ಲಕ್ಷ್ಮೇಶ್ವರ: ಪಟ್ಟಣದಲ್ಲಿ ಪ್ರತಿ ವಾರ್ಡ್ಗಳಲ್ಲಿಯೂ ಕುಡಿಯುವ ನೀರು ಪೂರೈಕೆಯಲ್ಲಿ ವಿಳಂಬವಾಗುತ್ತಿದ್ದು, ನೀರು ಪೂರೈಕೆಯನ್ನು ನಿರ್ವಹಣೆ ಮಾಡುವ ಸಿಬ್ಬಂದಿ ಸರಿಯಾಗಿ ಕೆಲಸ ಮಾಡದಿರುವ ಕುರಿತು ದೂರುಗಳಿದ್ದು, ಮುಖ್ಯಾಧಿಕಾರಿಗಳು ಅಂಥವರ ಮೇಲೆ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಶಾಸಕ ಡಾ. ಚಂದ್ರು ಲಮಾಣಿ ಅವರು ಮುಖ್ಯಾಧಿಕಾರಿ ಮಹಾಂತೇಶ ಬೀಳಗಿ ಅವರಿಗೆ ಸೂಚನೆ ನೀಡಿದರು.
ಪಟ್ಟಣದಲ್ಲಿ ನೀರು ಪೂರೈಕೆಯನ್ನು ನಿರ್ವಹಣೆ ಮಾಡುತ್ತಿರುವ ಸಿಬ್ಬಂದಿ ಸರಿಯಾಗಿ ನಿರ್ವಹಣೆ ಮಾಡದೆ ಇರುವ ಬಗ್ಗೆ ಎಲ್ಲ ಕಡೆಗಳಿಂದ ದೂರುಗಳು ಬರುತ್ತಿವೆ. ಕೆಲವರು ಮದ್ಯಪಾನ ಮಾಡಿ ಕೆಲಸಕ್ಕೆ ಹಾಜರಾಗಿರುತ್ತಾರೆ. ಆ ವೇಳೆ ಸರಿಯಾಗಿ ನೀರು ಪೂರೈಕೆ ಮಾಡಲು ವಿಫಲರಾಗುತ್ತಿದ್ದಾರೆ. ಇಂಥವರ ಮೇಲೆ ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳಿ ಎಂದು ಸೂಚನೆ ನೀಡಿದರು.
ಮೇವುಂಡಿಯಿಂದ ಪೂರೈಕೆಯಾಗುತ್ತಿರುವ ಕುಡಿಯುವ ನೀರು ಪೂರೈಸುವ ಪೈಪ್ಲೈನ್ಗಳು ಅಲ್ಲಲ್ಲಿ ಹಾಳಾಗಿರುವ ಕಾರಣ ಸಮಸ್ಯೆಗಳು ಎದುರಾಗುತ್ತಿದ್ದು, ಅಧಿಕಾರಿಗಲು ತಕ್ಷಣದಲ್ಲಿ ಹಾನಿಯಾಗಿರುವ ಸ್ಥಳವನ್ನು ದುರಸ್ತಿ ಮಾಡುವುದಕ್ಕೆ ಆದ್ಯತೆ ನೀಡಿ, ನೀರಿನ ವಾಲ್ವ್ಗಳು ಹಾಳಾಗಿದ್ದಲ್ಲಿ ಕೂಡಲೇ ಬದಲಿ ಮಾಡಿ, ಸೂರಣಗಿಯ ನೀರು ಶುದ್ಧೀಕರಣ ಘಟಕದಲ್ಲಿ ಮೋಟರ್ ದುರಸ್ತಿಗೆ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದರು.ಪದೇ ಪದೇ ಮೋಟರ್ ದುರಸ್ತಿ, ಪೈಪ್ಲೈನ್ ದುರಸ್ತಿ ಎಂದು ಜನರಿಗೆ ಕಾರಣ ಹೇಳಿ ನೀರು ಪೂರೈಕೆಯಲ್ಲಿ ವಿಳಂಬ ಮಾಡುವುದು ಬೇಡ. ಎಲ್ಲ ಸಿಬ್ಬಂದಿಯನ್ನು ಬಳಸಿಕೊಂಡು, ಇರುವ ಅನುದಾನದಲ್ಲಿ ಶೀಘ್ರದಲ್ಲಿ ದುರಸ್ತಿ ಕಾರ್ಯವನ್ನು ಕೈಗೊಂಡು ನೀರು ನಿರ್ವಹಣೆಯನ್ನು ಸರಿಯಾಗಿ ಹಾಗೂ ಕಡ್ಡಾಯವಾಗಿ ಕೈಗೊಳ್ಳಬೇಕು. ವಾರ್ಡ್ಗಳಿಗೆ ನಿತ್ಯ ಪೂರೈಕೆಯಾಗುವ ನೀರಿನ ಮಾಹಿತಿ, ಸಿಬ್ಬಂದಿ ಮಾಹಿತಿ ನೀಡಿ, ವ್ಯವಸ್ಥಿತವಾಗಿ ನೀರು ನಿರ್ವಹಣೆ ಕೈಗೊಂಡಲ್ಲಿ ಕನಿಷ್ಠ ಪಕ್ಷ ೧೨- ೧೫ ದಿವಸಗಳಿಗೊಮ್ಮೆಯಾದರೂ ನೀರು ಪೂರೈಸಬಹುದು. ಇದಕ್ಕೆ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಇದನ್ನು ನಿರ್ಲಕ್ಷಿಸಿದರೆ ಕ್ರಮಕ್ಕೆ ಸೂಚಿಸಲಾಗುವುದು ಎಂದರು.ಪಟ್ಟಣದಲ್ಲಿ ಕಸ ನಿರ್ವಹಣೆ ವ್ಯವಸ್ಥೆಯು ಸಹ ಸರಿಯಾಗಿ ನಡೆಯುತ್ತಿಲ್ಲ. ಕಸ ಸಂಗ್ರಹಣೆ ವಾಹನಗಳು ಸರಿಯಾಗಿ ಕಸ ಸಂಗ್ರಹಣೆಗೆ ವಾರ್ಡ್ಗಳಿಗೆ ತೆರಳುತ್ತಿಲ್ಲ ಎನ್ನುವ ದೂರುಗಳನ್ನು ಪದೇ ಪದೇ ಕೇಳುವಂತಾಗಿದ್ದು, ಇದನ್ನು ಮುಖ್ಯಾಧಿಕಾರಿಗಳು ಸಂಬಂಧಿಸಿದ ಅಧಿಕಾರಿಯೊಂದಿಗೆ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಬೇಕು ಎಂದು ನಿರ್ದೇಶಿಸಿದರು.