ಟ್ಯಾಬ್ಲೋ ನಿರಾಕರಣೆ ಕನ್ನಡಿಗರಿಗೆ ಮಾಡಿರುವ ಅವಮಾನ: ಕೆ.ಎನ್‌. ರಾಜಣ್ಣ ಅಸಮಾಧಾನ

KannadaprabhaNewsNetwork |  
Published : Jan 11, 2024, 01:30 AM IST
ಸುದ್ದಿಗೋಷ್ಠಿಯಲ್ಲಿ ರಾಜಣ್ಣ | Kannada Prabha

ಸಾರಾಂಶ

ಕೇಂದ್ರ ಸರ್ಕಾರ ಗಣರಾಜ್ಯೋತ್ಸವದಲ್ಲಿ ಪ್ರದರ್ಶಿಸುವ ಕರ್ನಾಟಕದ ಸ್ತಬ್ಧಚಿತ್ರವನ್ನು ನಿರಾಕರಿಸಿದ್ದಕ್ಕೆ ಸಹಕಾರ ಸಚಿವ ಕೆ.ಎನ್‌. ರಾಜಣ್ಣ ಅಸಮಾಧಾನ

ಕನ್ನಡಪ್ರಭ ವಾರ್ತೆ ತುಮಕೂರು

ಗಣರಾಜ್ಯೋತ್ಸವ ಪರೇಡ್‌ನಲ್ಲಿ ಟ್ಯಾಬ್ಲೋ ನಿರಾಕರಣೆ ಮಾಡಿರುವುದು ಕನ್ನಡಿಗರಿಗೆ ಮಾಡಿರುವ ಘೋರ ಅವಮಾನ ಎಂದು ಸಹಕಾರ ಸಚಿವ ಕೆ.ಎನ್. ರಾಜಣ್ಣ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತುಮಕೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಗಣರಾಜ್ಯೋತ್ಸವ ಪೆರೇಡ್‌ನಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಟ್ಯಾಬ್ಲೋ ನಿರಾಕರಣೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ರಾಜಣ್ಣ ಅವರು ಕಳೆದ ವರ್ಷವೂ ಟ್ಯಾಬ್ಲೋನಲ್ಲಿ ನಾರಾಯಣ ಗುರುಗಳ ಭಾವಚಿತ್ರ ನಿರಾಕರಣೆ ಮಾಡಲಾಗಿತ್ತು. ಜನರು ಇದಕ್ಕೆ ಪ್ರತಿಕ್ರಿಯೆ ಸಹ ನೀಡಿದ್ದರು. ರಾಷ್ಟ್ರೀಯ ಹಬ್ಬಗಳಲ್ಲಿ ಸಮಾಜ ಸುಧಾಕರಿಗೆ ಅನ್ಯಾಯ ಮಾಡುತ್ತಿರುವುದನ್ನು ನೋಡುತ್ತಿದ್ದೇವೆ ಎಂದರು.

ಮುಂದಿನ ವರ್ಷಗಳಲ್ಲಿ ಗೋಡ್ಸೆ ಟ್ಯಾಬ್ಲೋ ಬಂದರೂ ಆಶ್ಚರ್ಯ ಪಡಬೇಕಾಗಿಲ್ಲ. ತಳಸಮುದಾಯದಿಂದ ಬಂದಿರುವ ಸಮಾಜ ಸುಧಾರಕ ನಿರಾಕರಣೆ ಮಾಡಿರುವುದು ಕನ್ನಡಿಗರಿಗೆ ಮಾಡಿರುವ ಘೋರ ಅಪಮಾನ ಎಂದರು.

ದಲಿತರ ಹೆಸರೇಳಿಕೊಂಡು ರಾಜಕಾರಣ ಮಾಡುತ್ತಿಲ್ಲ: ಕಾಂಗ್ರೆಸ್‌ ಪಕ್ಷ ದಲಿತರ ಹೆಸರೇಳಿಕೊಂಡು ರಾಜಕಾರಣ ಮಾಡುತ್ತಿಲ್ಲ. ಎಲ್ಲ ಬಡವರ ಪರವಾಗಿ ನಮ್ಮ ಸರ್ಕಾರ ಕೆಲಸ ಮಾಡುತ್ತಿದೆ. ಬಡವರು, ದಲಿತರು ಸೇರಿದಂತೆ ಎಲ್ಲ ವರ್ಗದ ಶೋಷಿತರವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಹೇಳಿಕೆಗೆ ತಿರುಗೇಟು ನೀಡಿದ ಸಚಿವ ಕೆ.ಎನ್. ರಾಜಣ್ಣ ಅವರು, ಕುಮಾರಸ್ವಾಮಿ ಯಾರ ಹೆಸರೇಳಿಕೊಂಡು ರಾಜಕಾರಣ ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದರು.

ನಾವು ಇನ್ನೊಬ್ಬರ ಕಡೆ ಒಂದು ಬೊಟ್ಟು ಮಾಡಿ ತೋರಿಸಿ ಟೀಕೆ ಮಾಡಿದರೆ ಇನ್ನು ಮೂರು ಬೊಟ್ಟುಗಳು ನಮ್ಮ ಕಡೆ ತೋರಿಸುತ್ತವೆ. ಇದನ್ನು ನಾವುಗಳು ಬೇರೆಯವರ ಬಗ್ಗೆ ಮಾತನಾಡುವ ಮುನ್ನ ಅರ್ಥ ಮಾಡಿಕೊಳ್ಳಬೇಕು ಎಂದರು.

ಕಾಂಗ್ರೆಸ್ ಪಕ್ಷಕ್ಕೆ ಮುದ್ದಹನುಮೇಗೌಡ, ಮಾಜಿ ಸಚಿವ ವಿ. ಸೋಮಣ್ಣ ಸೇರಿದಂತೆ ಯಾರೇ ಬಂದರೂ ಸ್ವಾಗತಿಸುತ್ತೇವೆ. ಆದರೆ ತುಮಕೂರು ಲೋಕಸಭಾ ಕ್ಷೇತ್ರಕ್ಕೆ ಅಭ್ಯರ್ಥಿ ಆಯ್ಕೆ ಮಾಡುವ ವಿಚಾರ ಅಂತಿಮವಾಗಿ ಹೈಕಮಾಂಡ್ ನಿರ್ಧಾರಕ್ಕೆ ಬಿಟ್ಟಿದ್ದೇವೆ ಎಂದರು.

ಮುದ್ದಹನುಮೇಗೌಡರು ಯಾವುದೇ ರಾಜಕೀಯ ವಿಚಾರದ ಬಗ್ಗೆ ಚರ್ಚೆ ಮಾಡಲು ನನ್ನನ್ನು ಭೇಟಿ ಮಾಡಿಲ್ಲ. ಬ್ಯಾಂಕ್‌ನಿಂದ ಸಾಲ ಪಡೆಯುವ ವಿಚಾರವಾಗಿ ಚರ್ಚಿಸಲು ಭೇಟಿ ಮಾಡಿದ್ದಾರೆ. ಇದಕ್ಕೆ ಯಾವುದೇ ರೀತಿಯ ರಾಜಕೀಯ ಲೇಪ ಬಳಿಯುವ ಅವಶ್ಯಕತೆ ಇಲ್ಲ ಎಂದರು.

ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಎಲ್ಲಿಯವರೆಗೆ ಶಾಸಕರ ಬೆಂಬಲ, ಹೈಕಮಾಂಡ್ ಆಶೀರ್ವಾದ ಇರುತ್ತದೆಯೋ ಅಲ್ಲಿಯವರೆಗೆ ಮುಖ್ಯಮಂತ್ರಿಯಾಗಿರುತ್ತಾರೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಮುಖ್ಯಮಂತ್ರಿಗಳಿಗೆ ಶಾಸಕರ ಬೆಂಬಲ, ಪಕ್ಷದ ಹೈಕಮಾಂಡ್ ಆಶೀರ್ವಾದ ಎಲ್ಲಿಯವರೆಗೆ ಇರುತ್ತದೋ ಅಲ್ಲಿಯವರೆಗೆ ಅವರೇ ಮುಖ್ಯಮಂತ್ರಿಗಳಾಗಿ ಇರುತ್ತಾರೆ ಎಂದರು.

3 ಡಿಸಿಎಂ ಬೇಡಿಕೆ: ಈಗಾಗಲೇ ಮೂರು ಡಿಸಿಎಂ ನೇಮಕದ ವಿಚಾರವನ್ನು ಪಕ್ಷದ ಉಸ್ತುವಾರಿ ಸುರ್ಜೇವಾಲಾ ಅವರ ಮುಂದೆ ಪ್ರಸ್ತಾಪ ಮಾಡಿದ್ದೇವೆ. ಇನ್ನು ಮುಂದೆ ಈ ಸಂಬಂಧ ಯಾರು ತೀರ್ಮಾನ ತೆಗೆದುಕೊಳ್ಳುತ್ತಾರೋ ಅವರ ಮುಂದೆ ಈ ವಿಚಾರ ಪ್ರಸ್ತಾಪ ಮಾಡಿದರೆ ಸೂಕ್ತ ಎನ್ನುವುದು ನನ್ನ ಭಾವನೆ ಎಂದರು. ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಮೂರು ಡಿಸಿಎಂ ಬೇಡಿಕೆ ವಿಚಾರ ಗೊತ್ತಿಲ್ಲ ಎಂದು ಹೇಳಿದ್ದಾರೆ ಎಂಬ ಪ್ರಶ್ನೆಗೆ, ಗೊತ್ತಿಲ್ಲ ಎಂದರೆ ಹೇಗೆ, ಎಲ್ಲ ಮಾಧ್ಯಮಗಳಲ್ಲಿ ಬಿತ್ತರವಾಗಿದೆ. ದೆಹಲಿಯಲ್ಲಿ ನಡೆಯುವ ಸಭೆಯಲ್ಲಿ ಮಲ್ಲಿಕಾರ್ಜುನ ಖರ್ಗೆ, ಸೋನಿಗಾಯಗಾಂಧಿ, ರಾಹುಲ್‌ಗಾಂಧಿಯವರ ಮುಂದೆ ಈ ವಿಚಾರದ ಬಗ್ಗೆ ಪ್ರಸ್ತಾಪ ಮಾಡುತ್ತೇವೆ. ನಂತರ ಅವರು ತೀರ್ಮಾನ ಕೈಗೊಳ್ಳುತ್ತಾರೆ ಎಂದರು.

ಮೂರು ಡಿಸಿಎಂ ನೇಮಕದ ವಿಚಾರಕ್ಕೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವಿರೋಧ ವ್ಯಕ್ತಪಡಿಸಿದ್ದಾರಲ್ಲಾ ಎಂಬ ಪ್ರಶ್ನೆಗೆ ಹೊಸದಾಗಿ ಆಗುವ ಡಿಸಿಎಂಗಳು ಡಿ.ಕೆ. ಶಿವಕುಮಾರ್ ಅವರ ಫೋರ್ಟ್ ಪೋಲಿಯೋ ಕಿತ್ತೊಳ್ತಾರಾ ಎಂದು ಪ್ರಶ್ನಿಸಿದರು.

ಮೂರು ಡಿಸಿಎಂ ನೇಮಕ ಬೇಡಿಕೆಗೆ ಯಾವ ಸಚಿವರೂ ವಿರೋಧ ಮಾಡಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ಕೊಬ್ಬರಿ ಬೆಲೆ 15 ಸಾವಿರ ರೂ.: ಕೇಂದ್ರ ಸರ್ಕಾರ ಮೊದಲು ಕ್ವಿಂಟಲ್ ಕೊಬ್ಬರಿಗೆ ಕೊಬ್ಬರಿ 12 ಸಾವಿರ ರು. ಬೆಲೆ ನೀಡಲಿ. ನಂತರ ರಾಜ್ಯ ಸರ್ಕಾರ 3 ಸಾವಿರ ಸೇರಿಸಿ ಕ್ವಿಂಟಲ್‌ಗೆ 15 ಸಾವಿರ ರು. ನೀಡುತ್ತದೆ ಎಂದರು.

ನಫೆಡ್ ಮೂಲಕ 15 ಸಾವಿರಕ್ಕೆ ರೈತರಿಂದ ಕೊಬ್ಬರಿ ಖರೀದಿಸಲು ಕೇಂದ್ರ ಸರ್ಕಾರ ಪ್ರಕ್ಯೂರ್‌ಮೆಂಟ್ ಮಾಡಲು ಅನುಮತಿ ನೀಡಬೇಕು. ಪ್ರಕ್ಯೂರ್‌ಮೆಂಟ್ ಮಾಡಿದರೆ ಕಳೆದ ಬಾರಿಯಂತೆ 15 ಸಾವಿರ ರು.ಗಳಿಗೆ ರೈತರಿಂದ ನಫೆಡ್ ಮೂಲಕ ಕೊಬ್ಬರಿ ಖರೀದಿ ನಡೆಯಲಿದೆ ಎಂದ ಅವರು ನಮ್ಮ ಸರ್ಕಾರ ಸದಾ ರೈತರು, ಬಡವರ ಪರವಾಗಿದೆ ಎಂದರು.

PREV

Recommended Stories

ದೇಶದ ನಾಯಕರಾಗಲು ಶಾಲೆಯಲ್ಲಿ ನಾಯಕತ್ವ ವಹಿಸಿಕೊಳ್ಳಿ
ಪರಿಷ್ಕೃತ ಜಿಎಸ್‌ಟಿ ಬಡ ಜನತೆಗೆ ಅನುಕೂಲ