಲವಾರು ಠೇವಣಿದಾರರಿಗೆ ಹಣ ಹಿಂತಿರುಗಿಸಲಾಗಿದೆ. 2024- 25 ನೇ ಸಾಲಿನಲ್ಲಿ ಸಂಘ ಸುಮಾರು 23 ಲಕ್ಷ ಲಾಭಗಳಿಸಿದೆ. ಮುಂಬರುವ ದಿನಗಳಲ್ಲಿ ಸಂಘದ ಎಲ್ಲಾ ಸದಸ್ಯರ ಸಹಕಾರದಿಂದ ಸಂಘಕ್ಕೆ ಮತ್ತೂ ಲಾಭ ಬರುವಂತೆ ಮಾಡಲು ಪ್ರಾಮಾಣಿಕವಾಗಿ ಪ್ರಯತ್ನ ಮಾಡುವೆ ಎಂದು ಹೇಳಿದರು. ಸುಮಾರು 50 ಲಕ್ಷ ವೆಚ್ಚದಲ್ಲಿ ನೂತನ ವಾಣಿಜ್ಯ ಸಂಕೀರ್ಣ ನಿರ್ಮಿಸಲು ಸಮಿತಿ ನಿರ್ಣಯಿಸಿದೆ. ನೆಲ ಮತ್ತು ಮೊದಲ ಮಹಡಿ ಕಟ್ಟಡವನ್ನು ಇನ್ನು ಕೆಲವೇ ದಿನಗಳಲ್ಲಿ ಟೆಂಡರ್ ಕರೆದು ಕಾಮಗಾರಿ ಪ್ರಾರಂಭಿಸಲಾಗುವುದು ಎಂದು ನೂತನ ಅಧ್ಯಕ್ಷ ಟಿ.ಆರ್.ರಂಗನಾಥ್ ಹೇಳಿದರು. ಈ ವೇಳೆ ನೂತನ ಅಧ್ಯಕ್ಷರನ್ನು ಉಪಾಧ್ಯಕ್ಷ ಸಿ.ಆನಂದ್ ಕುಮಾರ್, ನಿರ್ದೇಶಕರಾದ ಎನ್.ಆರ್.ಸುರೇಶ್, ಸಿ.ಎನ್.ಮಲ್ಲಿಕಾರ್ಜುನ್, ಟಿ.ಎಂ.ಮಂಜಣ್ಣ, ಟಿ.ಪಿ.ಮಹೇಶ್, ಎನ್.ಬಿ.ಶಿವಯ್ಯ, ಟಿ.ಎಲ್.ಕಾಂತರಾಜು, ವಿದ್ಯಾಕೃಷ್ಣ, ಅನುಸೂಯ, ಜಿ.ಕವಿತಾ ಸೇರಿದಂತೆ ಹಲವು ಗಣ್ಯರು ಅಭಿನಂದಿಸಿದರು.